ಕಾಗ್ರಿಲ್ ವಿಜಯೋತ್ಸವಕ್ಕೆ 25ರ ಸಂಭ್ರಮ – ಪುತ್ತೂರಿಗೆ ಪ್ರಥಮ ಬಾರಿಗೆ ಆಗಮಿಸಲಿದ್ದಾರೆ ಪರಮವೀರ ಚಕ್ರ ಪುರಸ್ಕೃತ ಕ್ಯಾ| ಯೋಗೀಂದ್ರ ಸಿಂಗ್ ಯಾದವ್

0

ಜು.19: ಅಮರ್ ಜವಾನ್ ಜ್ಯೋತಿ ಸ್ಮಾರಕ ಬಳಿಯ ಕಿಲ್ಲೆ ಮೈದಾನದಲ್ಲಿ ಕಾರ್ಗಿಲ್ ವಿಜಯೋತ್ಸವ

ಪುತ್ತೂರು: 24 ಗಂಟೆಯು ಜ್ಯೋತಿ ಬೆಳಗುತ್ತಿರುವ ದಕ್ಷಿಣ ಭಾರತದ ಏಕೈಕ ಯೋಧ ಸ್ಮಾರಕವಾಗಿರುವ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕ ಸಂರಕ್ಷಣಾ ಸಮಿತಿ ಮತ್ತು ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಜು.19ಕ್ಕೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಕಾರ್ಗಿಲ್ ಹೋರಾಟದಲ್ಲಿ ಪಾಕಿಸ್ಥಾನಕ್ಕೆ ಸಿಂಹಸ್ವಪ್ನರಾದ ಪರಮವೀರಚಕ್ರ ಪುರಸ್ಕೃತ ಕ್ಯಾ| ಯೋಗೀಂದ್ರ ಸಿಂಗ್ ಯಾದವ್ ಮತ್ತು ಯುದ್ಧದಲ್ಲಿ ಪಾಲ್ಗೊಂಡ ಕರ್ನಾಟಕದ ಮತ್ತೋರ್ವ ಯೋಧ ಕ್ಯಾ| ನವೀನ್ ನಾಗಪ್ಪ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಮತ್ತು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ ಪ್ರತಿ ವರ್ಷ ಅನ್ಯಾನ್ಯ ಸಂಘಟನೆಗಳ ಸಹಕಾರದೊಂದಿಗೆ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸ್ವಾತಂತ್ರ್ಯೋತ್ಸವ, ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದು, ಇಂತಹ ಕಾರ್ಯಗಳಿಗೆ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳೇ ಮೊದಲಾದ ಸಂಘ ಸಂಸ್ಥೆಗಳು ಕೈಜೋಡಿಸುತ್ತಾ ಬಂದಿವೆ. ಪ್ರಸ್ತುತ ವರ್ಷ ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತೈದರ ಸಂಭ್ರಮದ ಹಿನ್ನಲೆಯಲ್ಲಿ ಕಾರ್ಗಿಲ್ ಹೋರಾಟದಲ್ಲಿ ಕೆಚ್ಚೆದೆಯನ್ನು ಪ್ರದರ್ಶಿಸಿ, ಪಾಕಿಸ್ಥಾನಕ್ಕೆ ಸಿಂಹಸ್ವಪ್ನರಾಗಿ ಕಾಡಿದ ಯೋಧ ಕ್ಯಾ| ಯೋಗೀಂದ್ರ ಸಿಂಗ್ ಯಾದವ್ ಅವರನ್ನು ಆಹ್ವಾನಿಸಲಾಗಿದೆ. ಅವರು ಯುದ್ಧದಲ್ಲಿ ಘಟಕ್ ಪ್ಲಾಟೂನ್ ಕಮಾಂಡೊ ಪಡೆಯ ನಾಯಕತ್ವ ವಹಿಸಿಕೊಂಡು ತನ್ನ ದೇಹಕ್ಕೆ 17 ಗುಂಡುಗಳು ತಗಲಿದರೂ ಹಠ ಬಿಡದೆ ಪಾಕಿಸ್ಥಾನದ ಮೂರು ಬಂಕರ್‌ಗಳನ್ನು ವಶಪಡಿಸಿಕೊಂಡು ಸಾಹಸ ಮೆರೆದವರು. ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಪರಮೀರ ಚಕ್ರ ಪಡೆದವರೊಬ್ಬರು ಪುತ್ತೂರಿಗೆ ಪ್ರಥಮ ಬಾರಿಗೆ ಬರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಅದೇ ರೀತಿ ಯುದ್ಧದಲ್ಲಿ ಸಾಹಸ ತೋರಿದ ಇನ್ನೋರ್ವ ಅಪ್ರತಿಮ ವೀರ ಯೋಧ ತನ್ನೆರಡು ಕಾಲು ಕಳೆದು ಕೊಂಡ ಮಡಿಕೇರಿ ಮೂಲದ ಕ್ಯಾ| ನವೀನ್ ನಾಗಪ್ಪ ಅವರು ಕೂಡಾ ಪುತ್ತೂರಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ನಿಜವಾಗಿಯೂ ಜು.26ಕ್ಕೆ ಕಾರ್ಗಿಲ್ ವಿಜಯೋತ್ಸವ ಆಗಿದ್ದರೂ ಕ್ಯಾ| ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಆ ದಿನ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಜು.19ಕ್ಕೆ ಪುತ್ತೂರಿನಲ್ಲಿ ನಡೆಸಲಾಗುವುದು ಎಂದವರು ಹೇಳಿದರು.


ದರ್ಬೆಯಿಂದ ಬೃಹತ್ ಮೆರವಣಿಗೆ:
ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ದರ್ಬೆಯಿಂದ ಬೆಳಿಗ್ಗೆ ಗಂಟೆ 9.30ಕ್ಕೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಈ ಸಂದರ್ಭ ಕ್ಯಾ| ಯೋಗೀಂದ್ರ ಸಿಂಗ್ ಯಾದವ್ ಮತ್ತು ಕ್ಯಾ| ನವೀನ್ ನಾಗಪ್ಪ ಅವರನ್ನು ತೆರೆದ ವಾಹನದಲ್ಲಿ ಸ್ವಾಗತಿಸಲಾಗುವುದು. ಮೆರವಣಿಗೆ ಯುದ್ಧಕ್ಕೂ ವೀರ ಯೋಧರಿಗಿಬ್ಬರಿಗೂ ಸಾರ್ವಜನಿಕರಿಂದ, ವ್ಯಾಪಾರಸ್ಥರಿಂದ ಮಾಲಾರ್ಪಣೆ, ಪುಷ್ಪಾರ್ಚಣೆಗೆ ಅವಕಾಶವಿದೆ. ಮೆರವಣಿಗೆಯಲ್ಲಿ ದೇಶದ ಮಿಲಿಟರಿ ಶಕ್ತಿಯ ಅನಾವರಣದ ಟ್ಯಾಬ್ಲೋಗಳು ಸಾಗಿ ಬರಲಿದೆ. ಅಂತಿಮವಾಗಿ ಕಿಲ್ಲೆ ಮೈದಾನದಲ್ಲಿ ಬೃಹತ್ ಸಮಾಗಮ ನಡೆಯಲಿದ್ದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಎದುರು ಭವ್ಯ ವೇದಿಕೆ ಸಿದ್ದಗೊಳ್ಳಲಿದೆ. ಮೆರವಣಿಗೆ ಸಂದರ್ಭ ಪುತ್ತೂರಿನ ವ್ಯಾಪಾರಸ್ಥರು ವಿಜಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸುಬ್ರಹ್ಮಣ್ಯ ನಟ್ಟೋಜ ಅವರು ವಿನಂತಿಸಿದ್ದಾರೆ. ಕಿಲ್ಲೆ ಮೈದಾನದಲ್ಲಿ ನಡೆಯುವ ಸಮಾಗಮದಲ್ಲಿ ಸುಮಾರು 3 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದರು. ಆ ದಿನ ಮಾಜಿ ಸೈನಿಕರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಅಂಬಿಕಾ ಸಂಸ್ಥೆಯ ವತಿಯಿಂದ ಭೋಜನದ ವ್ಯವಸ್ಥೆಯನ್ನ ಮಾಡಲಾಗುತ್ತಿದೆ ಎಂದರು.


ಕಾರ್ಗೀಲ್ ವೀರ ಯೋಧರಿಬ್ಬರಿಗೆ ವಿದ್ಯಾರ್ಥಿಗಳಿಂದ ಆಧುನಿಕ ಶಸ್ತ್ರಾಸ್ತ್ರದ ಮಾದರಿ ಕೊಡುಗೆ:
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕ್ಯಾ| ಯೋಗೀಂದ್ರ ಸಿಂಗ್ ಯಾದವ್ ಮತ್ತು ಕ್ಯಾ| ನವೀನ್ ನಾಗಪ್ಪ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಭಾಗವಹಿಸಬೇಕೆಂದು ಮನವಿ ಮಾಡಿದ್ದೇವೆ. ಶಾಸಕರಲ್ಲೂ ಮತ್ತು ಕಾಂಗ್ರೆಸ್ ಧುರೀಣರಲ್ಲೂ ಪ್ರಸ್ತಾಪ ಮಾಡಿದಾಗ ನಾವೆಲ್ಲ ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಪುತ್ತೂರು ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ನಗರಸಭೆ ಆಯುಕ್ತ ಮಧು ಎಸ್ ಮನೋಹರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಯೋಧರಿಬ್ಬರಿಗೆ ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆಧುನಿಕ ಶಸ್ತ್ರಾಸ್ರದ ಮಾದರಿಯನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದ್ದಾರೆ.


ಕಾರ್ಯಕ್ರಮದ ಸಲುವಾಗಿ ಭಾಷಣ, ದೇಶಭಕ್ತಿಗೀತೆ ಸ್ಪರ್ಧೆ
ಕಾರ್ಗಿಲ್ ವಿಜಯೋತ್ಸವದ ಸಲುವಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿಯಾಗಿ ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಹಾಗು ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು, ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂ.5ಸಾವಿರ ಮತ್ತು ದ್ವಿತೀಯ ಬಹುಮಾನ ರೂ. 3ಸಾವಿರವನ್ನು ನೀಡಲಾಗುತ್ತಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದರು.


ಮಾಜಿ ಸೈನಿಕರು ಸಮವಸ್ತ್ರದಲ್ಲಿ ಭಾಗವಹಿಸುವಂತೆ ವಿನಂತಿ:
ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿದ ಕ್ಯಾ| ಯೋಗೇಂದ್ರ ಸಿಂಗ್ ಯಾದವ್ ಮತ್ತು ಕ್ಯಾ| ನವೀನ್ ನಾಗಪ್ಪ ಅವರನ್ನು ಗೌರವಿಸುವುದು ಪುತ್ತೂರಿನ ನಾಗರಿಕರಾದ ನಮ್ಮ ಕರ್ತವ್ಯ. ಕಾರ್ಯಕ್ರಮದಲ್ಲಿ ಪುತ್ತೂರು ಮಾತ್ರವಲ್ಲದೆ ಮಡಿಕೇರಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾಜಿ ಸೈನಿಕರು ಭಾಗವಹಿಸಲಿದ್ದಾರೆ. ಮಾಜಿ ಸೈನಿಕರು ಸಮವಸ್ತ್ರದಲ್ಲೇ ಭಾಗವಹಿಸುವಂತೆ ವಿನಂತಿ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಮ್.ಕೆ.ನಾರಾಯಣ ಭಟ್ ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸೈನಿಕ ಭವನದ ಟ್ರಸ್ಟ್ ಅಧ್ಯಕ್ಷ ಜೋ ಡಿಸೋಜ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here