ಕೆಎಸ್‌ಆರ್‌ಟಿಸಿ ಮಜ್ದೂರು ಸಂಘದ ಮಹಾಸಭೆ

0

ಪುತ್ತೂರು: ಮಡಿಕೇರಿ, ಸುಳ್ಯ, ಪುತ್ತೂರು, ಬಿ.ಸಿ.ರೋಡ್ ಮತ್ತು ಧರ್ಮಸ್ಥಳ ವ್ಯಾಪ್ತಿಯನ್ನು ಒಳಗೊಂಡ ಕೆಎಸ್‌ಆರ್‌ಟಿಸಿ ಮಜ್ದೂರು ಸಂಘ ಪುತ್ತೂರು ವಿಭಾಗದ ೨೦೨೩-೨೪ರ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಜು.25ರಂದು ಪುತ್ತೂರಿನ ಸೈನಿಕರ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕ ಬಂಧುಗಳ ಉದ್ಯೋಗ ಅಭದ್ರತೆ, ಸರಕಾರದಿಂದ ಸಿಗುವ ಸೌಲಭ್ಯಗಳಲ್ಲಿ ತಾರತಮ್ಯ ಇನ್ನಿತರ ಸಮಸ್ಯೆಗಳ ಕುರಿತು ಸರಕಾರದ ಕಣ್ಣು ತೆರೆಸಿ ನಿಗಮ ಮತ್ತು ಸರಕಾರದ ವತಿಯಿಂದ ಎಲ್ಲಾ ನೆರವು, ಸೌಲಭ್ಯ, ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.


ಬಿಎಂಎಸ್ ಜಿಲ್ಲಾಧ್ಯಕ್ಷರಾದ ವಕೀಲ ಅನಿಲ್ ಕುಮಾರ್ ಯು. ಮಾತನಾಡಿ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕ ವರ್ಗದವರ ನೋವುಗಳ ಅರಿವು ಸಂಘಕ್ಕೆ ಸದಾ ಇದೆ. ದುಡಿಯುವ ಬಂಧುಗಳಿಗೆ ನಿಗಮದ ಕಡೆಯಿಂದ ಆಗುವ ಉದ್ಯೋಗದ ಅಭದ್ರತೆ, ಸರಕಾರದಿಂದ ಸಿಗುವ ಸೌಲಭ್ಯಗಳಲ್ಲಿನ ತಾರತಮ್ಯ, ಮಿತಿ ಮೀರಿದ ಕೆಲಸದ ನಿರ್ವಹಣೆ, ಓವರ್ ಟೈಮ್ ಕೆಲಸಕ್ಕೆ ಸಿಗುವ ಹೆಚ್ಚುವರಿ ಸಂಬಳದಲ್ಲಿ ಹೆಚ್ಚಳವಾಗದೇ ಇರುವುದು, ಸಂಬಳ ಏರಿಕೆಯಾಗದೇ ಇರುವುದು, ದಿನದ ಅಂತಿಮ ಬಸ್ ನಿಲುಗಡೆಯ ಸ್ಥಳದಲ್ಲಿ ನೌಕರರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯದ ಕೊರತೆ ಇರುವುದು, ಆಕಸ್ಮಿಕ ತೊಂದರೆಗಳು ಆದಾಗ ಅದಕ್ಕೆ ಬೇಕಾದ ಸೌಲಭ್ಯಗಳ ಕೊರತೆ ಇರುವುದು, ಹೊಸ ನೇಮಕಾತಿಯಲ್ಲಿ ವಿಳಂಬ ನೀತಿ ಮಾಡುತ್ತಿರುವುದು ಮುಂತಾದ ವಿಚಾರಗಳಲ್ಲಿ ನಿಗಮ ಅನುಸರಿಸುತ್ತಿರುವ ಧೋರಣೆಯನ್ನು ನಮ್ಮ ಸಂಘ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಈ ಬೇಡಿಕೆಗಳನ್ನು ಪಡೆದುಕೊಳ್ಳಲು ನಾವು ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದು ಹೇಳಿದರು.

ಬಜರಂಗದಳದ ಮುಖಂಡ ಮುರಳಿಕೃಷ್ಣ ಹಂಸತಡ್ಕರವರು ಶುಭ ಹಾರೈಸಿದರು. ಬಿಎಂಎಸ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್‌ನಾಥ್ ಬೆಳ್ತಂಗಡಿ ಮತ್ತು ಪುತ್ತೂರು ರಿಕ್ಷಾ ಯೂನಿಯನ್ ಅಧ್ಯಕ್ಷ ರಾಜೇಶ್ ಮರೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಮಜ್ದೂರು ಸಂಘದ ನೂತನ ಅಧ್ಯಕ್ಷರಾದ ವಕೀಲ ಶ್ರೀಗಿರೀಶ್ ಮಳಿ ಎಲ್ಲರ ಸಹಕಾರ ಕೋರಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ವಾರ್ಷಿಕ ವರದಿ ವಾಚಿಸಿ ನೂತನ ಪ್ರಧಾನ ಕಾರ್ಯದರ್ಶಿ ಸಂಜೀವ ಗೌಡರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಸಂಘದ ಹಿರಿಯ ಮುಖಂಡ ವೆಂಕಟ್ರಮಣ ಭಟ್ ಸ್ವಾಗತಿಸಿ, ಹಿರಿಯರಾದ ಬಾಲಕೃಷ್ಣ ಡಿ ಪ್ರಸ್ತಾವನೆಗೈದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ವಂದಿಸಿದರು.

LEAVE A REPLY

Please enter your comment!
Please enter your name here