ಪದಗಳಿಗೆ ಸಿಲುಕಲ್ಲ: ಅನುಭವಿಸಲಿಕಷ್ಟೇ ಸಾಧ್ಯ: ಕೃಷ್ಣ ಶೆಣೈ
ಉಪ್ಪಿನಂಗಡಿ: 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಭಗವಂತನ ಕೃಪೆ ದೊರೆತ್ತಿರುವುದೇ ಪವಾಡದಂತಿತ್ತು. ಮೌನಿ ಅಮವಾಸ್ಯೆಯ ದಿನವೂ ಸೇರಿದಂತೆ ಸತತ 5 ದಿನಗಳ ಕಾಲ ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುವ ಸೌಭಾಗ್ಯ ದೊರಕಿದ ಬಳಿಕ ಬದುಕಿನಲ್ಲಿ ವರ್ಣಾನಾತೀತ ಅನುಭವವನ್ನು ಪಡೆದೆವು ಎಂಬುದು ತನ್ನ ತಂಡದೊಂದಿಗೆ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಉಪ್ಪಿನಂಗಡಿಯ ಕೃಷ್ಣ ಶೆಣೈಯವರ ಮನದಾಳದ ಮಾತು.
![](https://puttur.suddinews.com/wp-content/uploads/2025/02/kumbha-mela-1.jpg)
ಉದ್ಯಮಿಗಳಾದ ವಸಂತ ಕುಮರ್ ಎಂ.ಪಿ., ಕಾರ್ತಿಕ್ , ಶೀನಪ್ಪ ಗೌಡ ನೂಜಿಬಾಳ್ತಿಲ, ಪ್ರಸನ್ನ ನಾಯ್ಕ್ ಕೊಕ್ಕಡ, ಗೌತಮ್ ಭಟ್ ಉಪ್ಪಿನಂಗಡಿ, ಧರ್ಮಸ್ಥಳದ ಅರ್ಚಕರಾದ ಶಿವಪ್ರಸಾದ್ ಭಟ್ ಕೊಕ್ಕಡ, ಉದಯ ಗೌಡ ಚಾರ್ಮಾಡಿಯವರನ್ನೊಳಗೊಂಡ ಏಳು ಮಂದಿಯ ತಂಡದ ನೇತೃತ್ವ ವಹಿಸಿದ್ದ ಕೃಷ್ಣ ಶೆಣೈಯವರು, ಮಹಾ ಕುಂಭಮೇಳಕ್ಕೆ ಹೋಗಬೇಕೆಂಬ ಕನಸು ನಮಗೆಲ್ಲಾ ಇತ್ತು. ಆದರೆ ವಿಮಾನಯಾನ ದರ ಅದಾಗಲೇ ಗಗನಕ್ಕೇರತೊಡಗಿದ್ದ ದಿನಗಳು. ಅದೊಂದು ದಿನ ಪರಿಶೀಲಿಸಿದಾಗ ನಾಲ್ಕು ಸಾವಿರಕ್ಕೆ ವಿಮಾನ ಟಿಕೇಟ್ ಲಭಿಸತೊಡಗಿತ್ತು. ನಮ್ಮ ಬಳಿ ಇದ್ದ ಆತ್ಮೀಯರ ಆಧಾರ್ ಕಾರ್ಡ್ ಬಳಸಿ 5 ಟಿಕೇಟ್ ಬುಕ್ ಮಾಡಿದ್ದೆ. ಬಳಿಕ ಜೊತೆಗಾರರನ್ನು ಸಂಪರ್ಕಿಸಿ ತಿಳಿಸಿದಾಗ ಅವರೆಲ್ಲರ ಒಪ್ಪಿಗೆ ದೊರೆಯಿತು. ತಂಡದ 5 ಮಂದಿ ವಿಮಾನದಲ್ಲಿ ಪ್ರಯಾಣಿಸಿದೆವು. ಉಳಿದ ಮೂವರು ರೈಲಿನಲ್ಲಿ ಬಂದು ಜೊತೆ ಸೇರಿದರು. ಜನವರಿ 23 ರಂದು ಕಾಶಿ ಕ್ಷೇತ್ರ ಸಂದರ್ಶನ ಮಾಡಿ, ಜನವರಿ 24 ರಂದು ಅಯೋಧ್ಯಾ ನಗರಿಯನ್ನು ಸಂದರ್ಶಿಸಿದೆವು. ಜನವರಿ 25 ರಿಂದ ಜನವರಿ 30ರ ವರೆಗೆ ಪ್ರಯಾಗದಲ್ಲಿ ಠಿಕಾಣಿ ಹೂಡಿ ವಿವಿಧ ಅಖಾಡಗಳನ್ನು ಸಂದರ್ಶಿಸಿದೆವು. ಒಟ್ಟು ಅವಧಿಯಲ್ಲಿ ಮೂರು ದಿನಗಳಲ್ಲಿ ಮಾತ್ರ ವಿವಿಧ ಅಖಾಡಗಳ ಸಾಧು ಸಂತರುಗಳಿಗೆ ತ್ರಿವೇಣಿ ಸಂಗಮ ಸ್ಥಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ನಾನ ಮಾಡುವ ಅವಕಾಶ ಇದ್ದರೆ ಉಳಿದೆಲ್ಲಾ ದಿನಗಳಲ್ಲಿ ಈ ಸ್ಥಳಗಳಲ್ಲಿ ಸಾಮಾನ್ಯ ಜನರಿಗೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜನವರಿ 29 ರಂದು ಮೌನಿ ಅಮವಾಸ್ಯೆಯ ದಿನ ಸಂಭವಿಸಿದ ಕಾಲ್ತುಳಿತದ ಸಮಯದಲ್ಲಿ ನಾವು ಅಲ್ಲೇ ಇದ್ದರೂ ನಾವಿದ್ದ ಸ್ಥಳದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಒಂದು ನಿರ್ದಿಷ್ಠ ಸ್ಥಳದಲ್ಲಿ ಅಲ್ಲಿನ ವ್ಯವಸ್ಥೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಆ ದುರ್ಘಟನೆ ಸಂಭವಿಸಿತ್ತು. ಆದರೆ ತಕ್ಷಣದ ವ್ಯವಸ್ಥಿತ ಕಾರ್ಯಾಚರಣೆಯ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲಾಯಿತು. ಈ ಘಟನೆಯ ಬೆನ್ನಲ್ಲೇ ಸಾಧು ಸಂತರು ಅಖಾಡದ ಮೂಲಕ ತಾವು ಕೈಗೊಳ್ಳಬೇಕಾದ ಪವಿತ್ರ ಸ್ನಾನವನ್ನು ತಡೆಹಿಡಿದು ಪರಿಸ್ಥಿತಿಯನ್ನು ನಿಯಂತ್ರಿಸಲು ಆಡಳಿತದೊಂದಿಗೆ ಸಹಕರಿಸಿದ್ದು, ಅವರ ವಿಶಾಲ ಮನೋಭಾವವನ್ನು ಅನಾವರಣಗೊಳಿಸಿತ್ತು. ಯಾಕೆಂದರೆ ಮೌನಿ ಅಮವಾಸ್ಯೆಯ ದಿನದ ಪವಿತ್ರ ತೀರ್ಥ ಸ್ನಾನಕ್ಕಾಗಿ ಭಾರೀ ಸಿದ್ಧತೆಯನ್ನು ಪ್ರತಿಯೊಂದು ಅಖಾಡದಲ್ಲಿ ಮಾಡಲಾಗಿತ್ತು. ಆ ಎಲ್ಲಾ ಸಿದ್ಧತೆಯನ್ನು ಬದಿಗೊತ್ತಿ ಜನ ಸಾಮಾನ್ಯರ ಜೀವ ರಕ್ಷಣೆಗೆ ಅವರು ನೀಡಿದ ಒತ್ತು ಅವರ ಮೇಲಿನ ಭಕ್ತಿ ಗೌರವವನ್ನು ಇಮ್ಮಡಿಗೊಳಿಸಿತು. ತಾವಲ್ಲಿ ಐದು ದಿನಗಳಿದ್ದು, ಅಸಂಖ್ಯಾ ಭಕ್ತಗಣವನ್ನು ನಿಭಾಯಿಸುತ್ತಿದ್ದ ಅಲ್ಲಿನ ವ್ಯವಸ್ಥೆ, ಸ್ವಚ್ಚತೆ ಮತ್ತು ಸುರಕ್ಷತೆಗೆ ನೀಡುತ್ತಿದ್ದ ಆದ್ಯತೆ ಅಲ್ಲಿನ ಯೋಗಿ ಸರಕಾರವನ್ನು ಶ್ಲಾಘಿಸಲೇಬೇಕೆಂಬಂತ್ತಿತ್ತು ಎಂದಿದ್ದಾರೆ.
ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ಅಸಲಿತನ: ಮೌನಿ ಅಮವಾಸ್ಯೆಯ ದಿನದ ಕಾಲ್ತುಳಿತದಿಂದ ಒಂದಷ್ಟು ಮಂದಿ ಸಾವನ್ನಪ್ಪಿರುವುದು ನಿಜ. ಆದರೆ ಅಲ್ಲಿನ ಸುವ್ಯವಸ್ಥೆಯ ಫಲದಿಂದ ಇದು ಸಣ್ಣ ಪ್ರಮಾಣದ ಜೀವ ಹಾನಿಗೆ ಕಾರಣವಾಗಿರುವುದನ್ನು ಒಪ್ಪಲೇ ಬೇಕು. ಈ ಮಧ್ಯೆ ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಅವರ ಬಟ್ಟೆ ಬರೆ, ಚಪ್ಪಲಿಗಳು ಗುರುತು ಪತ್ರಗಳು ಅನಾಥವಾಗಿದೆ ಎಂಬೆಲ್ಲಾ ಸಚಿತ್ರ ವರದಿಗಳ ಸತ್ಯಾಸತ್ಯತೆ ಏನು ಎಂದು ಪ್ರಶ್ನಿಸಿದಾಗ, ಕುಂಭಮೇಳದಲ್ಲಿ ಭಾಗವಹಿಸುವವರ ಏಕೈಕ ಉದ್ದೇಶ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡುವುದಾಗಿದೆ. ಸ್ನಾನ ಮಾಡುವಾಗ ತಮ್ಮತಮ್ಮ ಬಟ್ಟೆ ಬರೆಗಳನ್ನು ಚಪ್ಪಲಿಗಳನ್ನು ಗುರುತು ಪತ್ರಗಳನ್ನು ದಡದಲ್ಲಿರಿಸಿ ನೀರಿಗಿಳಿಯುತ್ತಾರೆ. ಸ್ನಾನ ಮಾಡಿ ಮೇಲೆ ಬರುವಾಗ ಜನಜಂಗುಲಿಯಲ್ಲಿ ತಾವಿರಿಸಿದ ಸ್ಥಳದ ನೆಲೆ ಯಾವುದೆಂದು ತಿಳಿಯದೆ ಅದೆಲ್ಲವನ್ನೂ ಅಲ್ಲೆ ಬಿಟ್ಟು ಸಾಗುತ್ತಾರೆ. ಅಂತಹ ವಸ್ತುಗಳನ್ನು ಮುಂದಿರಿಸಿ ಕೆಲವೊಂದು ಮಾಧ್ಯಮದ ಮಂದಿ ಸಾವಿರಾರು ಜನರು ನಾಪತ್ತೆಯಾಗಿದ್ದಾರೆಂದು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಇದು ಇಲ್ಲಿನ ಅಸಲಿತನ. ಅದು ಬಿಟ್ಟು ಅಲ್ಲಿನ ವ್ಯವಸ್ಥೆ, ಭೋಜನ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಸುರಕ್ಷಾ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವ್ಯವಸ್ಥೆ ಎಲ್ಲವೂ ಅತ್ಯಧ್ಬುತ ಎಂಬ ಪದದಿಂದಲೇ ವಿವರಿಸಬೇಕಾಗುತ್ತದೆ ಎನ್ನುತ್ತಾರೆ ಕೃಷ್ಣ ಶೆಣೈಯವರು.
ನಾವಿದ್ದ ಐದು ದಿನಗಳಲ್ಲಿ ಒಬ್ಬನೇ ಒಬ್ಬ ಪೊಲೀಸ್ ಲಾಠಿಯನ್ನು ಹೊಂದಿರುವುದು ಕಾಣಿಸಲಿಲ್ಲ. ಕೈಯಲ್ಲಿ ವೈಯರ್ಲೆಸ್ ಸೆಟ್ ಮತ್ತು ಧ್ವನಿ ವರ್ಧಕದ ಸಾಧನ ಮಾತ್ರವೇ ಅವರ ಕೈಯಲ್ಲಿರುವುದನ್ನು ಕಂಡಿದ್ದೆವು. ಕೇವಲ ವಿನಂತಿ ಮಾತ್ರದಿಂದಲೇ ಅಷ್ಟು ಸಂಖ್ಯೆಯ ಭಕ್ತ ಸಮೂಹವನ್ನು ನಿಯಂತ್ರಿಸುತ್ತಿದ್ದದ್ದು ಆಶ್ಚರ್ಯವನ್ನು ಮೂಡಿಸಿತ್ತು. ಹಿಂತಿರುಗುವ ವೇಳೆಯಲ್ಲಿಯೂ ರೈಲ್ವೆ ನಿಲ್ದಾಣದಲ್ಲಿ ಕೂಡಾ ಆತ್ಮೀಯವಾದ ಸುರಕ್ಷತಾ ನೀತಿಯನ್ನು ಅಳವಡಿಸಿದ್ದು ಕಂಡು ಬಂದಿತ್ತು. ನಾವೆಲ್ಲರೂ ಪ್ರಯಾಗದಲ್ಲಿನ ಕಾಶಿ ಮಠದಲ್ಲಿ ಆಶ್ರಯವನ್ನು ಪಡೆದಿದ್ದ ಕಾರಣ ನಮಗೆಲ್ಲಾ ಊಟೋಪಚಾರ ಕಾಶಿಮಠದಲ್ಲೇ ನಡೆದಿತ್ತು. ಜನರನ್ನು ಮತ್ತು ವಾಹನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಂದೊಂದು ಬಾರಿ ಕಿ ಮೀ ಗಟ್ಟಲೆ ನಡೆಯಬೇಕಾಗಿ ಬರುತ್ತಿತ್ತು. ಪ್ರಯಾಗದಲ್ಲಿನ ಐದು ದಿನಗಳಲ್ಲಿ ನಮ್ಮ ಆ ಪರಿಸರದ ನಡಿಗೆ ನೂರು ಕಿ ಮೀ ದೂರವನ್ನು ದಾಟಿತ್ತು. ಕೋಟ್ಯಾಂತರ ಜನರು ಜಮಾಯಿಸಿದ್ದರೂ 5 ಜಿ ಮೊಬೈಲ್ ನೆಟ್ ವರ್ಕ್ ಅಭಾಧಿತವಾಗಿ ಲಭಿಸುತ್ತಿತ್ತು. ಎಂದು ವಿವರಿಸಿದ ಕೃಷ್ಣ ಶೆಣೈ, ಯಾವುದೇ ಆಮಂತ್ರಣವಿಲ್ಲದೆ ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತಾದಿಗಳನ್ನು ಸದ್ದಿಲ್ಲದೆ ಸೆಳೆಯುತ್ತಿರುವ ಕುಂಭಮೇಳದ ಅನುಭವ ಪದಗಳಿಗೆ ಸಿಲುಕದ್ದು. ಇದು ಅನುಭವಿಸಲಿಕ್ಕಷ್ಟೇ ಸಾಧ್ಯವಾಗುವ ಅದ್ಭುತ. ಅಲ್ಲಿನ ಪ್ರತಿಕ್ಷಣವೂ ಅಮೃತತ್ವವನ್ನು ಹೊಂದಿತ್ತು. ಅಲ್ಲಿನ ಆಡಳಿತವು ಗರಿಷ್ಠ ಸ್ಪಂದನ ತೋರಿದೆ ಎಂದು ಮುಕ್ತಕಂಠದಿಂದ ವ್ಯವಸ್ಥೆಯನ್ನು ಕೃಷ್ಣ ಶೆಣೈಯವರು ಶ್ಲಾಘಿಸಿದ್ದಾರೆ.