ಮಾ.1: ಪುತ್ತೂರು ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳ-ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ ವಿಶೇಷ

0

ವಿಜೇತ ಕೋಣಗಳಿಗೆ ಚಿನ್ನ, ಓಟಗಾರರಿಗೂ ಬಹುಮಾನ, ಮಾಲಕರಿಗೆ ಟ್ರೋಫಿ

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಮಾ.1 ರಂದು ತನ್ನ 32ನೇ ಸಂಭ್ರಮದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕೆ ಎಸ್ ಅವರ ಗೌರವ ಸಂಚಾಲಕತ್ವದಲ್ಲಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ಗೌರವ ಉಪಸ್ಥಿತಿಯಲ್ಲಿ ಇತಿಹಾಸ ಪ್ರಸಿದ್ಧ ತುಳುನಾಡ ಜಾನಪದ ಕ್ರೀಡೆಗಳಲ್ಲೊಂದಾದ ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ. ಈ ಬಾರಿ ವಿಶೇಷವಾಗಿ ಕಂಬಳದ ಕರೆಯಲ್ಲಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಲಿದೆ.


ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೀರ್ತಿಶೇಷ ಜಯಂತ ರೈ ಅಂದಿನ ಶಾಸಕಕರಾಗಿದ್ದ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವು 32 ವರ್ಷಗಳನ್ನು ಪೂರೈಸಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇವತ್ತು ದೇಶವಿದೇಶದಲ್ಲಿ ಕಂಬಳ ಜನಜನಿತವಾಗಿದೆ ಎಂದ ಅವರು ಈ ವರ್ಷ ಸುಮಾರು 175 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ನಮ್ಮ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಕೂಡಾ ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ. ಕಂಬಳದ ಉದ್ಘಾಟನೆಯನ್ನು ಶ್ರೀಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ನಮ್ಮ ಸಮಿತಿಯ ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಜೆ ಸಭಾ ಕಾರ್ಯಕ್ರಮ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್, ಗೃಹ ಸಚಿವ ಡಾ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಬೆಂಗಳೂರು ಎಂ.ಆರ್.ಜಿ ಗ್ರೂಪ್ಸ್‌ನ ಚೇರ್‌ಮೆನ್ ಪ್ರಕಾಶ್ ಶೆಟ್ಟಿ, ಮಂಡ್ಯ ವಿಧಾನಪರಿಷತ್ ಸದಸ್ಯ ರವಿ ಗಾಣಿಗ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿರರ ಗಣ್ಯರು ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆಯ ಸಮಾರಂಭದ ಬಳಿಕ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದವರು ಹೇಳಿದರು.


ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ. ಆರ್.ಬಿ.ಐ ಉತ್ತರ ವಲಯದ ಮಾಜಿ ನಿರ್ದೇಶಕ ಡಾ. ಅಗರಿ ನವೀನ್ ಭಂಡಾರಿ, ಕೃಷಿ ತಜ್ಞ ಸುರೇಶ್ ಬಲ್ನಾಡು, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ರೇ ವಿಜಯ ಹಾರ್ವಿನ್, ಸಾಲೆತ್ತೂರಿನ ಹೆಚ್.ಪಿ.ಆರ್ ಸನರ್ಸಿಂಗ್ ಕಾಲೇಜಿನ ಸಂಸ್ಥಾಪಕ ಹರಿಪ್ರಸಾದ್ ರೈ, ಕಂಬಳ ಕ್ಷೇತ್ರದಲ್ಲಿ ಮಹಮ್ಮದ್ ಕುಂಞಿ, ಬಾಳೆಪುಣಿ ಸಂಕ ಇದು ಕುಂಞಿ ಬ್ಯಾರಿ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿನ್ಸೆಂಟ್ ಪೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಗುವುದು ಎಂದು ಚಂದ್ರಹಾಸ ಶೆಟ್ಟಿಯವರು ತಿಳಿಸಿದರು.


ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ:
ಸಮಾರೋಪ ಸಮಾರಂಭವು ಫೆ.2ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ತಹಶೀಲ್ದಾರ್ ಪುರಂದರ ಸಹಿತ ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಲಿದ್ದಾರೆ. ಕಂಬಳದ ಬಗ್ಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರು ಹಾಗೂ ಇನ್ನಿತರ ಟಿ.ವಿ. ಮಾಧ್ಯಮದವರು ಆಗಮಿಸಿ ಕಂಬಳದ ಪ್ರಸಿದ್ಧಿಯನ್ನು ಹೆಚ್ಚಿಸಲಿದ್ದಾರೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.


ಚಲನಚಿತ್ರ ನಟ ನಟಿಯರು ವಿಶೇಷ ಆಕರ್ಷಣೆ:
ಅನೇಕ ಗಣ್ಯಾತಿಗಣ್ಯರು, ಖ್ಯಾತ ಚಲನ ಚಿತ್ರ ನಟ-ನಟಿಯರು, ಬಿಗ್ ಬಾಸ್ ವಿಜೇತರು ವಿಶೇಷ ಆಕರ್ಷಣೆಯಲ್ಲಿರುತ್ತಾರೆ. ನಟಿ, ನಿರೂಪಕಿಯಾಗಿರುವ ಅನುಶ್ರೀ, ಬಿಗ್‌ಬಾಸ್ 11ರ ವಿಜೇತ ಹನುಮಂತ್, ಬಿಗ್‌ಬಾಸ್ ಸ್ಪರ್ಧಿ ಧನರಾಜ್ ಆಚಾರ್ಯ, ನಟಿ ರಚನಾ ರೈ, ಖ್ಯಾತ ನಟ ಲೂಸ್ ಮಾದ ಯೋಗಿ, ಬಿಗ್ ಬಾಸ್ ಸ್ಪರ್ಧಿ ಉಗ್ರ ಮಂಜು, ನಟ ಗಗನ್ ಚಿನ್ನಪ್ಪ, ನಿರ್ದೇಶಕ ಸುಖೇಶ್ ಶೆಟ್ಟಿ, ಖ್ಯಾತ ನಟಿ ರಚಿತಾ ರಾಮ್ ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ಅನೇಕ ಮಾಧ್ಯಮದ ಮಿತ್ರರು, ಟಿ.ವಿ.ಮಾಧ್ಯಮದವರೂ ಜೊತೆಯಲ್ಲಿ ಇರಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.


ಕಂಬಳದ ಕೋಣದ ಮಾಲಕರಲ್ಲಿ ಮನವಿ:
ಕೋರ್ಟು ಆದೇಶದಂತೆ ಆಹಿಂಸಾತ್ಮಕವಾಗಿ ಕಂಬಳವನ್ನು ಆಚರಿಸಲು, ಕಂಬಳಕ್ಕೆ ಭಾಗವಹಿಸುವ ಕೋಣಗಳ ಮಾಲಕರ ಶಾಂತಿ, ಸಹಕಾರದ ನಡವಳಿಕೆಗಳು ಪೂರಕವಾಗಲಿದೆ. ತನು-ಮನ-ಧನದ ಸಹಕಾರ ನೀಡಿರುವ ಕಂಬಳಾಭಿಮಾನಿ ಬಂಧುಗಳ ಅಭಿಮಾನದ ಸ್ಮರಣೆ, ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡುತ್ತೀರುವ ಎಲ್ಲರ ಸಹಕಾರವನ್ನು ಮನಪೂರ್ವಕ ಸ್ಮರಿಸುತ್ತಾ ಈ ವರ್ಷವೂ ಸಹಕಾರದ ಭರವಸೆಯ ಆಶಯವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.


ಹಲವು ಸೌಲಭ್ಯ:
ಕಂಬಳಕ್ಕೆ ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಟ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೇ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ. ಉತ್ತಮ ಕರೆ ನಿರ್ಮಾಣ, ಕರೆಗೆ ಶುದ್ಧ ನೀರಿನ ವ್ಯವಸ್ಥೆ, ಸುಸಜ್ಜಿತ ಸ್ಟಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ, ವರ್ಷಕ್ಕೊಂದು ಹೊಸತನ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದ್ದು, ಜಾತಿ ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಮತ್ತೂರು ಕಂಬಳವನ್ನು ಯಶ್ವಸಿಗೊಳಿಸುವ ನಿಟ್ಟಿನಲ್ಲಿ ಅವಿತರ ಶ್ರಮ ದುಡಿಯುವ ನೂರಾರು ಕೆಂಪು ಮುಂಡಾಸಿನ ಸ್ವಯಂ ಸೇವಕರ ತಂಡವಿದ್ದು ಕೋಟಿಚೆನ್ನಯ ಜೋಡುಕರೆ ಸಮಿತಿಯ ಸದಸ್ಯರ ಅಪಾರ ಸೇವೆಯು ಕಂಬಳ ನಡೆಯಲು ಸಹಕಾರಿಯಾಗಿದೆ ಎಂದು ಚಂದ್ರಹಾಸ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ಕೆ.ವಸಂತ ಕುಮಾರ್ ರೈ ದುಗ್ಗಳ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

ಕಂಬಳದ ಕರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ
ಕಂಬಳ ಕೋಣಗಳ ಜತೆಗೆ ಓಡುವ ಓಟಗಾರರ ನೈಪುಣ್ಯತೆ ಹೆಚ್ಚಿಸಲು ಈ ಬಾರಿ ಕೆಸರುಗದ್ದೆ ಓಟವನ್ನು ಆಯೋಜಿಸಲಾಗಿದೆ. ಓಟಗಾರರು ಸಿದ್ಧತೆ ಮಾಡುವ ನಿಟ್ಟಿನಲ್ಲಿ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಲಿದೆ. ಕೆಸರುಗದ್ದೆಯಲ್ಲಿ ಓಡುವವರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಎರಡು ಕರೆಯಲ್ಲಿ ತಲಾ 4 ಮಂದಿ ಓಡುವಂತೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆಯನ್ನು ಮಧ್ಯಾಹ್ನ 12ಕ್ಕೆ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಪಾಪ್ಯುಲರ್ ಸ್ವೀಟ್ಸ್‌ನ ಮಾಲಕ ನರಸಿಂಹ ಕಾಮತ್, ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ದಯನಂದ ರೈ ಕೋರ್ಮಂಡ, ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಕಾವು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 8ಕ್ಕೆ ಕೆಸರು ಗದ್ದೆ ಓಟದ ಬಹುಮಾನ ವಿತರಣೆ ನಡೆಯಲಿದೆ. ಉದ್ಯಮಿ ಉಮೇಶ್ ನಾಡಾಜೆ, ಅಂತರಾಷ್ಟ್ರೀಯ ಕ್ರೀಡಾಪಟು ಅಬಿಷೇಕ್ ಶೆಟ್ಟಿ, ಕಂಟ್ರಾಕ್ಟರ್ ಜಯಕುಮಾರ್ ನಾಯರ್ ಬಹುಮಾನ ವಿತರಣೆ ಸಂದರ್ಭ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಈಗಾಗಲೇ 124 ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ.
ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ

ವಿಜೇತ ಕೋಣಗಳಿಗೆ ಚಿನ್ನ, ಕೂಟದ ಓಟಗಾರರಿಗೂ ಬಹುಮಾನ, ಮಾಲಕರಿಗೆ ಟ್ರೋಪಿ
ಕಂಬಳಕ್ಕೆ ಆರು ವಿಭಾಗಗಳ ಕೋಣಗಳ ಭಾಗವಹಿಸಿದ್ದು, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು, ಹಿರಿಯ ವಿಭಾಗದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ (16ಗ್ರಾಂ), ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಯಜಮಾನರುಗಳಿಗೆ ಚಿನ್ನದೊಂದಿಗೆ ಕೋಟಿ ಚೆನ್ನಯ ಟ್ರೋಪಿ ನೀಡಿ ಗೌರವಿಸಲಾಗುವುದು ಎಂದು ಎನ್.ಚಂದ್ರಹಾಸ ಶೆಟ್ಟಿ ಹೇಳಿದರು.

ಸುಮಾರು 800 ವರ್ಷಗಳಿಂದಲೂ ಕಂಬಳ ಎನ್ನುವ ಕೋಣಗಳ ಓಟದ ಕ್ರೀಡೆಯು ಮೂಲತಃ ಒಂದು ಜಾನಪದ ಕಲೆ, ಹಳ್ಳಿಯ ಭೂ ಮಾಲಿಕ ಮತ್ತು ದುಡಿಯುವ ರೈತರ ನಡುವಿನ ಸಾಂಸ್ಕೃತಿಕ ಬೆಸುಗೆಯಲ್ಲಿ ಸಾಮರಸ್ಯಕ್ಕೆ ರಾಜಾಶ್ರಯ ನೀಡಿ ಪ್ರೋತ್ಸಾಹಿಸಿದ ರಾಜ ಮನೆತನ ನಮ್ಮ ಜಿಲ್ಲೆಯಲ್ಲಿದೆ. ದೇವರ ಕಂಬಳ, ರಾಜರ ಕಂಬಳ, ಭವಗಳ ಕಂಬಳ ನವೀನ ರೂಪ ಪಡೆದು ಸಾರ್ವಜನಿಕ ಕಂಬಳವಾಗಿ ರೂಪಗೊಳ್ಳುತ್ತಿದೆ.
ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ

ಅಶೋಕ್ ಕುಮಾರ್ ರೈ ಇದ್ದರೆ ನಮಗೆ ಧೈರ್ಯ
ಕಂಬಳದ ವಿಚಾರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಬಹಳ ಹೋರಾಟ ಮಾಡಿದವರು. ಕಳೆದ ಬಾರಿ ನಮ್ಮ ಕಂಬಳ ಮತ್ತು ಉಪ್ಪಿನಂಗಡಿ ಕಂಬಳಕ್ಕೆ ತಲಾ ರೂ.5ಲಕ್ಷ ಸರಕಾರದಿಂದ ಕೊಡಿಸಿದ್ದಾರೆ. ಈ ಬಾರಿ ಎಲ್ಲಾ ಕಡೆಯ ಕಂಬಳಗಳಿಗೂ ಅನುದಾನ ಸಿಗಲಿದೆ.
ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ

LEAVE A REPLY

Please enter your comment!
Please enter your name here