ಪುತ್ತೂರು:ಜೂ.8ರ ತನಕ ನಡೆಯುವ ಮೂರು ದಿನಗಳ, ಏಳನೇ ವರುಷದ ಹಲಸು-ಹಣ್ಣುಗಳ ಮೇಳಕ್ಕೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಜೂ.6ಕ್ಕೆ ಚಾಲನೆ ನೀಡಲಾಗಿದೆ.ನವತೇಜ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಮೇಳದ ಮಳಿಗೆಗಳನ್ನು ಬೆಳಗ್ಗೆ ಉದ್ಘಾಟಿಸಲಾಯಿತು.ಸಂಜೆ ಹಲಸಿನ ಹಣ್ಣು ತುಂಡು ಮಾಡಿ,ಹಲಸಿನ ಹಣ್ಣಿನಿಂದ ತಯಾರಿಸಿದ ಜಿಲೇಬಿ ಸವಿಯುವ ಮೂಲಕ ಮೇಳಕ್ಕೆ ಅಽಕೃತ ಚಾಲನೆ ಬಳಿಕ ನೀಡಲಾಯಿತು.
ಶ್ರೀಸಾಮಾನ್ಯನ ಹೃದಯದಿಂದ ಮೂಡಿ ಬಂದಿರುವ ಆಂದೋಲನ: ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರು ದಿಕ್ಸೂಚಿ ಭಾಷಣ ಮಾಡಿ, ಅಭಿಮಾನ ಹುಟ್ಟಲು ಶುರುವಾದಾಗ ಏನೆಲ್ಲ ಅಗುತ್ತದೆ ಎಂಬುದು ಬಹಳ ಕುಶಿ ಪಡುವ ವಿಚಾರ.ಹಲಸಿನ ಆಂದೋಲನ ನಡೆದು ಬಂದಿದ್ದರೆ ಅದರಲ್ಲಿ ಬಹುತೇಕ ನಮ್ಮ ನಿಮ್ಮಂತೆ ಶ್ರೀಸಾಮಾನ್ಯನ ಪಾತ್ರವೇ ದೊಡ್ಡದು ಹೊರತು ಇಲಾಖೆಗಳು, ಸರಕಾರಗಳು, ಐಸಿಆರ್ಗಳ ಬದಲು ಶ್ರೀಸಾಮಾನ್ಯನ ಹೃದಯದಿಂದ ಮೂಡಿ ಬಂದಿರುವ ಆಂದೋಲನವಾಗಿದೆ ಎಂದರು.ಇವತ್ತು ನಮ್ಮಲ್ಲಿರುವ ಸ್ಟಾರ್ಟಪ್ ಉದ್ದಿಮೆಗಳು, ಕೃಷಿಕುಟಂಬಗಳು ಮಾಡಬಹುದಾದ ಸಣ್ಣ ಮತ್ತು ಮಧ್ಯಮ ಹಲಸಿನ ಮೌಲ್ಯವರ್ಧನೆ ಕುರಿತ ಆರು ಉತ್ಪನ್ನಗಳ ಮಾಹಿತಿ ನೀಡಿದರು.ಅದರಲ್ಲಿ ಹಲಸಿನ ಹಣ್ಣಿನ ಪಲ್,ಹಪ್ಪಳ,ಗುಜ್ಜೆ,ಸಿದ್ದ ಆಹಾರ, ಪ್ರೋಸನ್ ಗುಜ್ಜೆ,ಹಲಸಿನ ಬೀಜದ ಹುಡಿ,-ಸ್ ಪ್ಯಾಕ್ಗಳ ಮಾಹಿತಿ ನೀಡಿದ ಅವರು,ಇವೆಲ್ಲಕ್ಕೂ ಪ್ರಯತ್ನ ಬೇಕು. ಹೋಮ್ ವರ್ಕ್ ಬೇಕು. ಮಾರುಕಟ್ಟೆ ನಿರ್ಮಿಸುವ ಗುರಿ ಇರಬೇಕು ಎಂದರು.
ಕೃಷಿ ಅಕಾಡೆಮಿ ಅಗತ್ಯವಿದೆ:
ಶ್ರೀ ಪಾರ್ವತಿ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಮತ್ತು ಮುಳಿಯ ಗೋಲ್ಡ್ ಆಂಡ್ ಡೈಮಂಡ್ನ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಇವತ್ತು ಹಲಸಿನಿಂದ ಹಲವು ಉತ್ಪನ್ನಗಳನ್ನು ಮಾಡಿ ಅದರಿಂದ ಯಶಸ್ಸು ಕಂಡವರಿದ್ದಾರೆ.ಇಂತಹ ಉತ್ಪಾದನೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ(ಎ.ಐ) ಕೂಡಾ ಸಂಶೋಧನೆ ಮಾಡುವ ಮೂಲಕ ತಾಂತ್ರಿಕತೆಯನ್ನು ಬಳಸುವಂತಾಗಬೇಕೆಂದರು.ಹಲಸಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿ.ಇದರ ಜೊತೆಗೆ ಕೃಷಿಯ ವಿಚಾರವಾಗಿ ಅಕಾಡೆಮಿ ಆಗಬೇಕು.ಅದಕ್ಕೊಂದು ಪಠ್ಯಕ್ರಮ ಇರಬೇಕೆಂದವರು ಹೇಳಿದರು.
ಹಲಸಿನ ಎಲ್ಲಾ ಉತ್ಪನ್ನಗಳಿಗೂ ಮೌಲ್ಯವಿದೆ: ಹಲಸಿನ, ಹಣ್ಣು ಮೇಳಕ್ಕೆ ಅಽಕೃತ ಚಾಲನೆ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಮಾತನಾಡಿ ಹಲಸಿಗೆ ಉತ್ತಮ ಮೌಲ್ಯವಿದೆ.ಅದನ್ನು ಯಾವ ರೀತಿಯಲ್ಲಿ ಕೊಂಡೊಯ್ಯಬೇಕೆಂದು ಚಿಂತನೆ ಮಾಡಬೇಕು.ನಮಗೆ ಹಲಸು ಬ್ರ್ಯಾಂಡ್ ಹೆಸರು ಮಾಡಿದ್ದು ಅಡಿಕೆ ಪತ್ರಿಕೆ.ಇವತ್ತು ಕೃಷಿ ಅಕಾಡೆಮಿ ಮಾಡುವ ಪ್ರಸ್ತಾಪ ಆಗಿದೆ.ಅದಕ್ಕೆ ಕ್ಯಾಂಪ್ಕೋ ಮತ್ತು ನನ್ನ ಹಲಸಿನ ಉದ್ದಿಮೆಯ ಪ್ರೋತ್ಸಾಹ ಇದೆ ಎಂದರು.
ಹಲಸು ಇಲ್ಲದಿರುವ ಸಮಯದಲ್ಲೂ ಹಲಸು ಮೇಳ ಯಶಸ್ವಿಯಾಗಿದೆ: ನವತೇಜ ಟ್ರಸ್ಟ್ನ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಲಸಿನ ಮೇಳಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ.ಈಗಾಗಲೇ ಮರೆತ ಹಾಗೂ ಮರೆವಿನಂಚಿಲ್ಲಿರುವ ಪಾರಂಪರಿಕ ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸುವ ಯೋಜನೆ ರೂಪಿಸಲಾಗಿದೆ.ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.ಹಲಸು ಇಲ್ಲದಿರುವ ಸಂದರ್ಭದಲ್ಲೂ ಹಲಸು ಮೇಳ ಮಾಡಿ ಯಶಸ್ವಿಯಾಗಿದ್ದೇವೆ.ಆದರೂ ಇದು ಪೂರ್ಣಗೊಂಡಿಲ್ಲ.ಹಲಸಿನ ಉತ್ಪನ್ನಗಳಿಗೆ ಆಧುನಿಕ ಸೌಲಭ್ಯ ಸಿಗಬೇಕಾಗಿದೆ ಎಂದರು.
ವಿವಿಧ ಸಾಂಬಾರುಗಳಿಗೆ ಬಳಸುವ ಹಲಸಿನ ಬೀಜದ ಹುಡಿ ಬಿಡುಗಡೆ: ಬೆಳ್ತಂಗಡಿಯ ಶ್ಯಾಮಸುಂದರ ಭಟ್ ಅವರು ಹಲಸಿನ ಬೀಜದಿಂದ ಮಾಡಿದ ಹುಡಿಯಲ್ಲಿ ಬೇರೆ ಸಾಂಬಾರು ಪದಾರ್ಥಗಳಿಗೆ ಬಳಸುವ ಕುರಿತು ಮಾಹಿತಿ ನೀಡಿ ರಸಂ ಪೌಡರ್, ಪಾಯಸ ಪೌಡರ್, ಸಾಂಬಾರ್, ಚಟ್ನಿ ಪೌಡರ್ ಅನ್ನು ಗಣ್ಯರ ಮೂಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಶರ್ಮ ಉಪಸ್ಥಿತರಿದ್ದರು.ಜೆಕಾಮ್ ಪುತ್ತೂರು ಟೇಬಲ್ನ ಅಧ್ಯಕ್ಷ ಪಶುಪತಿ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನವನೀತ ನರ್ಸರಿಯ ವೇಣುಗೋಪಾಲ ಶಿಬರ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ನವತೇಜ ಟ್ರಸ್ಟ್ನ ಕಾರ್ಯದರ್ಶಿ ಸುಹಾಸ್ ಮರಿಕೆ ಅವರು ಸ್ವಾಗತಿಸಿ, ರೋಟರಿ ಕ್ಲಬ್ ಯುವ ಇದರ ನಿಯೋಜಿತ ಅಧ್ಯಕ್ಷ ಕುಸುಮಾಧರ್ ವಂದಿಸಿದರು.ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ ಅವರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಮಳಿಗೆಗಳ ಉದ್ಘಾಟನೆ: ಬೆಳಿಗ್ಗೆ ಹಲಸು, ಹಣ್ಣು ಮೇಳದ ಮಳಿಗೆಗಳನ್ನು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಿ ಮಾತನಾಡಿ ಹಲಸು ಮೇಳವು ಒಂದು ರೀತಿಯಲ್ಲಿ ಹಬ್ಬದ ವಾತಾವರಣ ರೂಪಿಸಿದೆ.ಹಲಸು ಕಲ್ಪವೃಕ್ಷಕ್ಕೆ ಸಮವಾಗಿದೆ.ದೇವತಾ ಕಾರ್ಯಕ್ರಮಗಳಲ್ಲಿ, ಯಜ್ಞಗಳಲ್ಲಿ ಹಲಸಿನ ಕಟ್ಟಿಗೆ, ಎಲೆ, ಹಣ್ಣು ಹವಿಸಾಗಿ ಬಳಸುತ್ತೇವೆ.ಹಲಸಿನ ಹಣ್ಣು ಅಮೃತಫಲ.ಈ ರೀತಿಯ ಹಲಸಿನ ಮಹತ್ವವನ್ನು ಮೇಳದ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವ ಸಂಘಟಕರಿಗೆ ಕೃತಜ್ಞತೆಗಳು. ಮುಂದಿನ ದಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಹಲಸಿನ ಮೇಳವನ್ನು ದೇವಳದ ಸಹಯೋಗದೊಂದಿಗೆ ಮಾಡೋಣ ಎಂದರು.
ಸಣ್ಣ ಸ್ಥಳದಲ್ಲೂ ಹಲಸು ಬೆಳಸಬಹುದು: ಕೃಷಿಕರಾಗಿರುವ ಮಹಾದೇವ ಶಾಸೀಯವರು ಮಾತನಾಡಿ ಸಣ್ಣ ಸ್ಥಳದಲ್ಲಿ ಹಲಸಿನ ಮರ ಬೆಳೆಸಲು ಯಾರೂ ಮುಂದೆ ಬರುತ್ತಿಲ್ಲ.ಆದರೆ ಮನೆಯ ಕಂಪೌಂಡ್ಗೆ ಹಾನಿಯಾಗದ ರೀತಿಯಲ್ಲೂ ಹಲಸಿನ ಮರ ಬೆಳೆಸಲು ಆಗುತ್ತದೆ ಎಂದರು.
ಹಲಸಿಗೆ ಮೌಲ್ಯವರ್ಧನೆ: ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಮಾತನಾಡಿ ಜಂಕ್ ಫುಡ್ ಬಂದು ಹಲಸನ್ನು ಮೂಲೆಗುಂಪು ಮಾಡಿತ್ತು.ಆದರೆ ಸಂಘಟಕರು ಇದನ್ನು ಮತ್ತೆ ಪರಿಚಯಿಸಿ ಮೌಲ್ಯವರ್ಧನೆ ಮಾಡಿದ್ದಾರೆ ಎಂದರು.
ಸಂಜೆ ಕವಿಗೋಷ್ಠಿ: ಸಂಜೆ ಸಭಾ ಕಾರ್ಯಕ್ರಮದ ಬಳಿಕ ಹಲವು ಹಣ್ಣುಗಳ ಕವಿಗೋಷ್ಠಿ ನಡೆಯಿತು.ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಉಮಾಶಂಕರಿ ಎ.ಪಿ.ಮರಿಕೆ ಕಾರ್ಯಕ್ರಮ ಸಂಯೋಜಿಸಿದರು.ಮೇಳದಲ್ಲಿ ಹಲಸಿನ ಮತ್ತು ಮಾವಿನ ಹಣ್ಣುಗಳ ಮಾರಾಟ ಮಳಿಗೆ, ಹಲಸಿನ ಉತ್ಪನ್ನಗಳ ಮಳಿಗೆ, ಇತರ ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟದ ಮಳಿಗೆಗಳು ಇದ್ದವು.ಮೇಳದ ದ್ವಾರವನ್ನು ಹಲಸಿನಗುಜ್ಜೆ, ಅಡಿಕೆ, ಹಿಂಗಾರ, ತೆಂಗುವಿನಿಂದ ಮಾಡಿದ್ದು ವಿಶೇಷ ಆಕರ್ಷಣೆಯಾಗಿತ್ತು.