ಒಡಿಯೂರು ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಪೂರ್ವಭಾವಿ ಸಭೆ

0

ಸಮಾಜದ ಋಣ ತೀರಿಸುವ ಅವಕಾಶ ಇದಾಗಿದೆ : ಒಡಿಯೂರು ಶ್ರೀ

ವಿಟ್ಲ: ಸಮಾಜದ ಸೇವೆಯಲ್ಲಿ ತೊಡಗುವ ನಿಟ್ಟಿನಲ್ಲಿ ಕಾರ್ಯಕ್ರಮದ ಯೋಜನೆ. ಸಮಾಜದ ಋಣ ತೀರಿಸುವ ಅವಕಾಶ ಇದಾಗಿದೆ. ತ್ಯಾಗಪೂರ್ಣ ಸೇವೆ ನಮ್ಮದಾಗಬೇಕು. ಸೇವೆಯೇ ಸಾಧನೆಯಾದಾಗ ಸಾರ್ಥಕ್ಯ ಸಾಧ್ಯ. ಸಂಭ್ರಮದ ಮೂಲಕ‌ ಸೇವಾ ಕಾರ್ಯ ನಡೆಯುತ್ತದೆ. ಸಮಾಜದ ಸ್ವಚ್ಚತೆಯ ಜೊತೆಗೆ ಮನಶುದ್ಧಿಯ ಕೆಲಸವಾಗಬೇಕು. ಸಮಾಜಕ್ಕೆ ಸೇವೆಯ ಅಗತ್ಯ ಬಹಳಷ್ಟಿದೆ. ಅತಿಯಾದ ಅಭಿಮಾನ ಅಪಾಯಕ್ಕೆ ರಹದಾರಿ. ಇತಿಮಿತಿಯ ಜೀವನ ನಮ್ಮದಾಗಲಿ. ಆಧ್ಯಾತ್ಮದ ಚಿಂತನೆ‌ ಎಲ್ಲರಲ್ಲಿ ಮೂಡಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀ ಸಂಸ್ಥಾನದಲ್ಲಿ ಆಗಸ್ಟ್ 8ರಂದು ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ 2025 ಆಚರಣೆಯ ಬಗ್ಗೆ ಜೂ.೬ರಂದು ಸಂಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸಾಧ್ವೀ ಶ್ರೀ ಮಾತನಾಂದಮಯೀ ರವರು ದಿವ್ಯ ಸಾನಿಧ್ಯ ವಹಿಸಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ಶ್ರೀ ಗಳವರ ಜನ್ಮದಿನೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಒಡಿಯೂರು ಶ್ರೀ ಗಳವರ ಜನ್ಮದಿನೋತ್ಸವ ಸಮಿತಿ ಪ್ರಧಾನ ಕೋಶಾಧಿಕಾರಿ ಲೋಕನಾಥ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಯಿತು. ಗ್ರಾಮೋತ್ಸವದ ಅಂಗವಾಗಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ತುಲಾಭಾರ ಸೇವೆಯನ್ನು ಬೆಳ್ಳಿಯಲ್ಲಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಸ್ವಾಗತಿಸಿದರು. ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗಳವರ ಜನ್ಮದಿನೋತ್ಸವ ಸಮಿತಿ
ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ವಂದಿಸಿದರು.

LEAVE A REPLY

Please enter your comment!
Please enter your name here