ಉಪ್ಪಿನಂಗಡಿ: ಕೆರೆಗೆ ಸ್ನಾನಕ್ಕೆಂದು ಹೋದ ಕೇರಳ ಮೂಲದ ಸುಧೀಂದ್ರನ್ (38) ಎಂಬವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಯ ಗ್ರಾಮದ ಪೊಸತ್ ಕೆರೆ ಎಂಬಲ್ಲಿ ನಡೆದಿದೆ.
ಕೇರಳದ ಮಲಪುರಂ ಜಿಲ್ಲೆಯ ನೀಲಂಬೂರು ನಿವಾಸಿ ಸುರೇಂದ್ರನ್ ಎಂಬವರ ಮಗನಾದ ಸುಧೀಂದ್ರನ್ ಕರಾಯದಲ್ಲಿರುವ ತನ್ನ ಸಂಬಂಧಿಕರ ಪೀಠೋಪಕರಣ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿಕೊಂಡಿದ್ದು, ಆದಿತ್ಯವಾರದಂದು ತನ್ನ ಇತರ ನಾಲ್ವರು ಸಂಬಂಧಿಕರೊಡಗೂಡಿ ಬಾರ್ಯ ಗ್ರಾಮದ ಪೊಸತ್ ಕೆರೆಗೆ ಈಜಾಡಲೆಂದು ಹೋದವರು, ಈಜಲಾಗದೆ ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಕೂಡಲೇ ಜೊತೆಯಲ್ಲಿದ್ದ ಸಂಗಡಿಗರು ಅವರನ್ನು ನೀರಿನಿಂದ ಮೇಲೆತ್ತಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಮೃತರ ಸಂಬಂಧಿ ರತೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.