ನೆಲ್ಯಾಡಿ: ಮನೆಯಿಂದ 2.60 ಲಕ್ಷ ರೂ.ಮೌಲ್ಯದ 52 ಗ್ರಾಂ.ಚಿನ್ನ ಕಳವುಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕಟ್ಟೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಖ್ಯ ಗ್ರಾಮದ ಕಟ್ಟೆ ಮನೆ ನಿವಾಸಿ ಆನಂದ ಗೌಡ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಈ ಬಗ್ಗೆ ಆನಂದ ಗೌಡ ಅವರ ಪತ್ನಿ ಕುಸುಮ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕುಸುಮ ಮತ್ತು ಆನಂದ ಗೌಡ ಅವರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಕೊಟ್ಟಿಗೆಯಲ್ಲಿ ಇಟ್ಟು ಹೋಗುತ್ತಿದ್ದರು. ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ಕೊನೆಯದಾಗಿ ಮೇ.23 ರಂದು ನೋಡಿದ್ದರು. ಜೂ.14 ರಂದು ಶಿರಾಡಿ ದೇವಸ್ಥಾನಕ್ಕೆ ಹೋಗುವ ಮುನ್ನ ಕಪಾಟು ಬಾಗಿಲು ತೆರೆಯಲು ಹೋದಾಗ ಕಪಾಟಿಗೆ ಹಾಕಿದ್ದ ಕೀ ಹಾಕಿದ ಸ್ಥಿತಿಯಲ್ಲಿ ಇದ್ದಿದ್ದು ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ 3 ಪವನ್ ತೂಕದ ಕರಿಮಣಿ ಸರ, 2 ಪವನ್ ತೂಕದ ಚೈನ್, 1 ಪವನ್ ತೂಕದ ಬಲೆ ಮತ್ತು ಅರ್ಧ ಪವನ್ ತೂಕದ ಕಿವಿಯೋಲೆ ಸೇರಿದಂತೆ ಅಂದಾಜು ಒಟ್ಟು ರೂ 2.60 ಲಕ್ಷ ರೂ.ಮೌಲ್ಯದ 52 ಗ್ರಾಂ. ಚಿನ್ನ ಕಳವುಗೊಂಡಿರುವುದಾಗಿ ವರದಿಯಾಗಿದೆ.
ಘಟನೆ ನಡೆದ ಸ್ಥಳಕ್ಕೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೇತೃತ್ವದ ಪೊಲೀಸ್ ತಂಡ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.