ಆತೂರು: ಜಿಲ್ಲಾ ಮಟ್ಟದ ಸದರ್ ಮುಅಲ್ಲಿಂ ಸಂಗಮ ’ತಖ್‌ವಿಯಾ-2025’

0

ಮುಅಲ್ಲಿಂಗಳು ಸಮಾಜ, ಸಮುದಾಯಕ್ಕೆ ಮಾದರಿ ಆಗಿರಬೇಕು; ಉಸ್ಮಾನ್ ಫೈಝಿ

ರಾಮಕುಂಜ: ವಿದ್ಯಾರ್ಥಿಗಳಿಗೆ ನಮಾಜು ನಿರ್ವಹಣೆಯಿಂದ ಪ್ರಾರಂಭಗೊಂಡು ಪ್ರತಿಯೊಂದು ಹಂತದಲ್ಲೂ ಆಚಾರ-ವಿಚಾರ, ಸಂಸ್ಕಾರ, ಸತ್ಕರ್ಮಗಳನ್ನು ಭೋದಿಸುವ ಮದ್ರಸದ ಸದರ್ ಮುಅಲ್ಲಿಂಗಳು (ಅಧ್ಯಾಪಕರು) ವಿದ್ಯೆಯ ರಾಯಭಾರಿಗಳು, ತಾವುಗಳು ಸಮಾಜ ಮತ್ತು ಸಮುದಾಯಕ್ಕೆ ಮಾದರಿ ಆಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ತೋಡಾರ್ ಉಸ್ಮಾನ್ ಫೈಝಿ ಹೇಳಿದರು.


ಅವರು ಜೂ.17ರಂದು ಕಡಬ ತಾಲೂಕು ಆತೂರು ಮುಹಿಯುದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ “ಸದರ್ ಮುಅಲ್ಲಿಂ ಸಂಗಮ ’ತಖ್‌ವೀಯಾ-2025’ ಸಮಾರಂಭದಲ್ಲಿ ದ.ಕ. ಜಿಲ್ಲಾ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಇದರ 50ನೇ ವಾರ್ಷಿಕೋತ್ಸವದ ಲೋಗೋ ಉದ್ಘಾಟಿಸಿ ಮಾತನಾಡಿದರು. ಕೇರಳ ಸರ್ಕಾರದಿಂದ ಪ್ರಶಂಸಿಸಲ್ಪಟ್ಟ ಮತ್ತು ದೇಶದಲ್ಲೇ ಎತ್ತರದ ಸ್ಥಾನದಲ್ಲಿರುವ ಸಮಸ್ತ ಕೇರಳ ಜಂ-ಇಯ್ಯತುಲ್ ಉಲೇಮಾ ಅಡಿಯಲ್ಲಿ ಕೆಲಸ ಮಾಡುವ ಸದರ್ ಮುಅಲ್ಲಿಂಗಳು ಸುನ್ನತ್ ಜಮಾಅತಿನ ಆದರ್ಶವನ್ನು ಎತ್ತಿಹಿಡಿದುಕೊಂಡು ತಮ್ಮ ಸಂಸ್ಥೆಗೆ ಮತ್ತು ತಮಗೆ ಯಾವುದೇ ರೀತಿಯ ಚ್ಯುತಿ ಉಂಟಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಕೇಂದ್ರ ಮುಶಾವರ ಇನ್ನೋರ್ವ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಅಲ್‌ಖಾಸಿಮಿ ಮಾತನಾಡಿ, ಸದರ್ ಉಸ್ತಾದ್, ಮುಅಲ್ಲಿಂಗಳು ಯಾವತ್ತೂ ದೂಷಣೆಗೆ ಒಳಗಾಗಬಾರದು, ಒಬ್ಬಾತ ಅಧ್ಯಾಪಕನಲ್ಲಿ ಕಪ್ಪು ಚುಕ್ಕಿ ಕಂಡರೂ ಅದು ಮುಅಲ್ಲಿಂ ಸಮೂಹಕ್ಕೆ ತಟ್ಟುತ್ತದೆ, ಈ ನಿಟ್ಟಿನಲ್ಲಿ ತಮ್ಮ ಸೇವೆ ಇತರರಿಗೆ ಮಾದರಿ ಆಗಬೇಕು ಎಂದರು.

ಸ್ಮಾರ್ಟ್ ಕ್ಲಾಸ್ ತರಗತಿ ಉದ್ಘಾಟನೆ:
ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿ ದ.ಕ. ಜಿಲ್ಲೆಯಲ್ಲೇ ಪ್ರಥಮವಾಗಿ ನಮ್ಮ ರೇಂಜ್‌ಗೆ ಒಳಪಟ್ಟ ಮದ್ರಸದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭ ಆಗಿರುವುದು ಹೆಮ್ಮೆಯ ವಿಚಾರ ಎಂದರು.

ದ.ಕ. ಜಿಲ್ಲಾ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸೆಯ್ಯದ್ ಅಕ್ರಂ ಅಲೀ ತಂಙಳ್ ಕರಾವಳಿ, ಸೆಯ್ಯದ್ ಪೂಕುಂಞ ತಂಙಳ್, ಮದ್ರಸ ತಪಾಸಣಾಧಿಕಾರಿಗಳಾದ ಖಾಸಿಂ ಮುಸ್ಲಿಯಾರ್, ಉಮರ್ ದಾರಿಮಿ ಸಾಲ್ಮರ, ಜೆ.ಪಿ. ಮುಹಮ್ಮದ್ ದಾರಿಮಿ, ರಿಯಾಝ್ ರಹ್ಮಾನಿ, ಅತೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಸ್ನವಿ, ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಕಾರ‍್ಯದರ್ಶಿ ಗಫಾರ್ ಹಾಜಿ, ಮದ್ರಸ ಮೆನೇಜ್‌ಮೆಂಟ್ ಕಾರ‍್ಯದರ್ಶಿ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಅಝೀಜ್ ಕಿಡ್ಸ್, ಅಯ್ಯೂಬ್ ಹಾಜಿ, ಫಲೂಲುದ್ದೀನ್ ಹೇಂತಾರ್ ಮತ್ತಿತರರು ಉಪಸ್ಥಿತರಿದ್ದರು.

ಶೈಕ್ಷಣಿಕ ತರಬೇತಿ ಕಾರ್ಯಾಗಾರ:
ಸಭಾ ಕಾರ‍್ಯಕ್ರಮದ ಬಳಿಕ ಆಧುನಿಕ ಬೋಧನಾ ರೀತಿ, ಅಧ್ಯಾಪಕರ ಜವಾಬ್ದಾರಿ, ಸಮಸ್ತ ಶೈಕ್ಷಣಿಕ ಕ್ರಾಂತಿ, ಚಟುವಟಿಕೆಗಳ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ಎಸ್.ಕೆ.ಜೆ.ಎಂ.ಸಿ.ಸಿ. ಕೇಂದ್ರ ಕ್ಷೇಮನಿಧಿ ಡೆಪ್ಯುಟಿ ಚೆಯರ್‌ಮೆನ್ ಒಎಂಸಿ ತಂಙಳ್, ಇಬ್ರಾಹಿಂ ಮುಸ್ಲಿಯರ್ ತಳಿಪ್ಪರಂಬು, ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಪ್ರಧಾನ ಕಾರ‍್ಯದರ್ಶಿ ಅನೀಸ್ ಕೌಶರಿ ವಿಷಯ ಮಂಡನೆ ಮಾಡಿ ಮಾತನಾಡಿದರು. ದ.ಕ. ಜಿಲ್ಲಾ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಕಾರ‍್ಯದರ್ಶಿ ಮಹಮ್ಮದ್ ನವವಿ ಸ್ವಾಗತಿಸಿ, ರೇಂಜ್ ಕಾರ‍್ಯದರ್ಶಿ ಆಸಿಫ್ ಅಝ್‌ಹರಿ ಎಡಪ್ಪಾಲ ವಂದಿಸಿದರು. ಪಿ.ಎ. ಮರ್ದಾಳ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here