ಸೇವೆ ಮಾಡುವಾಗ ತ್ಯಾಗದ ಮನೋಭಾವೂ ಬೇಕು-ಅಶೋಕ್ ಕುಮಾರ್ ರೈ
ವಿದ್ಯಾ ದಾನ ಶ್ರೇಷ್ಠ ದಾನವಾಗಿದೆ-ಲೋಕೇಶ್ ಎಸ್.ಆರ್
ಪ್ರೀತಿ, ಸೌಹಾರ್ದತೆಯಿಂದ ತಾಲೂಕು, ಜಿಲ್ಲೆ ಅಭಿವೃದ್ಧಿ ಮಾಡೋಣ-ಹಾಜಿ ಝಕರಿಯಾ
ಪ್ರಾಯೋಜಕತ್ವ ವಹಿಸಿದ ಝಕಾರಿಯ ಜೋಕಟ್ಟೆ ನಮಗೆ ಹೆಮ್ಮೆ-ಸುಜಾ ಮಹಮ್ಮದ್
ಕ್ಲಾಸ್ ಆನ್ ವ್ಹೀಲ್ಸ್ ಯೋಜನೆ ಹನೀಫ್ರವರ ಕನಸು-ರಶೀದ್ ವಿಟ್ಲ

ಪುತ್ತೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹತ್ವಕಾಂಕ್ಷೆಯ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ನ ಪ್ರಸಕ್ತ ಶೈಕ್ಷಣಿಕ ವರ್ಷಾರಂಭ ಹಾಗೂ ಗ್ರಾಮೀಣ ಸರಕಾರಿ ಮಕ್ಕಳಿಗೆ ಉಚಿತ ಶಿಕ್ಷಣದ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ ಜೂ.೨೧ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಮಿನಿ ಹಾಲ್ನಲ್ಲಿ ನಡೆಯಿತು.
ಸೇವೆ ಮಾಡುವಾಗ ತ್ಯಾಗದ ಮನೋಭಾವೂ ಬೇಕು-ಅಶೋಕ್ ಕುಮಾರ್ ರೈ
ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಟ್ರಸ್ಟ್ ನಡೆಸಲು ಕಷ್ಟ ತುಂಬಾ ಇದೆ. ಹಣ ಇದ್ದರೂ ಬಡವರ ಸೇವೆ ಮಾಡಲು ಕಷ್ಟ. ಸೇವೆಯಲ್ಲಿ ಕೂಡ ನೆಗೆಟಿವ್ ಹುಡುಕುವವರೇ ಹೆಚ್ಚು ಇದ್ದಾರೆ. ಟ್ರಸ್ಟ್ನ್ನು ಪ್ರಾಮಾಣಿಕವಾಗಿ ಇಷ್ಟು ವರ್ಷ ನಡೆಸಿಕೊಂಡು ಬಂದಿದ್ದು ಉತ್ತಮ ಸಾಧನೆ ಎಂದರು. ಬಾಲ್ಯದಿಂದ ಕಷ್ಟದಿಂದ ಜೀವನ ಸಾಗಿಸಿದವನು ಬಡವರ ಸೇವೆ ಮಾಡಲು ಸಾಧ್ಯ. ದುಡಿದ ಹಣದಲ್ಲಿ ಸಮಾಜಕ್ಕೆ ಕೊಡುವವರು ತುಂಬಾ ಕಡಿಮೆ. ಯೋಜನೆ ಆರಂಭ ಮಾಡುವುದು ಸುಲಭ. ಆದರೆ ಅದನ್ನು ಮುಂದುವರೆಸಿಕೊಂಡು ಹೋಗಲು ಕಷ್ಟ. ಬಡವರಿಗೆ ಮಾಡಿದ ಸಹಾಯದಿಂದ ಧನ್ಯತಾ ಭಾವ ಮೂಡುತ್ತದೆ. ಸೇವೆ ಮಾಡಲು ತ್ಯಾಗದ ಮನೋಭಾವವೂ ಬೇಕು. ಸರಕಾರದಿಂದ ಎಲ್ಲವನ್ನೂ ನಿರೀಕ್ಷಿಸಬಾರದು ನಾವು ಕೂಡ ಕೆಲಸ ಮಾಡಬೇಕು. ಎಂ.ಚಾರಿಟೇಬಲ್ ಟ್ರಸ್ಟ್ನಿಂದ ಉತ್ತಮವಾದ ಕೆಲಸಗಳು ನಡೆಯುತ್ತಿದೆ ಇದು ಶ್ಲಾಘನೀಯ ಎಂದರು.
ವಿದ್ಯಾ ದಾನ ಶ್ರೇಷ್ಠ ದಾನವಾಗಿದೆ-ಲೋಕೇಶ್ ಎಸ್.ಆರ್
ಮುಖ್ಯ ಅತಿಥಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ದಾನಕ್ಕಿಂತ ಶ್ರೇಷ್ಠ ದಾನ ವಿದ್ಯಾ ದಾನ. ಇದನ್ನು ಎಂ.ಚಾರಿಟೇಬಲ್ ಟ್ರಸ್ಟ್ನವರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಮಕ್ಕಳನ್ನು ೨೧ನೇ ಶತಮಾನಕ್ಕೆ ಅಣಿ ಮಾಡಬೇಕಿದೆ. ಎಲ್ಲಾ ರೀತಿಯ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಸಮಾಜದಿಂದ ಸಿಗುವ ಸಹಾಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ವಿದ್ಯಾವಂತರಾಗಿ ಬದುಕು ಕಟ್ಟಿಕೊಳ್ಳಬೇಕು. ಹನೀಫ್ ಪುತ್ತೂರುರವರು ಗೆದ್ದ ಅಷ್ಟೂ ಹಣವನ್ನು ಶಿಕ್ಷಣಕ್ಕೆ ನೀಡಿದ್ದಾರೆ ಇದು ಉತ್ತಮ ಕೊಡುಗೆ ಎಂದ ಅವರು ನಿಮ್ಮ ಯೋಜನೆಗೆ ನಮ್ಮ ಇಲಾಖೆಯಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.
ಪ್ರೀತಿ, ಸೌಹಾರ್ದತೆಯಿಂದ ನಮ್ಮ ತಾಲೂಕು, ಜಿಲ್ಲೆಯನ್ನು ಅಭಿವೃದ್ಧಿ ಮಾಡೋಣ-ಹಾಜಿ ಝಕರಿಯಾ
ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಚೆಯರ್ಮೇನ್ ಹಾಜಿ ಝಕರಿಯಾ ಜೋಕಟ್ಟೆ ಮಾತನಾಡಿ ದಾನ ಮಾಡಿ ಕೆಟ್ಟವರಿಲ್ಲ. ಕೆಲಸ ಮಾಡುವಾಗ ಹೃದಯವಂತಿಕೆಯಿಂದ ಮಾಡಬೇಕು. ಬಡವರಿಗೆ ಆಶ್ರಯ ಕೊಡುವುದು ಮಾನವೀಯತೆಯ ಕೆಲಸ. ಸಮಾಜ ಸೇವೆಯಲ್ಲಿ ಪ್ರೇರಕರು, ಮಾರ್ಗದರ್ಶಕರಿದ್ದಾಗ ನಮ್ಮ ಸೇವೆ ಮುಂದುವರೆಸಲು ಸಾಧ್ಯಾಗುತ್ತದೆ ಎಂದರು. ದೇವರ ಅನುಗ್ರಹದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡೋಣ. ಪ್ರೀತಿ, ಸೌಹಾರ್ದತೆಯಿಂದ ನಾವು ನಮ್ಮ ತಾಲೂಕು, ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು. ಆರೋಗ್ಯ ಮತ್ತು ನೆಮ್ಮದಿ ಇದ್ದರೆ ಅದುವೆ ದೊಡ್ಡ ಸೌಭಾಗ್ಯ ಎಂದ ಅವರು ನಮ್ಮ ಕ್ಲಾಸ್ ಆನ್ ವ್ಹೀಲ್ಸ್ನಲ್ಲಿ ಕಲಿತು ವಿದ್ಯಾರ್ಥಿಗಳು ದೊಡ್ಡ ಉದ್ಯಮಿಗಳಾಗಬೇಕು ಎಂದರು.


ಪ್ರಾಯೋಜಕತ್ವ ವಹಿಸಿದ ಝಕಾರಿಯ ಜೋಕಟ್ಟೆ ನಮಗೆ ಹೆಮ್ಮೆ-ಸುಜಾ ಮಹಮ್ಮದ್
ಅಧ್ಯಕ್ಷತೆ ವಹಿಸಿದ್ದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುಜಾ ಮಹಮ್ಮದ್ ಮಾತನಾಡಿ ನಾವು 8 ವರ್ಷದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಮನೆಯವರಿಗೆ ಊಟ ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ಮಾಡಿದ್ದೇವೆ. ದಾನಿಗಳ ಸಹಕಾರದಿಂದ ಇದು ನಡೆಯುತ್ತಿದೆ. ಇದೇ ರೀತಿಯ ಯೋಜನೆಯನ್ನು ತಾಲೂಕುಗಳ ಆಸ್ಪತ್ರೆಯಲ್ಲಿಯೂ ಮಾಡಬೇಕೆಂಬ ಯೋಚನೆ ಇದೆ ಎಂದರು. ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಗೆ ಮಾರ್ಗದರ್ಶನ ನೀಡಿದವರು ಶಿಕ್ಷಣಾಧಿಕಾರಿಯವರು. ಈ ಮೂಲಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದೇವೆ. ಇದರ ನಿರ್ವಹಣೆಯ ವೆಚ್ಚಕ್ಕೆ ಆಪತ್ಭಾಂಧವರಾಗಿ ಬಂದವರು ಝಕಾರಿಯ ಜೋಕಟ್ಟೆಯವರು. ಇವರು ನಮಗೆ ಹೆಮ್ಮೆ ಎಂದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕ್ಲಾಸ್ ಆನ್ ವ್ಹೀಲ್ಸ್ ಯೋಜನೆ ಹನೀಫ್ರವರ ಕನಸು-ರಶೀದ್ ವಿಟ್ಲ
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರು ಹಾಗೂ ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯ ನಿರ್ದೇಶಕ ರಶೀದ್ ವಿಟ್ಲ ಸ್ವಾಗತಿಸಿ ಪ್ರಾಸ್ತಾವಿಕಾಗಿ ಮಾತನಾಡಿ ಎಂ ಫ್ರೆಂಡ್ಸ್ ಚಾರಿಟೇಬಲ್ ಸಂಸ್ಥೆ 2013ರಲ್ಲಿ ಹುಟ್ಟಿಕೊಂಡಿದೆ. ಎಂ. ಫ್ರೆಂಡ್ಸ್ ಎಂಬುದು ಕರುಣೆಯ ಗೆಳೆಯರು ಎಂಬ ಅರ್ಥದಲ್ಲಿದೆ. ವಾಟ್ಸಾಪ್ ಗ್ರೂಪ್ ಮೂಲಕ ರಚನೆಯಾದ ಸಂಸ್ಥೆ ರಿಜಿಸ್ಟರ್ ಮಾಡಲಾಯಿತು. ಪ್ರಾರಂಭಿಕವಾಗಿ ಮೆಡಿಕಲ್ ಸಂಬಂಧಿತ ಕೇಸ್ಗಳಿಗೆ ಸಹಕಾರ ನೀಡಲಾಯಿತು. ಬಳಿಕ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ವ್ಯವಸ್ಥೆ ಕಲ್ಪಿಸಿದ್ದೇವೆ. 12 ಗ್ರಾಮೀಣ ಪ್ರದೇಶಗಳಲ್ಲಿ 2 ವರ್ಷಗಳಲ್ಲಿ ಸರ್ವೆ ಮಾಡಿ ಅಗತ್ಯ ಸೌಕರ್ಯ ಮಾಡಿದ್ದೇವೆ. ಕಳೆದ 8 ವರ್ಷಗಳ ಹಿಂದೆ ಕಾರುಣ್ಯ ಯೋಜನೆ ಹಮ್ಮಿಕೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ೪೦೦ ರಿಂದ ೫೦೦ ಮಂದಿ ರೋಗಿಗಳ ಜತೆಗಿರುವವರಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ದಾನಿಗಳ ಸಹಕಾರದಿಂದ ನಮ್ಮ ಯೋಜನೆಗಳು ಮುಂದುವರಿಯುತ್ತಿದೆ ಎಂದರು.2023ರಲ್ಲಿ ಕ್ಲಾಸ್ ಆನ್ ವ್ಹೀಲ್ಸ್ ಯೋಜನೆ ಆರಂಭ ಮಾಡಿದ್ದೇವೆ. ಇದು ಹನೀಫ್ ಪುತ್ತೂರುರವರ ಕನಸು ಆಗಿತ್ತು. ಅವರಿಗೆ ಸಿಕ್ಕಿದ ಬಿಗ್ ಟಿಕೆಟ್ನ 50 ಲಕ್ಷ ಹಣದ ಸಹಕಾರದಲ್ಲಿ ಹಾಗೂ ಟ್ರಸ್ಟ್ನ 15 ಲಕ್ಷ ಹಣದಲ್ಲಿ ಕ್ಲಾಸ್ ಆನ್ ವ್ಹೀಲ್ಸ್ ಬಸ್ ಆರಂಭ ಮಾಡಿ ಪ್ರತೀ ಸರಕಾರಿ ಶಾಲೆಯಲ್ಲಿ ಕಂಪ್ಯೂಟರ್ ಕ್ಲಾಸ್ ಮಾಡುತ್ತಿದ್ದೇವೆ. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಕೂಡ ಬೆಂಬಲ ನೀಡಿದ್ದಾರೆ ಎಂದರು.
ಸರ್ಟಿಫಿಕೇಟ್ ವಿತರಣೆ:
ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯ ಮೂಲಕ 50 ಸರಕಾರಿ ಶಾಲೆಗಳು ಮತ್ತು 26 ವಿವಿಧ ಕೇಂದ್ರಗಳ ಒಟ್ಟು 3,650 ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಿ ಕೊಡಲಾಗಿದ್ದು, ಈ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸರ್ಟಿಫಿಕೇಟ್ ವಿತರಣೆ ನಡೆಯಿತು.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್ ಪಡುಬಿದ್ರೆ, ಕಾರುಣ್ಯ ಯೋಜನೆಯ ಮುಖ್ಯಸ್ಥ ಮಹಮ್ಮದ್ ಹನೀಫ್ ಗೋಳ್ತಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಂಟ್ಯಾರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹನೀಫ್ ಪುತ್ತೂರುರವರ ತಂದೆ ಬಳ್ಳೇರಿ ಅಬ್ಬಾಸ್ ಹಾಜಿ, ಚಂದ್ರಹಾಸ ಶೆಟ್ಟಿ, ರೊ.ಭಾಸ್ಕರ ಆನಂದ್, ಶಿಕ್ಷಕ ಚಕ್ರಪಾಣಿ, ಸಿಆರ್ಪಿ ಶಶಿಕಲಾ, ತಾಹೀರ್ ಸಾಲ್ಮರ ಸೇರಿದಂತೆ ಹಲವು ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಮಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿ ಸದಸ್ಯ ಹಾಗೂ ನ್ಯಾಯವಾದಿ ಮಹಮ್ಮದ್ ಶಾಕೀರ್ ವಂದಿಸಿದರು.
ಕ್ಲಾಸ್ ಆನ್ ವ್ಹೀಲ್ಸ್ನಲ್ಲಿ 3650 ವಿದ್ಯಾರ್ಥಿಗಳ ಕಲಿಕೆ
2023ರ ನವೆಂಬರ್ ತಿಂಗಳಿನಿಂದ ಆರಂಭಗೊಂಡ ಕ್ಲಾಸ್ ಆನ್ ವ್ಹೀಲ್ಸ್ ಬಸ್ ಮೂಲಕ ಒಂದೂವರೆ ವರ್ಷದಲ್ಲಿ 50 ಸರಕಾರಿ ಶಾಲೆ ಹಾಗೂ 26 ವಿವಿಧ ಕೇಂದ್ರಗಳ ಒಟ್ಟು 3650 ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದಿದ್ದಾರೆ.
ಶಾಶ್ವತ ಪ್ರಾಯೋಜಕತ್ವ ಉದ್ಘಾಟನೆ
ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಗೆ ತಿಂಗಳಿಗೆ ಒಂದು ಲಕ್ಷ ಖರ್ಚು, 4 ಸಿಬಂದಿಗಳ ವೆಚ್ಚ, ಡೀಸಿಲ್ ಹಾಗೂ ಇತರ ಖರ್ಚುಗಳಿಗೆ ತಗಲುವ ವೆಚ್ಚಕ್ಕೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಚೆಯರ್ಮೇನ್ ಹಾಜಿ ಝಕರಿಯಾ ಜೋಕಟ್ಟೆಯರು ತನ್ನ ತಂದೆಯ ಹೆಸರಿನಲ್ಲಿ ಪ್ರಾಯೋಜಕತ್ವ ಘೋಷಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈರವರು ಪ್ರಾಯೋಜಕತ್ವ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಪ್ರಾಯೋಜಕತ್ವ ನೀಡಿದ ಹಾಜಿ ಝಕರಿಯಾ ಜೋಕಟ್ಟೆಯವರನ್ನು ಎಂ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕರು ಹಾಗೂ ಗಣ್ಯರು ಸನ್ಮಾನಿಸಿದರು.
೧: (ಲೀಡ್)
೨: ಶಾಶ್ವತ ಯೋಜನೆ ಉದ್ಘಾಟನೆ
೩: ಕ್ಲಾಸ್ ಆನ್ ವ್ಹೀಲ್ಸ್ ಬಸ್