ಪುತ್ತೂರು: ನೆಹರು ನಗರದ ಸೆಂಟ್ರಲ್ ಸ್ಕೂಲ್ ನಲ್ಲಿ ಜೂನ್ 21ರಂದು ಶಾಲಾ ಶಿಕ್ಷಕ ರಕ್ಷಕರ ಸಂಘದ ಸಭೆ ಹಾಗೂ ಪ್ರೇರಣಾ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ.ಕೆ ವಹಿಸಿ, ಪೋಷಕರನ್ನು ಕುರಿತು ಮಾತನಾಡಿದರು. ವಿವೇಕಾನಂದ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿ ಮಾತನಾಡಿ, ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಎಳವೆಯಿಂದಲೇ ಸಿದ್ಧಪಡಿಸುವ ಅಗತ್ಯತೆ ಹಾಗೂ ಇಂದಿನ ಕಾಲಘಟ್ಟದಲ್ಲಿ ಅದು ಎಷ್ಟು ಪ್ರಾಮುಖ್ಯಯನ್ನು ಪಡೆದಿದೆ ಎಂಬುದನ್ನು ವಿವರಿಸಿದರು.

ತರಗತಿವಾರು ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರನ್ನು ಗೌರವಿಸಲಾಯಿತು. ಶಾಲೆಯ ಸಾಧನೆ ಹಾಗೂ ಆಗುಹೋಗುಗಳನ್ನು ತಿಳಿಸುವ ‘ ಪ್ರೇರಣಾ ‘ ಅರ್ಧವಾರ್ಷಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಸಂಘದ ಸಂಘಟಕರಾದ ಶಂಕರಿ ಶರ್ಮ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀದೇವಿ ಕೆ. ಹೆಗ್ಡೆ ನಿರೂಪಿಸಿ, ಶಿಕ್ಷಕಿ ಸುನಯನ ಸ್ವಾಗತಿಸಿ, ಶಿಕ್ಷಕಿ ಮಲ್ಲಿಕಾ ಕೆ. ವಂದನಾರ್ಪಣೆಗೈದರು.