ಪುತ್ತೂರು: ಅಕ್ಷಯ ಕಾಲೇಜು, ಪುತ್ತೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ಹೇಮ ಚಂದ್ರಹಾಸ ಅಗಲಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು “ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಿದರೆ ದೇಹ ಮತ್ತು ಮನಸ್ಸು ಒತ್ತಡ ಮುಕ್ತವಾಗುತ್ತದೆ. ಅನೇಕ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ಅವರು ವಹಿಸಿ, “ಯೋಗದ ಮೂಲಕ ದೇಹದ ಆರೋಗ್ಯ ಹಾಗೂ ಮನಸ್ಸಿನ ಸಮತೋಲನ ವೃದ್ಧಿ ಆಗುತ್ತದೆ. ಯೋಗವೇ ಸೌಂದರ್ಯವರ್ಧನೆಗೂ ಒಂದು ಪಥ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಯಾದ ಅರ್ಪಿತ್ ಟಿ. ಎ., ಕಾಲೇಜಿನ ಉಪ ಪ್ರಾಂಶುಪಾಲರಾದ ರಕ್ಷಣ್ ಟಿ. ಎ, ಹಾಗು ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಗಂಗಾರತ್ನ ಅವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಕಿಶೋರ್ ಕುಮಾರ್ ರೈ ಹಾಗೂ ಕುಮಾರಿ ಮೇಘಶ್ರೀ, ಮತ್ತು ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯೋಗ ಪ್ರದರ್ಶನವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಹೇಮಚಂದ್ರ ಹಾಸ ಅಗಲಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಾದ ಶ್ರೇಯಸ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಸ್ವಯಂ ಸೇವಕಿಯರಾದ ಶ್ರೀಯಾ ಮತ್ತು ಸೃಷ್ಟಿ ಅವರು ಪ್ರಾರ್ಥಿಸಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕಿ ವರ್ಷಿಣಿ ಎಸ್. ಅವರು ನಿರೂಪಿಸಿದರು.