ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜೂನ್ 28ರಂದು ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ಸಹಯೋಗದಲ್ಲಿ ಕರ್ಣ ಭೇದನ ಎಂಬ ಕಾವ್ಯ ಭಾಗದ “ಗಮಕವಾಚನ- ವ್ಯಾಖ್ಯಾನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್, ಪುತ್ತೂರು ಘಟಕದ ಕಾರ್ಯಕಾರಣಿ ಸಮಿತಿಯ ಕಾರ್ಯದರ್ಶಿ ಶಂಕರಿ ಶರ್ಮ ಪ್ರಸ್ತಾವಿಕವಾಗಿ ಮಾತನಾಡಿ, ಗಮಕವಾಚನ ಮತ್ತು ವ್ಯಾಖ್ಯಾನ ರಾಮಾಯಣ ಮತ್ತು ಮಹಾಭಾರತದಿಂದ ಆಯ್ದ ಪೌರಾಣಿಕ ಕಥೆಯ ಭಾಗವನ್ನು ಪ್ರಸ್ತುತಪಡಿಸುವುದಾಗಿದೆ. ಇದರಲ್ಲಿ ಹಿನ್ನೆಲೆ ವಾದ್ಯ ಇರುವುದಿಲ್ಲ. ಸಂಗೀತ ಪ್ರಭೇದ, ಹಳೆಗನ್ನಡವನ್ನು ಒಳಗೊಂಡು ಪ್ರತಿಯೊಂದು ಶಬ್ದದ ಅರ್ಥವನ್ನು ಭಾವನೆಗಳ ಮೂಲಕ ಪ್ರತ್ಯೇಕಿಸಿ ಹೇಳುವುದಾಗಿದೆ ಎಂದರು.
ಗುಂಡ್ಯಡ್ಕ ಈಶ್ವರ ಭಟ್ ರವರು ಕರ್ಣಭೇದನ ಪ್ರಸಂಗವನ್ನು ಅದ್ಭುತ ರೀತಿಯಲ್ಲಿ ವ್ಯಾಖ್ಯಾನಿಸಿದರು ಮತ್ತು ಗಮಕಿ ಅಪೂರ್ವ ಕಿಜೆಕ್ಕಾರು ತಮ್ಮ ಸುಮಧುರ ಕಂಠದ ಮೂಲಕ ವಾಚನ ಮಾಡಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಪ್ರಸನ್ನ ಭಟ್, ಬಲ್ನಾಡು ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗಮಕ ಕಲಾ ಪರಿಷತ್ತಿನ ಸದಸ್ಯರು, ಕಾಲೇಜಿನ ಆಡಳಿತ ಸಮಿತಿಯ ಸದಸ್ಯರು, ಕಲಾರಾಧಕರು, ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್, ಸಹಾಯಕ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ನಿರೂಪಿಸಿದರು.