ಶಿಕ್ಷಕನಾದವನು ಮಗುವಿಗೆ ಪ್ರೇರಕ ಶಕ್ತಿ ಆಗಿರಬೇಕು – ಡಾ. ಕಲ್ಲಡ್ಕ ಪ್ರಭಾಕರ ಭಟ್
ಪುತ್ತೂರು: ಶಿಕ್ಷಣವೆಂಬುವುದು ಅರಿವು. ಒಂದು ಮಗು ಜನಿಸಿ ಮುಂದೆ ಬೆಳೆಯುತ್ತಾ ಹೋದಾಗ, ಹೇಗೆ ತನ್ನ ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯುತ್ತದೆಯೋ ಅದು ಶಿಕ್ಷಣವಾಗಿರುತ್ತದೆ. ಮಗುವಿನ ಬೆಳವಣಿಗೆಯ ಸಂದರ್ಭದಲ್ಲಿ ತಂದೆ ತಾಯಿ ನೀಡುವ ಪ್ರೀತಿ, ಆತ್ಮೀಯತೆ, ಉತ್ತಮ ಗುಣ ನಡತೆಗಳು ಸಂಸ್ಕಾರಯುತ ಶಿಕ್ಷಣಕ್ಕೆ ಉದಾಹರಣೆಗಳು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಕೇಶವ ಸಂಕಲ್ಪದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿಭಾಗದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತಾನಾಡುತ್ತಾ ಇಂದಿನ ಕಾಲದಲ್ಲಿ ಶಿಕ್ಷಣವೆಂಬುದು ಕೇವಲ ಅಂಕಗಳಿಗೆ ಸೀಮಿತವಾಗಿದೆ. ಒಬ್ಬ ಉತ್ತಮ ಶಿಕ್ಷಕನಾದವನು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಕಡೆಗೆ ಗಮನ ಹರಿಸಬೇಕು. ಪ್ರತಿಯೊಂದು ವಿದ್ಯಾಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣವನ್ನು ಜೋಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಹಿರಿಯರ ಬಗೆಗಿನ ಗೌರವ, ತಮ್ಮ ಕುಟುಂಬದ ಕುರಿತು ಅವರಲ್ಲಿ ಇರಬೇಕಾದ ಪ್ರೀತಿ, ಕಾಳಜಿಗಳನ್ನು ಬೆಳೆಸುವುದರ ಮೂಲಕ ಸಮಾಜವನ್ನು ಉನ್ನತ ಸ್ಥಾನಕ್ಕೆ ಏರಿಸುವ ಕೆಲಸ ಮಾಡಬೇಕಾಗಿದೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವಿದ್ಯಾಭ್ಯಾಸವನ್ನು ಪೂರೈಸುವುದರ ಜೊತೆಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಲೋಕಯ್ಯ ಡಿ ವಹಿಸಿಕೊಂಡು ಶಿಕ್ಷಣವು ಜ್ಞಾನಾರ್ಜನೆ ಚಟುವಟಿಕೆಯ ಒಂದು ಭಾಗವಾಗಿದೆ. ಚಟುವಟಿಕೆ ಆಧಾರಿತ ಶಿಕ್ಷಣ ಜೀವನ ಶಿಕ್ಷಣವನ್ನು ನೀಡುತ್ತದೆ. ಇಂತಹ ಶಿಕ್ಷಣದಲ್ಲಿ ಬದಲಾವಣೆ ಆಗಬೇಕಾದರೆ ಮೊದಲು ಶಿಕ್ಷಕರಲ್ಲಿ ಬದಲಾವಣೆಯಾಗಬೇಕು ಭಾರತೀಯತೆಯನ್ನು ಶಿಕ್ಷಣದಲ್ಲಿ ತರುವಂತಹ ಅತಿಮುಖ್ಯ ಕೆಲಸ ಶಿಕ್ಷಕರಾದಾಗಬೇಕು. ಅಲ್ಲದೆ ಪಂಚಕೋಶ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಇದರ ವಿಕಾಸ ಆಗಬೇಕಾದರೆ ನೈತಿಕ ಶಿಕ್ಷಣ ಹಾಗೂ ಆಧ್ಯಾತ್ಮಿಕ ಶಿಕ್ಷಣ ಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ನಾಲ್ಕು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತಮಂಡಳಿ ಸಂಚಾಲಕರಾದ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ವಿಭಾಗದ ಸುಮಾರು 25 ಸಂಸ್ಥೆಗಳ 750 ರಷ್ಟು ಶಿಕ್ಷಕ ಶಿಕ್ಷಕೇತರ, ಆಡಳಿತಮಂಡಳಿ ಸದಸ್ಯರು ಭಾಗಿಯಾದರು. ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆಯ ವಿಜ್ಞಾನ ವಿಶೇಷ ಪ್ರಮಖ್ ರಘುರಾಮ್ ಸಿ ಸ್ವಾಗತಿಸಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್ ವಂದಿಸಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.


