ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ 79 ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡು ಬೈಲ್ ಧ್ವಜಾರೋಹಣ ನೆರವೇರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ತ್ಯಾಗ , ಬಲಿದಾನ ಮಾಡಿದ, ಭಗತ್ ಸಿಂಗ್, ವೀರ ಸಾವರ್ಕರ್ , ಸುಭಾಷ್ ಚಂದ್ರ ಬೋಸ್, ಅಹಿಂಸಾ ತತ್ವದಲ್ಲಿ ಅನೇಕ ಚಳುವಳಿಗಳ ಮೂಲಕ ಸ್ವಾತಂತ್ರ್ಯ ಸಂಗ್ರಾಮ ದ ಚುಕ್ಕಾಣಿ ಹಿಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಮೊದಲಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ನಿಸ್ವಾರ್ಥ ಸೇವೆ, ಅವರ ದೇಶ ಪ್ರೇಮ ನಮಗೆಲ್ಲರಿಗೂ ಆದರ್ಶ. “ನನ್ನ ದೇಶ ನನ್ನ ಹೆಮ್ಮೆ ” ಎಂಬ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯಿಂದ ನಮ್ಮ ರಾಷ್ಟ್ರಕ್ಕೆ ಸುರಕ್ಷತೆ ನೀಡುವಲ್ಲಿ ನಮ್ಮ ಯೋಧರನ್ನು, ದೇಶಕ್ಕೆ ಅನ್ನ ನೀಡುವ ನಮ್ಮ ರೈತರನ್ನು ನಾವು ಸದಾ ಗೌರವಿಸಬೇಕು ಎಂದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ತಮ್ಮ ಸ್ವಾತಂತ್ರ್ಯ ಶುಭಾಶಯ ನುಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ನಮ್ಮ ಯೋಧರ ತಮ್ಮ ಜೀವವನ್ನು ಪಣಕ್ಕಿಟ್ಟು ನಮಗೆ ಸುರಕ್ಷತೆ ನೀಡುತ್ತಿರುವಾಗ ,ದೇಶದ ಒಳಗೆ ಭಯೋತ್ಪಾದನೆ ಮತ್ತು ಸಾಮಾಜಿಕ ಅಶಾಂತಿಯ ಸೃಷ್ಟಿಸುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಎಚ್ಚೆತ್ತು ದೇಶ ರಕ್ಷಣೆ ಮತ್ತು ಭಾರತದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಾವು ನಮ್ಮ ಕರ್ತವ್ಯವನ್ನು ಯಥಾವತ್ತಾಗಿ ಮಾಡಿದರೆ ; ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹಿರಿಯರನ್ನು ಗೌರವಿಸಿ , ಅವರ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಉತ್ತಮ ಕಲಿಕೆ ಮತ್ತು ಸುಸಂಸ್ಕೃತ ಜೀವನ ನಡೆಸಿದರೆ ನಮ್ಮ ಜೀವನ ಸಾರ್ಥಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ , ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಉಪಸ್ಥಿತರಿದ್ದರು. ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಗಳಾದ ಪ್ರಕೃತಿ, ರಮ್ಯಾ , ಮೋಕ್ಷ ರಾಷ್ಟ್ರ ಗೀತೆ ಮತ್ತು ಧ್ವಜಗೀತೆ ಹಾಡಿದರು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ನಾಯಕ ರಾಕೇಶ್ ಸ್ವಾಗತಿಸಿ,ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ವರ್ಷಿಣಿ ವಂದಿಸಿದರು. ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.