ಸವಣೂರು: ಪಾಲದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ತೋಡಿಗೆ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ.
ಪಾಲ್ತಾಡಿ ಗ್ರಾಮದ ಚೆನ್ನಾವರ ಬರಮೇಲು ನಿವಾಸಿ ದಿ.ಮಾಲಿಂಗ ನಾಯ್ಕ ಎಂಬವರ ಪುತ್ರಿ ರಾಧಾ (42 ವ.) ಎಂಬವರೇ ಮೃತಪಟ್ಟವರು.
ರಾಧಾ ಅವರು ಬುದ್ಧಿ ಮಾಂದ್ಯತೆ ಹಾಗೂ ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು,ಅವಿವಾಹಿತರಾಗಿದ್ದ ಅವರು,ಆ.31ರಂದು ಸಂಜೆ ಮನೆಯಲ್ಲಿ ಕಾಣದೇ ಇದ್ದುದರಿಂದ ಅವರ ತಾಯಿ ಚೆನ್ನಮ್ಮ ಅವರು ಹುಡುಕಿಕೊಂಡು ಹೋದಾಗ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ತೋಡಿನ ನೀರಿನೊಳಗೆ ರಾಧಾ ಬಿದ್ದುಕೊಂಡಿರುವುದು ಕಂಡು ಬಂದಿದ್ದು, ಬಳಿಕ ನೆರೆಕರೆಯವರ ಸಹಾಯದಿಂದ ರಾಧಾರನ್ನು ನೀರಿನಿಂದ ಮೇಲೆತ್ತಿ ಮನೆಗೆ ತಂದು ಉಪಚರಿಸಿದರೂ ಆದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಡಿ.ಎನ್.ಈರಯ್ಯ ಹಾಗೂ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಪಾಲ್ತಾಡಿ ಗ್ರಾಮ ಸಹಾಯಕ ಬಾಬು ಬಿ. ಅವರು ಭೇಟಿ ನೀಡಿದರು.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಮೃತದೇಹ ಹಸ್ತಾಂತರಿಸಲಾಯಿತು.ಈ ಕುರಿತು ಮೃತರ ಅಕ್ಕ ಪುಷ್ಪಾವತಿ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.