ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ
ಪುತ್ತೂರು: ಇನ್ನು ಮಳೆಗಾಲ ಆರಂಭ ಮತ್ತು ಕೊನೇ ದಿನಗಳಲ್ಲಿ ಬರುವ ಸಿಡಿಲಿಗೆ ಪುತ್ತೂರು ಬಿರುಮಲೆ ಬೆಟ್ಟ ಆಸುಪಾಸಿನ ಸುಮಾರು 2 ಕಿ ಮೀ ಸುತ್ತಳತೆಯ ಮಂದಿ ಭಯಪಡುವ ಅಗತ್ಯವಿಲ್ಲ. ಎಷ್ಟೇ ಅಬ್ಬರದ ಮಿಂಚು, ಸಿಡಿಲು ಬಂದರೂ ಅದನ್ನು ತಡೆಯುವ ಆಧುನಿಕ ತಂತ್ರಜ್ಞಾನದ ಮಿಂಚು ಬಂಧಕವನ್ನು ಬಿರುಮಲೆ ಬೆಟ್ಟದಲ್ಲಿ ಅಳವಡಿಸಲಾಗಿದೆ. ಸೆ.28 ರಂದು ಇದರ ಲೋಕಾರ್ಪಣೆಯೂ ನಡೆಯಲಿದೆ. ಮಿಂಚು ಬಂಧಕ ಅಳವಡಿಸಬೇಕೆಂದು ಪುತ್ತೂರು ಜನತೆಯ ಬಹುಕಾಲದ ಬೇಡಿಕೆಯನ್ನು ಶಾಸಕ ಅಶೋಕ್ ರೈ ಈಡೇರಿಸಿದ್ದಾರೆ. ಪ್ರಾರಂಭದ ಪ್ರಾಯೋಗಿಕ ಹಂತದ ಮಿಂಚು ಬಂಧಕ ಇದಾಗಿದ್ದು ಬಿರುಮಲೆ ಬೆಟ್ಟ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಿವಿಧ ಕಡೆಗಳಲ್ಲಿ ಈ ಮಿಂಚು ಬಂಧಕ ಪ್ರಾಯೋಗಿಕವಾಗಿ ಅಳವಡಿಸುವ ಸಿದ್ದತೆಗಳು ನಡೆಯುತ್ತಿದೆ.
ಕರಾವಳಿ ಭಾಗದಲ್ಲಿ ಪ್ರತೀ ಮಳೆಗಾಲ ಆರಂಭದ ದಿನ ಮತ್ತು ಮಳೆಗಾಲ ಕೊನೇಯ ದಿನಗಳಲ್ಲಿ ಸಿಡಿಲ ಅಬ್ಬರ ಜೋರಾಗಿಯೇ ಇರುತ್ತದೆ. ಅನೇಕ ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆ ಹೆಚ್ಚಾಗಿ ಈ ಅವಘಡಕ್ಕೆ ಬಲಿಯಾಗುತ್ತಿದ್ದಾರೆ. ಕೃಷಿ ಕೆಲಸ ಮಾಡಿಕೊಳ್ಳುತ್ತಿರುವಾಗ , ಕೃಷಿ ಪಂಪ್ ಶೆಡ್ಗಳಲ್ಲಿ, ಮನೆಗೆ ಸಿಡಿಲು ಬಡಿತ ಹೀಗೇ ಹತ್ತು ಹಲವು ಕಾರಣಗಳಿಂದ ಸಾವುಗಳು ಉಂಟಾಗುತ್ತಿದೆ. ಸಿಡಿಲಿನ ಆಘಾತಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಐದಾರು ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದಾರೆ. ಈ ಆಘಾತದಿಂದ ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ಅತ್ಯಾಧುನಿಕ ತಂತ್ರಜ್ಞಾನದ ಮಿಂಚು ಬಂಧಕ ಅಳವಡಿಸಲಾಗಿದೆ.

ವ್ಯಾಪ್ತಿ ಎಷ್ಟು ದೂರ?
ಪ್ರಾಯೋಗಿಕವಾಗಿ ಬಿರುಮಲೆ ಬೆಟ್ಟದಲ್ಲಿ ಈ ಬಂಧಕವನ್ನು ಅಳವಡಿಸಲಾಗಿದೆ. ವಾಯು ಮಾರ್ಗದ ಮೂಲಕ ಇದರ ವ್ಯಾಪ್ತಿಯನ್ನು ಪರಿಗಣಿಸಲಾಗುತ್ತದೆ. ಬಿರುಮಲೆ ಬೆಟ್ಟವನ್ನು ಕೇಂದ್ರೀಕರಿಸಿ ಎರಡು ಕಿ ಮೀ ಸುತ್ತಳತೆಯಲ್ಲಿ ಇದು ತಮ್ಮ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಎಲ್ಲೇ ಮಿಂಚು ಹೊಡೆದರೂ ಅದನ್ನು ಇದು ಸ್ವೀಕರಿಸುತ್ತದೆ ಮತ್ತು ಅಲ್ಲೇ ಅದರ ಶಕ್ತಿಯನ್ನು ಕಡಿಮೆ ಮಾಡಿ ಭೂಮಿಯೊಳಗೆ ಸೇರಿಸಿಕೊಳ್ಳುತ್ತದೆ ಇದರಿಂದ ಮಿಂಚಿನಿಂದ ಉಂಟಾಗುವ ಅಪಾಯವನ್ನು ತಪ್ಪಿಸುತ್ತದೆ. ಈ ಎರಡು ಕಿ ಮೀ ವ್ಯಾಪ್ತಿಯಲ್ಲಿ ಸಿಡಿಲು ಮಿಂಚಿಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗುವುದಿಲ್ಲ ಮತ್ತು ವಿದ್ಯುತ್ ಪ್ರವಹಕ ಯಂತ್ರಗಳು ಹಾನಿಯಾಗುವುದಿಲ್ಲ.
ಪ್ರಯೋಗ ಯಶಸ್ವಿಯಾದರೆ ಪ್ರತೀ ಗ್ರಾಮಗಳಲ್ಲೂ ಮಿಂಚು ಬಂಧಕ
ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವ ಮಿಂಚು ಬಂಧಕ ಯಶಶ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಪ್ರತೀ ಗ್ರಾಮಗಳಲ್ಲಿ ಅವಶಕ್ಯಕತೆಗನುಗುಣವಾಗಿ ಮಿಂಚು ಬಂಧಕವನ್ನು ಅಳವಡಿಸಲಾಗುತ್ತದೆ.
ಪ್ರತೀ ಮಳೆಗಾಲದಲ್ಲಿ ಸಿಡಿಲು ಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದೆ, ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿದೆ, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗುತ್ತಿದೆ ಜೊತೆಗೆ ಸಿಡಿಲಿನಿಂದ ಜನತೆ ಕೂಡ ಭಯಗೊಳ್ಳುತ್ತಾರೆ ಇದೆಲ್ಲದರಿಂದ ರಕ್ಷಣೆ ಹೊಂದುವ ಸಲುವಾಗಿ ಜನರ ಬೇಡಿಕೆಯಂತೆ ಪ್ರಾಯೋಗಿಕವಾಗಿ ನಾಲ್ಕು ವಿವಿಧ ಕಡೆಗಳಲ್ಲಿ ಮಿಂಚು ಬಂಧಕ ಅಳವಡಿಸಲಾಗುತ್ತದೆ. ಪೃಕೃತಿ ವಿಕೋಪ ಆದಾಗ ಜನರ ಜೀವ ರಕ್ಷಣೆ ಮಾಡಬೇಕಾಗಿರುವುದು ಕೂಡಾ ಸರಕಾರದ ಕರ್ತವ್ಯ ಎಂಬ ನಿಟ್ಟಿನಲ್ಲಿ ತನ್ನ ಕ್ಷೇತ್ರದ ಜನತೆಯ ರಕ್ಷಣೆಗೋಸ್ಕರ ಈ ಮಿಂಚು ಬಂಧಕವನ್ನು ಅಳವಡಿಸಲಾಗುತ್ತಿದೆ.
ಅಶೋಕ್ ರೈ, ಶಾಸಕರು ಪುತ್ತೂರು