ಕಾಣಿಯೂರು: ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಿಂದ ಬೆಳಂದೂರು ಶಾಲೆಗೆ ವರ್ಗಾವಣೆಗೊಂಡ ಜಯಪ್ರಭ ಯು.ಆರ್ ಮತ್ತು ಪಳ್ಳತ್ತಾರು ಶಾಲೆಗೆ ವರ್ಗಾವಣೆಗೊಂಡ ಕುಶಾಲಪ್ಪ ಟಿ. ಇವರನ್ನು ಬೀಳ್ಕೊಡುವ ಸಮಾರಂಭವು ಶಾಲೆಯಲ್ಲಿ ನಡೆಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಂಗಾಧರ ಗೌಡರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಪ್ರವೀಣ್ ಕುಮಾರ್ ಕೆಡೆಂಜಿಯವರು ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕರಾದ ಸೀತಾರಾಮ, ಸಂತೋಷ್, ವೀರಾ ಡಿ’ಸೋಜ ಮತ್ತು ಶಾಲಾ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವರ್ಗಾವಣೆಗೊಂಡ ಶಿಕ್ಷಕರನ್ನು ನೆನಪಿನ ಕಾಣಿಕೆ, ಫಲಪುಷ್ಪ ನೀಡಿ,ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರು ಶಾಲೆಗೆ ಗ್ರೈಂಡರ್ ಒಂದನ್ನು ಕೊಡುಗೆಯಾಗಿ ನೀಡಿದರು. ಕೆಡೆಂಜಿ ದಿ.ಶ್ರೀಧರ ಪೂಜಾರಿ ಸ್ಮಾರಕ ದತ್ತಿ ನಿಧಿ,ಬರೆಪ್ಪಾಡಿ ದಿ.ಮಮತಾ ಸ್ಮಾರಕ ದತ್ತಿ ನಿಧಿ,ಬರೆಪ್ಪಾಡಿ ದಿ.ಬಾಬು ಕಡಂಬ ಸ್ಮಾರಕ ದತ್ತಿ ನಿಧಿ,ಕುದ್ಮಾರು ದಿ.ಬಾಬು ಗೌಡ ಸ್ಮಾರಕ ದತ್ತಿ ನಿಧಿ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಮಾಜಿ ಪ್ರಧಾನಿ ವಾಜಪೇಯಿ ಅವರ ಸ್ಮರಣಾರ್ಥ ವೈದ್ಯಕೀಯ ದತ್ತಿ ನಿಧಿಯನ್ನು ಅನಾರೋಗ್ಯ ಪೀಡಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಜುಲಿಯಾನಾ ಡಿ’ಸೋಜ ಸ್ವಾಗತಿಸಿ, ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸುರೇಶ್, ಪ್ರಿಯಾಂಕಾ, ಶ್ರೀಲತಾ ಸಹಕರಿಸಿದರು.