- ಜನರಿಗೆ ವೇಗವಾಗಿ ಡಿಜಿಟಲ್ ಸೇವೆ ನೀಡುವುದೇ ನಮ್ಮ ಉದ್ದೇಶ-ಆನಂದ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಆಶ್ರಯದಲ್ಲಿ ಡಿಜಿಟಲ್ ಸೇವೆಯಾದ (ಮುಕ್ವೆ, ಶಾಂತಿಗೋಡು, ನರಿಮೊಗರು ಹಾಗೂ ವೀರಮಂಗಲ ವ್ಯಾಪ್ತಿಗೊಳಪಟ್ಟು) ಕಾಮನ್ ಸರ್ವೀಸ್ ಸೆಂಟರ್(ಸಿ.ಎಸ್.ಸಿ) ಪುರುಷಕರಕಟ್ಟೆ ಎ2 ಕಾಂಪ್ಲೆಕ್ಸ್ನಲ್ಲಿ ಫೆ.2ರಂದು ಶುಭಾರಂಭಗೊಂಡಿತು.
ಜನರಿಗೆ ಡಿಜಿಟಲ್ ಸೇವೆ ನೀಡುವ ಉದ್ದೇಶ-ಆನಂದ
ಧ.ಗ್ರಾ.ಯೋ.ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರವೂ ಡಿಜಿಟಲೀಕರಣಗೊಳ್ಳುತ್ತಿದ್ದು ಇಂತಹ ಸಂದರ್ಭದಲ್ಲಿ ಡಿಜಿಟಲ್ ಸೇವಾ ಕೇಂದ್ರದ ಮೂಲಕ ಜನರಿಗೆ ವೇಗವಾಗಿ ಸೇವೆ ನೀಡುವ ಅನಿವಾರ್ಯತೆಯಿದೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶಕ್ಕಾಗಿ ಇಲ್ಲಿ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಯಾವುದೇ ಲಾಭದ ಉದ್ದೇಶಕ್ಕಾಗಿ ಮಾಡಿದ್ದಲ್ಲ ಎಂದು ಅವರು ಹೇಳಿದರು. ತಳಮಟ್ಟದಲ್ಲಿ ರಿಯಾಯಿತಿ ದರದಲ್ಲಿ ಜನರಿಗೆ ಡಿಜಿಟಲ್ ಸೇವೆ ನೀಡುವ ಉದ್ದೇಶದಿಂದ ಸಿ.ಎಸ್.ಸಿ.ಯನ್ನು ವಿವಿಧ ಕಡೆಗಳಲ್ಲಿ ಪ್ರಾರಂಭಿಸಲಾಗುತ್ತಿದ್ದು ರಾಜ್ಯದ ನಾನಾ ಕಡೆಗಳಲ್ಲಿ ಈ ಸೇವೆ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಕಚೇರಿ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಿಜಿಟಲ್ ಸೇವೆ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ, ಇಲ್ಲಿನ ಸೇವಾ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ ವ್ಯವಸ್ಥೆಯನ್ನೂ ಕಲ್ಪಿಸಿದರೆ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ದೀಪ ಬೆಳಗಿಸಿ ಸಭೆ ಉದ್ಘಾಟಿಸಿದರು ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಮಾತನಾಡಿ ಇಲ್ಲಿ ಪ್ರಾರಂಭಗೊಂಡಿರುವ ಡಿಜಿಟಲ್ ಸೇವಾ ಕೇಂದ್ರದ ಮೂಲಕ ಜನರಿಗೆ ಉತ್ತಮ ಸೇವೆ ದೊರಕಲಿ ಎಂದು ಹೇಳಿ ಶುಭ ಹಾರೈಸಿದರು.
ಧ.ಗ್ರಾ.ಯೋಜನೆ ನರಿಮೊಗರು ಬಿ ಒಕ್ಕೂಟದ ಅಧ್ಯಕ್ಷ ಮಂಜುನಾಥ ಶೇಖ ಮಾತನಾಡಿ ಯೋಜನೆಯ ಮೂಲಕ ನಿರಂತರ ಬದಲಾವಣೆ ಆಗುತ್ತಲೇ ಇದ್ದು ಅನೇಕ ಜನಪರ ಕಾರ್ಯಯೋಜನೆಗಳು ಜನರಿಗೆ ಲಭ್ಯವಾಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಇ-ಶ್ರಮ್ ಯೋಜನೆಗೆ ಚಾಲನೆ:
ಕಾರ್ಯಕ್ರಮದಲ್ಲಿ ಮಹಿಳೆಯೋರ್ವರಿಗೆ ಇ-ಶ್ರಮ್ ಕಾರ್ಡ್ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು ನರಿಮೊಗರು ಎ ಒಕ್ಕೂಟದ ಅಧ್ಯಕ್ಷ ಗಣೇಶ್, ಎ೨ ಕಟ್ಟಡದ ಮಾಲಕ ಅಬ್ದುಲ್ಲ ಹಾಜಿ, ಕೆಮ್ಮಿಂಜೆ ವಲಯದ ಸೂಪರ್ ವೈಸರ್ ಯೋಗೀಶ್ವರಿ ಸಿಎಸ್ಸಿ ಸಿಬ್ಬಂದಿ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಕ್ವೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪೂಜಾ ವಸಂತ್, ನರಿಮೊಗರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೋಹಿಣಿ, ಶಾಂತಿಗೋಡು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನುರಾಧ, ವೀರಮಂಗಲ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಮಾಲಿನಿ, ಯೋಜನೆಯ ಆನಂದ, ರಘುನಾಥ, ರೂಪಾ, ಲಕ್ಷ್ಮೀ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.
ಮುಕ್ವೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪೂಜಾ ವಸಂತ್ ಸ್ವಾಗತಿಸಿದರು. ಕೆಮ್ಮಿಂಜೆ ವಲಯದ ಸೂಪರ್ ವೈಸರ್ ಯೋಗೀಶ್ವರಿ ಕಾರ್ಯಕ್ರಮ ನಿರೂಪಿಸಿದರು.