ರಾಮಕುಂಜದಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಬಂದು ಹಿಂದಿರುಗುತ್ತಿದ್ದ ವೇಳೆ ಕಾರು ಅಪಘಾತಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಬಿಸಿರೋಡ್‌ನ ಕಾರ್ತಿಕ್ ಮೃತ್ಯು

0

ಪುತ್ತೂರು: ರಾಮಕುಂಜದಲ್ಲಿ ಸಂಬಂಧಿಕರ ಮನೆಯಲ್ಲಿ ಮೆಹೆಂದಿ ಶಾಸ್ತ್ರದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ನೆಕ್ಕಿಲಾಡಿ ಗ್ರಾಮದ ಬೊಳ್ಳಾರಿನಲ್ಲಿ ಫೆ.5ರಂದು ನಸುಕಿನ ಜಾವ ನಡೆದ ರಿಡ್ಜ್ ಕಾರು ಮತ್ತು ಬೊರ್‌ವೆಲ್ ಲಾರಿ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬಿಸಿರೋಡ್‌ನ ಕಾರ್ತಿಕ್ ಎಂಬವರು ಫೆ. 7ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 

ಬಿಸಿರೋಡ್‌ನ ಬಂಟ್ವಾಳ ಕಸಬ ನಿವಾಸಿ ವೀರಪ್ಪ ಎಂಬವರ ಪುತ್ರ ಎಲೆಕ್ಟ್ರೀಷಿಯನ್ ಕೆಲಸ ನಿರ್ವಹಿಸುತ್ತಿರುವ ಕಾರ್ತಿಕ್(31ವ) ಮೃತಪಟ್ಟವರು. ಅವರು ಫೆ. 4ರಂದು ರಾಮಕುಂಜದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿರುವ ಮದುರೆಂಗಿ ಶಾಸ್ತ್ರಕ್ಕೆ ಆಗಮಿಸಿ ಸ್ನೇಹಿತರಾದ ಬಿಸಿರೋಡ್ ನಿವಾಸಿ ಕಾರು ಚಾಲಕ ರಕ್ಷಿತ್, ಸಂತೋಷ್ ಅವರ ಜೊತೆ ಫೆ.5ರ ನಸುಕಿನ ಜಾವ ಬಿಸಿರೋಡ್‌ಗೆ ಕಾರಿನಲ್ಲಿ ಹಿಂದುರುಗುತ್ತಿದ್ದ ವೇಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಬೊಳ್ಳಾರ್ ಪೆಟ್ರೋಲ್ ಪಂಪ್ ಕಡೆಯಿಂದ ಮೈರಕಟ್ಟೆಗೆ ಹೋಗುತ್ತಿದ್ದ ಬೋರ್‌ವೆಲ್ ಲಾರಿಯ ಹಿಂಬದಿಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಕಾರಿನ ಎಡಭಾಗವು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಪ್ರಯಾಣಿಕ ಕಾರ್ತಿಕ್ ಮತ್ತು ಸಂತೊಷ್ ಅವರಿಗೆ ತೀವ್ರ ಗಾಯವಾಗಿತ್ತು. ಗಾಯಾಳುಗಳಿಬ್ಬರನ್ನು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಕಾರ್ತಿಕ್ ಅವರು ಫೆ.7ರಂದು ತಡ ರಾತ್ರಿ ನಿಧನರಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here