- ಗ್ರಾಮೀಣ ಪ್ರದೇಶದ ಪ್ರತಿಭೆಗಳ ಗುರುತಿಸುವಿಕೆಗೆ ಉತ್ತಮ ವೇದಿಕೆ-ಯು.ಜಿ. ರಾಧಾ
ಉಪ್ಪಿನಂಗಡಿ: ಗ್ರಾಮೀಣ ಪ್ರದೇಶದಲ್ಲಿ ಅಡಕವಾಗಿರುವ ಬಹಳಷ್ಟು ಪ್ರತಿಭೆಗಳು ಟಿ.ವಿ. ನೋಡುತ್ತಾ ನಾನೂ ಹೀಗೆ ಹಾಡಬೇಕು ಎಂದು ಕನಸು ಕಟ್ಟುತ್ತಿರುತ್ತಾರೆ, ಆದರೆ ಅವರಿಗೆ ಪ್ರೋತ್ಸಾಹ, ಮಾರ್ಗದರ್ಶನದ ಕೊರತೆ ಇರುತ್ತದೆ. ಈ ನಿಟ್ಟಿನಲ್ಲಿ ಮುಳಿಯ ಸಂಸ್ಥೆ ಈ ರೀತಿಯಾಗಿ ವೇದಿಕೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಜಿ. ರಾಧಾ ಹೇಳಿದರು.
ಅವರು ಮಾ. 12ರಂದು ಉಪ್ಪಿನಂಗಡಿಯಲ್ಲಿ ಪುತ್ತೂರು ಮುಳಿಯ ಸಂಸ್ಥೆ ಪ್ರಸ್ತುತ ಪಡಿಸಿದ ಮುಳಿಯ ಗಾನರಥ-ಕರೋಕೆ ಹಾಡುಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧಿಗಳಿಗೆ ಇದೊಂದು ಅವಕಾಶದ ಮುನ್ನುಡಿಯಾಗಿದ್ದು, ಇಲ್ಲಿಯ ಹೆಜ್ಜೆ ಭವಿಷ್ಯದ ಬುನಾದಿಯಾಗಲಿ ಎಂದು ಹಾರೈಸಿದರು. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮಾತನಾಡಿ ಮುಳಿಯ ಸಂಸ್ಥೆ ತಮ್ಮ ವ್ಯವಹಾರದ ಜೊತೆಗೆ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ, ಸೋಲು-ಗೆಲುವು ಇರುವಂತದ್ದೇ, ಆದರೆ ಇಂತಹ ಅವಕಾಶ ಲಭಿಸಿರುವುವುದೇ ಇಲ್ಲಿ ಸೇರಿರುವ ಸ್ಪರ್ಧಿಗಳ ಪಾಲಿಗೆ ಅದೃಷ್ಠ ಎಂದು ಹೇಳಬಹುದಾಗಿದೆ ಎಂದರು.
ವೇದಿಕೆಯಲ್ಲಿ ಮುಳಿಯ ಸಂಸ್ಥೆಯ ರವೀಶ್, ಸುಬ್ರಾಯ ಶರ್ಮ, ಲೋಕೇಶ್, ಸಂಜೀವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೀನಿಯರ್-೧೪, ಜ್ಯೂನಿಯರ್-೨೬ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಲಾವಿದರಾದ ಲಿಂಗಪ್ಪ ಗೌಡ ಮತ್ತು ಪಾಂಡುರಂಗ ನಾಯಕ್ ತೀರ್ಪುಗಾರರಾಗಿ ಸಹಕರಿಸಿದ್ದರು. ಮುಳಿಯ ಸಂಸ್ಥೆಯ ಪ್ರವೀಣ್ ಸ್ವಾಗತಿಸಿದರು. ಉದಯಕುಮಾರ್ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.