ವಿಟ್ಲ: ಕನ್ಯಾನ ಸಮೀಪದ ಕಣಿಯೂರಿನಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ವ್ಯವಸ್ಥಿತ ಕೊಲೆಯಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು. ಬಾಲಕಿ ಕುಟುಂಬಕ್ಕೆ ನ್ಯಾಯ ಸಿಗುವ ತನಕ ವಿಶ್ವ ಹಿಂದೂ ಪರಿಷದ್ ಹೋರಾಟ ನಡೆಸಲಿದ್ದು, ದಲಿತ ಸಂಘಟನೆಗಳು ಧ್ವನಿಯಾಗಬೇಕೆಂದು ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಅವರು ಮೇ.೫ರಂದು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾಹುಲ್ ಹಮೀದ್ 14ವರ್ಷದ ಬಾಲಕಿಯಲ್ಲಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಮತ್ತು ಆಕೆಯ ಮೇಲೆ ವಾಮಾಚಾರ ಪ್ರಯೋಗಗಳನ್ನು ಮಾಡಲಾಗಿದೆ. ಬಾಲಕಿಗೆ ಬುರ್ಕಾ ತೊಡಿಸಿ ಅವನ ಕುಟುಂಬದವರ ಸಹಕಾರದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ಆಕೆಯ ತಾಯಿ ಆರೋಪಿಸುತ್ತಾರೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಪ್ರಕರಣವಾಗಿದೆ. ಯುವತಿ ಅತ್ಮಹತ್ಯೆ ಮಾಡಿಕೊಂಡ ಸಮಯ ಮನೆಯ ಒಂದು ಬಾಗಿಲು ತೆರೆದಿತ್ತು ಮತ್ತು ಯುವತಿ ಕುತ್ತಿಗೆಯಲ್ಲಿ ಬೆರಳಿನ ಗುರುತೊಂದು ಇತ್ತೆಂಬ ಮಾಹಿತಿಯಿದೆ.
ಈ ಯುವಕ ಹಲವರ ಜತೆಗೆ ಸಂಪರ್ಕದಲ್ಲಿದ್ದು, ಕಿರುಕುಳವನ್ನು ನೀಡುತ್ತಿದ್ದ ಎಂಬ ಮಾಹಿತಿಯಿದೆ. ವಿಟ್ಲ ಪೊಲೀಸರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. 24ಗಂಟೆ ಕಳೆದರೂ ಆರೋಪಿಯ ಬಂಧನ ಮಾಡುವ ಕಾರ್ಯವಾಗಲೀ, ಮನೆಗೆ ತೆರಳಿ ತನಿಖೆ ನಡೆಸುವ ಕಾರ್ಯವಾಗಲೀ ಮಾಡಿಲ್ಲ. ಆರೋಪಿಯನ್ನು ಹಾಗೂ ಆತನ ಕುಟುಂಬವನ್ನು ಬಂಧಿಸಬೇಕು. ನ್ಯಾಯ ಸಿಗುವ ತನಕ ಹೋರಾಟ ನಡೆಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ವಿಟ್ಲ ತಾಲೂಕು ಅಧ್ಯಕ್ಷ ಪದ್ಮನಾಭ ಕಟ್ಟೆ, ಕನ್ಯಾನ ಅಧ್ಯಕ್ಷ ಲೋಕೇಶ್, ಭಜರಂಗದಳ ಕನ್ಯಾನ ಸಂಚಾಲಕ ಚಂದ್ರಹಾಸ ಉಪಸ್ಥಿತರಿದ್ದರು.