ಮರಳು ಗ್ರಾಹಕರ ಕುಂದುಕೊರತೆ ಆಲಿಸಲು ತುರ್ತು ಸಹಾಯವಾಣಿ ಆರಂಭಿಸಲು ಡಿ.ಸಿ.ಕರೆ

0

  • ಮರಳುಮಿತ್ರ ಆಪ್‌ನಲ್ಲಿ ಗುಣಮಟ್ಟ ಪರಿಶೀಲನೆ
  • ಮರಳು ಗಣಿಗಾರಿಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು
  • ಶಾಲಾ ರಸ್ತೆಗಳಲ್ಲಿ ಮರಳು ವಾಹನಗಳು ನಿಧಾನವಾಗಿ ಚಲಿಸಬೇಕು

 

ಮಂಗಳೂರು:ಜಿಲ್ಲೆಯ ಮರಳು ಗ್ರಾಹಕರ ಕುಂದುಕೊರತೆ ಆಲಿಸಲು ತುರ್ತಾಗಿ ಸಹಾಯವಾಣಿಯೊಂದನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಬಿ.ಎಂ.ಲಿಂಗರಾಜ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಮರಳು ಕುರಿತಂತೆ ಜಿಲ್ಲೆಯ ಸಾರ್ವಜನಿಕರ ಸಮಸ್ಯೆ ಆಲಿಸಲು ಹಾಗೂ ಅವುಗಳನ್ನು ಬಗೆಹರಿಸಲು ಅನುಕೂಲವಾಗುವಂತೆ ಆದಷ್ಟು ಬೇಗ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು ಎಂದರು. ಮಂಗಳೂರು ತಾಲ್ಲೂಕು ವ್ಯಾಪ್ತಿಯ ಫಲ್ಗುಣಿ ನದಿ ಪಾತ್ರದ ಆದ್ಯಪಾಡಿ ಅಣೆಕಟ್ಟು ಹಾಗೂ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯ ನೇತ್ರಾವತಿ ನದಿ ಪಾತ್ರದ ಶಂಬೂರು ಅಣೆಕಟ್ಟೆ ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವ ಕೆಲಸ ಆರಂಭವಾಗಿದ್ದು, ಈಗಾಗಲೇ ಶೇಖರಣೆಗೊಂಡಿರುವ ಮರಳನ್ನು ಗ್ರಾಹಕರಿಗೆ ಸರಿಯಾದ ಸಮಯಲ್ಲಿ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. `ಮರಳುಮಿತ್ರ ಆಪ್’ ಅಭಿವೃದ್ಧಿಗೊಂಡಿದ್ದು, ಮರಳಿನ ಗುಣಮಟ್ಟವನ್ನು ಗ್ರಾಹಕರು ಆನ್‌ಲೈನ್ ಮೂಲಕ ಪರಿಶೀಲಿಸಿ, ಮರಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು.ಇದರ ಬಗ್ಗೆ ವ್ಯಾಪಕ ಪ್ರಚಾರವಾಗಿ, ಜನಸಾಮಾನ್ಯರಿಗೆ ಉಪಯೋಗವಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ: ಮರಳು ಗಣಿಗಾರಿಕೆ ನಡೆಯುವ ಮತ್ತು ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು.ಶಾಲೆಗಳಿರುವ ರಸ್ತೆಗಳಲ್ಲಿ ಮರಳು ವಾಹನಗಳು ನಿಧಾನವಾಗಿ ಚಲಿಸಬೇಕು.ಜಿಲ್ಲೆಯಲ್ಲಿ ಮರಳಿನ ಸಂಗ್ರಹ ಪ್ರಮಾಣ, ಬುಕ್ಕಿಂಗ್ ಮಾಡಿದ ಗ್ರಾಹಕರು, ಈಗಾಗಲೇ ಮರಳು ತಲುಪಿದವರ ಪಟ್ಟಿಯನ್ನು ಪ್ರತಿವಾರ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ ಪುರಂದರ್ ಉಪಸ್ಥಿತರಿದ್ದರು.

 

ಮರಳು ಗಣಿಗಾರಿಕೆ ನಡೆಯುವ ಮತ್ತು ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು.ಶಾಲೆಗಳಿರುವ ರಸ್ತೆಗಳಲ್ಲಿ ಮರಳು ವಾಹನಗಳು ನಿಧಾನವಾಗಿ ಚಲಿಸಬೇಕು.ಜಿಲ್ಲೆಯಲ್ಲಿ ಮರಳಿನ ಸಂಗ್ರಹ ಪ್ರಮಾಣ, ಬುಕ್ಕಿಂಗ್ ಮಾಡಿದ ಗ್ರಾಹಕರು, ಈಗಾಗಲೇ ಮರಳು ತಲುಪಿದವರ ಪಟ್ಟಿಯನ್ನು ಪ್ರತಿವಾರ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು- ಡಾ.ರಾಜೇಂದ್ರ ಕೆ.ವಿ., ದ.ಕ.ಜಿಲ್ಲಾಧಿಕಾರಿ

LEAVE A REPLY

Please enter your comment!
Please enter your name here