ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 15ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

0
  • ಲೋಕಕಲ್ಯಾಣಕ್ಕಾಗಿ ಇಂತಹ ವೃತಚಾರಣೆಯ ಅಗತ್ಯತೆ ಬಹಳಷ್ಟಿದೆ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ವಿಟ್ಲ: ದೇಶದ ಭದ್ರತೆ ಕಾಯುವಲ್ಲಿ ಎಲ್ಲರ ಸಹಕಾರ ಅಗತ್ಯ‌. ಭಗವಂತ ನೀಡಿದ ಜೀವನವನ್ನು ಸಾರ್ಥಕ್ಯ ಮಾಡುವ ಮನಸ್ಸು ನಮ್ಮದಾಗಲಿ. ಸಂತರಿಂದ, ದಾರ್ಶಣಿಕರಿಂದ ಜನ ಕಲಿಯಬೇಕಾದದ್ದು ಹಲವಿದೆ. ಸಮಾಜದಿಂದ ನಮಗಾಗುವ ಅಪವಾದ, ವಿರೋಧವನ್ನು ಮೆಟ್ಟಿನಿಲ್ಲುವ ಛಲ ನಮ್ಮಲಿರಬೇಕು. ಲೋಕಕಲ್ಯಾಣಕ್ಕಾಗಿ ಇಂತಹ ವೃತಚಾರಣೆಯ ಅಗತ್ಯತೆ ಬಹಳಷ್ಟಿದೆ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.


ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.5ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ 15ನೇ ದಿನವಾದ ಜು.3ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.


ನಮ್ಮ ಆಹಾರ ಪದ್ದತಿಯ ಮೇಲೆ ನಮಗೆ ನಿಘಾ ಅಗತ್ಯ. ನಿತ್ಯಾನಂದರ ಸಂಕಲ್ಪ ಕಳೆದ 23 ವರುಷಗಳಿಂದ ಮಾಣಿಲದಲ್ಲಿ ಸಾಕಾರಗೊಳ್ಳುತ್ತಿದೆ. ಗುರು ಹಾಗು ಗುರಿ ಇದ್ದರೆ ಜೀವನದಲ್ಲಿ ಸಾರ್ಥಕ್ಯ ಪಡೆಯಬಹುದು. ನಾನು ನನ್ನದೆಂಬ ಭ್ರಮೆಯಿಂದ ಹೊರಬಂದು ಎಲ್ಲರನ್ನೂ ಪ್ರೀತಿಸುವ ಮನಸ್ಸು ನಿಮ್ಮಲ್ಲಿರಬೇಕು. ಭಕ್ತಿ ಮಾರ್ಗದಿಂದ ಮಾತ್ರ ಜಗತ್ತು ಉಳಿಯಲು ಸಾಧ್ಯ. ಭೂಮಿ ಕಂಪಿಸುವುದು ಅನ್ಯಾಯ ಅಧರ್ಮದ ಪರಮಾವಧಿಯಾಗಿದೆ. ಸಿಟ್ಟು, ಉದ್ವೇಗ, ಆಕ್ರೋಷ ಬಿಟ್ಟು ಮುನ್ನಡೆಯಿರಿ. ಸ್ವಸ್ಥ ಸಮಾಜದ ನಿರ್ಮಾಣ ಈ ವೃತಚಾರಣೆಯ ಉದ್ದೇಶವಾಗಿದೆ.


ಲಕ್ಷ್ಮೀ ಸಂಪತ್ತಿನ ಅಧಿಪತಿ. ಬದುಕಿನುದ್ದಕೂ ಸತ್ಕರ್ಮವನ್ನು‌ ಮಾಡಿ ಜೀವನವನ್ನು ಸಾರ್ಥಕ್ಯ ಪಡಿಸಿಕೊಳ್ಳಿ. ಜಾತಿ ಮತ ಬೇದ ಮರೆತು ಒಗ್ಗಟ್ಟಾಗಿ ಜೀವನ ನಡೆಸುವ ಮನಸ್ಸು ನಮ್ಮದಾಗಬೇಕು ಎಂದರು.

ಕುದ್ರೋಳಿ‌ ಗೋಕರ್ಣನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿ ಪದ್ಮನಾಭ ರಾಜ್‌ ಆರ್.ರವರು ಮಾತನಾಡಿ ಯೋಗ ಭಾಗ್ಯ ಕೂಡಿ ಬಂದಾಗ ಯಾವುದೇ ಕಾರ್ಯವೂ ಯಶಸ್ಸಾಗಲು‌ ಸಾಧ್ಯ.ಈ ಬಾಲಬೋಜನದಲ್ಲಿ ಭಾಗವಹಿಸಿದ ಮಕ್ಕಳು ಮುಂದಿನ ದಿನಗಳ ಸತ್ಪ್ರಜೆ ಯಾಗಿ ಬಾಳಲು ಸಾಧ್ಯ. ಲೋಕಕಲ್ಯಾಣಾರ್ತವಾಗಿ ಮಾಡುವ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ. ಜಗತ್ತಿನ ವಾತಾವರಣವನ್ನು ನಾವು ಆಲೋಚಿಸುವ ಅಗತ್ಯತೆ ಬಹಳಷ್ಟಿದೆ. ಸಾಮರಸ್ಯದಿಂದ ಬದುಕುವ ಮನಸ್ಸು ನಮ್ಮದಾಗಲಿ. ದೇಶ, ಜಗತ್ತಿನಲ್ಲಿ ಶಾಂತಿ ನೆಲೆಯೂರಲಿ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಶ್ರೀಧಾಮ ಮಾಣಿಲದಿಂದ ಆಗುತ್ತಿರುವುದು ಸಂತಸ ತಂದಿದೆ ಎಂದರು.

ಸರಪಾಡಿ‌ ಶ್ರೀ ಶರಭೇಶ್ವರ ಕ್ಷೇತ್ರದ ಜೀರ್ಣೋದ್ದಾರ ಸಮಿತಿ‌ ಅಧ್ಯಕ್ಷ ಜಗನ್ನಾಥ ಚೌಟ, ಅಳಿಕೆ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೌಡ ಶಾಲಾ ಅಧ್ಯಾಪಕರಾದ ಯತಿರಾಜ್, ಪುರುಷೋತ್ತಮ ಪೆರುವಾಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಮಿತಿ‌ ಅಧ್ಯಕ್ಷೆ ವನಿತಾ ವಿ ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬೆಳಗ್ಗೆ ಗಣಪತಿ ಹವನ, ಶ್ರೀ ವಿಠೋಭ ರುಕ್ಕಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆಬಳಿಕ ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here