ನೆಲ್ಯಾಡಿ: ‘ಓದುವ ಬೆಳಕು’ ಕಾರ್ಯಕ್ರಮದಡಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಅಂಗವಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚದುರಂಗ ಸ್ಪರ್ಧೆ ಆ.4ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ವನಿತಾರವರು ಉದ್ಘಾಟಿಸಿ ಶುಭಹಾರೈಸಿದರು. ತೀರ್ಪುಗಾರರಾಗಿ ಆಗಮಿಸಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್ ಪಿ.ಎಂ.,ರವರು ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷೆ ಭವಾನಿ ಜಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಹನೀಫ್ ಎಂ., ಸುಧಾಕರ, ದಿನೇಶ್ಕುಮಾರ್, ಸವಿತಾಸರ್ವೋತ್ತಮ, ಡೈಸಿ ವರ್ಗೀಸ್, ಹೊಸಮಜಲು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಗೌಡ, ಇಚ್ಲಂಪಾಡಿ ನೇರ್ಲ ಶಾಲಾ ಶಿಕ್ಷಕ ಗಿರೀಶ್, ಹೊಸ್ತೋಟ ಶಾಲಾ ಮುಖ್ಯಶಿಕ್ಷಕಿ ಮಾಲತಿ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು. ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಚ್ಲಂಪಾಡಿ ನೇರ್ಲ, ಹೊಸಮಜಲು ಹಾಗೂ ಹೊಸ್ತೋಟ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.