ವೃತಾಚರಣೆಯಿಂದ ಮಾನವೀಯ ಮೌಲ್ಯ ಹೆಚ್ಚಾಗುತ್ತದೆ: ಮಾಣಿಲ ಶ್ರೀ
ವಿಟ್ಲ: ಸೇವೆ, ಹೃದಯ ಶ್ರೀಮಂತಿಕೆ ಹೆಚ್ಚಬೇಕು. ದೇಶದ ಉನ್ನತಿಗೆ, ಸಮಾಜದ ಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥನೆ ಮಹಾಲಕ್ಷ್ಮಿ ಗೆ ಸಲ್ಲಿಸಲಾಗುತ್ತದೆ. ಮಹಾಲಕ್ಷ್ಮೀ ವೃತಾಚರಣೆಯಿಂದ ಮಾನವೀಯ ಮೌಲ್ಯ ಹೆಚ್ಚಾಗುತ್ತದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಅವರು ಶ್ರೀಧಾಮ ಮಾಣಿಲದಲ್ಲಿ ಆ.5ರಂದು ನಡೆಯಲಿರುವ ವರಮಹಾಲಕ್ಷ್ಮೀ ವೃತಾಚರಣೆಯ ಅಂಗವಾಗಿ ಒಂದು ಮಂಡಲ ನಡೆದ ಬಾಲಭೋಜನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಹಿಂದೂ ಧರ್ಮದ ಆಚಾರ ವಿಚಾರದ ಉಳಿವಿಗಾಗಿ ಬಾಲಭೋಜನದಲ್ಲಿ ಭಾಗವಹಿಸಿದ ಮಕ್ಕಳ ಪಾತ್ರ ಅಪಾರವಿದೆ. ತ್ಯಾಗ ಮತ್ತು ಸೇವೆಗೆ ತಾಯಂದಿರ ಪಾತ್ರ ಅಪಾರ. ಆನಂದದ ಸಮ್ಮಿಲನ ಎಲ್ಲಾಕಡೆ ಉಂಟಾಗಿ ಲೋಕ ಕಲ್ಯಾಣವಾಗಲಿ. ನಮ್ಮಲ್ಲಿರುವ ಕೆಡುಕನ್ನು ಹೊರಹಾಕಿ ಉತ್ತಮ ಗುಣವನ್ನು ಮೈಗೂಡಿಸಿಕೊಳ್ಳಿ. ಪ್ರಕೃತಿಯನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಲಿ ಎಂದರು.
ಶ್ರೀಗಳ ಶಿಷ್ಯರಾದ ಶ್ರೀ ಚಿದಾನಂದ ಸ್ವಾಮೀಜಿ ಚಿಕ್ಕಮಂಗಳೂರು, ಟ್ರಸ್ಟಿ ಭಾಸ್ಕರ್ ಶೆಟ್ಟಿ ಪುಣೆ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ , ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ, ಕುಲದೀಪ್ ಸಿಂಗ್ ಮುಂಬೈ, ರೇವತಿ ವಾಮಯ್ಯ ಶೆಟ್ಟಿ ಮುಂಬೈ, ಸ್ವರದಾ ಮುಂಬೈ, ರೇಖಾ ದೇಸಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂರಾರು ಮಕ್ಕಳು: ಬಾಲಭೋಜನದಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ನಿರೀಕ್ಷಾ, ಶ್ರೇಯ, ಸಮೀಕ್ಷಾ, ನಿಶಾ, ದೀಕ್ಷಾ, ಗೀತಾಲಕ್ಷ್ಮೀ, ಚೈತ್ರರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗೀತಾ ಪುರುಷೋತ್ತಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಧಾಮ ಸೇವಾ ಸಮಿತಿಯ ಪೃಥ್ವಿರಾಜ್ ವಂದಿಸಿದರು.
ಬೆಳಗ್ಗೆ ಗಣಪತಿ ಹವನ, ಶ್ರೀ ವಿಠೋಭ ರುಕ್ಕಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ ಸಮಾಪ್ತಿ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ ಬಳಿಕ ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಬಳಿಕ ಶ್ರೀ ಲಕ್ಷ್ಮೀ ಪೂಜೆ, ನಾಗತನು ಪ್ರಸನ್ನ ಪೂಜೆ,ಶ್ರೀ ದತ್ತ ಯಾಗ, ಪಾದುಕಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಿತು.
ಇಂದು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ
ಕ್ಷೇತ್ರದಲ್ಲಿ ಆ. ೫ರಂದು ಬೆಳಗ್ಗೆ ದ್ವಾದಶ ನಾಳಿಕೇರ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀ ಗುರುಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಚಂಡಿಕಾಹೋಮ,ಕನಕದಾರಾ ಯಾಗ, ಲಕ್ಷ್ಮೀ ನಾರಾಯಣ ಹೃದಯ ಹೋಮ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ವಸೋರ್ಧಾರೆ, ಯಾಗದ ಪೂರ್ಣಾಹುತಿ, ಮಧ್ಯಾಹ್ನ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ. ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಾಮೂಹಿಕ ವಾಯನದಾನ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಬ್ರಹ್ಮಶ್ರೀ ಅಪ್ಪಣ್ಣ ಆಚಾರ್ಯರವರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.