ಪುತ್ತೂರು: ದೇಶಭಕ್ತಿ, ರಾಷ್ಟ್ರಲಾಂಛನಗಳಿಗೆ ಗೌರವ ಸಲ್ಲಿಸುವುದು ನಮ್ಮ ದಿನನಿತ್ಯದ ಕರ್ತವ್ಯ ಎನ್ನುವ ಸಂದೇಶ ಸಾರುವ, ಜನ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ, ಸುರೇಶ್ ಶೆಟ್ಟಿ ನಿರ್ದೇಶನದ, ನಟ ದೀಪಕ್ ರೈ ಪಾಣಾಜೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ತ್ರಿವರ್ಣ’ ಕಿರುಚಿತ್ರ ಆ.13ರಂದು ಸಂಜೆ 5 ಗಂಟೆಗೆ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳ್ಳಲಿದೆ.
‘ಜನ್ಮ ಕ್ರಿಯೇಷನ್ಸ್’ ಬ್ಯಾನರ್ನಡಿಯಲ್ಲಿ ಹರ್ಷಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ತ್ರಿವರ್ಣ ಕಿರುಚಿತ್ರ ಮೂಡಿಬಂದಿದೆ. ಕಥೆ-ಚಿತ್ರಕತೆ-ನಿರ್ದೇಶನದ ಜವಾಬ್ದಾರಿಯನ್ನು ಸುದ್ದಿ ಮಾರ್ಕೆಟಿಂಗ್-ಅಡ್ವರ್ಟೈಸಿಂಗ್ ಮ್ಯಾನೇಜರ್ ಸುರೇಶ್ ಶೆಟ್ಟಿ ನಿರ್ವಹಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ದೀಪಕ್ ರೈ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹರಿಪ್ರಸಾದ್ ನೆಲ್ಯಾಡಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿಇಒ ಸೃಜನ್ ಊರುಬೈಲು, ಸಮದ್ ಕುರಿಯ ನಟಿಸಿದ್ದಾರೆ. ಸಂಜಯ್ ನಾರಾಯಣನ್ ಛಾಯಾಗ್ರಹಣದಲ್ಲಿ ಕಿರುಚಿತ್ರ ಮೂಡಿಬಂದಿದ್ದು, ಸುಶ್ಮಿತ್ ಬೊಳ್ಳೂರ್ ಅವರ ಡ್ರೋಣ್ ಛಾಯಾಗ್ರಹಣವಿದೆ. ಸಂಕಲನ ಮತ್ತು ಪೋಸ್ಟರ್ ಡಿಸೈನಿಂಗ್ ಜವಬ್ದಾರಿಯನ್ನು ನಾಗೇಂದ್ರ ರೈ ನಿರ್ವಹಿಸಿದ್ದು, ಶಿವಪ್ರಸಾದ್ ರೈ ಪೆರ್ವಾಜೆ ಮತ್ತು ಹರಿಪ್ರಸಾದ್ ನೆಲ್ಯಾಡಿಯವರು ಸಂಭಾಷಣೆ ಬರೆದಿದ್ದಾರೆ. ಶ್ರೇಷ್ಠ ಆಳ್ವ, ಆತ್ಮಶ್ರೀ ಎಂ. ಮತ್ತು ನಮೃತಾ ಯು. ಅವರ ಗಾಯನವಿದೆ. ತಾಂತ್ರಿಕ ತಂಡದಲ್ಲಿ ದಿವ್ಯಾ ರೈ, ರೇಷ್ಮಾ ಡಿಸೋಜ, ನಿಶ್ಚಿತಾ ಬಿ., ಗೌತಮ್ ಶೆಟ್ಟಿ, ಅರ್ಪಿತಾ, ಚಂದ್ರಕಾಂತ್ ಉರ್ಲಾಂಡಿ, ಪ್ರಮೋದ್ ಗೌಡ ಮತ್ತು ಪ್ರಶಾಂತಿ ಬಿ. ಸಹಕರಿಸಿದ್ದಾರೆ.