ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ 76ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೊಂತೇರೊರವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ,ಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಕೇಸರಿ ಬಣ್ಣವು ಸಂಯಮದ, ತ್ಯಾಗ ಬಲಿದಾನದ, ಬಿಳಿ ಬಣ್ಣವು ಶುಭ್ರತೆಯ ಹಾಗೂ ಹಸಿರು ಬಣ್ಣವು ಸಮೃದ್ಧಿಯ ಸಂಕೇತವಾಗಿದೆ. ಈ ಮೂಲಕ ಧ್ವಜದಲ್ಲಿನ ಬಣ್ಣಗಳು ತೋರಿಸುವ ಸಂಕೇತದಂತೆ ನಾವು ಸಮಾಜದಲ್ಲಿ ಸಂಕಲ್ಪ ಮಾಡುವವರಾಗಬೇಕು. ಧ್ವಜದಲ್ಲಿನ ಅಶೋಕ ಚಕ್ರವು ಸಾರ್ವಭಮತೆಯ, ಅಖಂಡತೆಯನ್ನು ತೋರಿಸುತ್ತದೆ ಎಂದರು.ಆದ್ದರಿಂದ ಪ್ರತಿಯೋರ್ವ ನಾಗರಿಕನು ದೇಶವನ್ನು ಶಾಂತಿಯತ್ತ, ಸಮೃದ್ಧಿಯತ್ತ ಕೊಂಡೊಯ್ಯಲು ಪಣ ತೊಡುವಂತಾಗಬೇಕು ಎಂದರು.
ಆಕರ್ಷಕ ಪೆರೇಡ್:
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆ|ಜೋನ್ಸನ್ ಡೇವಿಡ್ ಸಿಕ್ವೇರಾರವರ ಮಾರ್ಗದರ್ಶನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವು ಇತ್ತೀಚೆಗೆ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಸೀನಿಯರ್ ಅಂಡರ್ ಆಫೀಸರ್ ಕಿರಣ್ ರವರ ಮುಂದಾಳತ್ವದಲ್ಲಿ ಆಕರ್ಷಕ ಪೆರೇಡ್ ಜರಗಿತು. ನೂರಾರು ಎನ್.ಸಿ.ಸಿ ವಿದ್ಯಾರ್ಥಿಗಳು, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು,ಎನ್.ಎಸ್.ಎಸ್ ವಿದ್ಯಾರ್ಥಿಗಳು, ಬ್ಯಾಂಡ್ ವೃಂದದ ವಿದ್ಯಾರ್ಥಿಗಳು ಆಕರ್ಷಕ ಪೆರೇಡ್ ನಲ್ಲಿ ಭಾಗವಹಿಸಿದರು.
ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಉದಯ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು. ಬಳಿಕ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.