ಕಷ್ಟಪಟ್ಟು ದುಡಿದರೆ ಕೃಷಿ ನಮ್ಮ ಕೈ ಬಿಡುವುದಿಲ್ಲ- ಪಿ. ವಿಶ್ವನಾಥ ನಾಯ್ಕ್ ಅರೇಹಳ್ಳಿ
ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ಆಟಿ ಕೂಟವು ಅ.14 ರಂದು ಕೊಡಿಪ್ಪಾಡಿ ಶೇವಿರೆಯಲ್ಲಿರುವ ಸಂದೀಪ್ ನಾಯ್ಕ್ ಮತ್ತು ಡಾ.ನಮಿತಾ ಎಸ್.ನಾಯ್ಕ್ ದಂಪತಿಯ ’ಸಮಿತ್’ ಮನೆಯ ಬದಿಮನೆ ಸುಂದರ ನಾಯ್ಕ್ ವೇದಿಕೆಯಲ್ಲಿ ನಡೆಯಿತು. ಹಾಸನ ಅರೇಹಳ್ಳಿ ಪಾವನಗಂಗಾ-ತುಂಗಾಭದ್ರಾ ಎಸ್ಟೇಟ್ನ ಪ್ರಗತಿಪರ ಕೃಷಿಕ ಪಿ. ವಿಶ್ವನಾಥ ನಾಯ್ಕ್ ಕಳಸೆಯಲ್ಲಿ ತೆಂಗಿನ ಕೊರಳನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೃಷಿ ಜೀವನದ ಅವಿಭಾಜ್ಯ ಅಂಗ. ಕಷ್ಟಪಟ್ಟು ದುಡಿದರೆ ಖಂಡಿತವಾಗಿಯು ಕೃಷಿ ನಮ್ಮ ಕೈ ಬಿಡುವುದಿಲ್ಲ. ಉತ್ತಮ ಇಳುವರಿ ನೀಡುವ ತಳಿಗಳ ಆಯ್ಕೆ, ಆಧುನಿಕ ತಂತ್ರಜ್ಞಾನದ ಬಳಕೆ, ಉತ್ತಮ ಗುಣಮಟ್ಟದ ರಸಗೊಬ್ಬರದ ಆಯ್ಕೆ ಕಾಲಕಾಲಕ್ಕೆ ಮದ್ದಿನ ಸಿಂಪಡಣೆಯಿಂದ ಉತ್ತಮ ಬೆಳೆ ಬಂದು ಹೆಚ್ಚಿನ ಆದಾಯ ಗಳಿಸಬಹುದು. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು, ಎಲಕ್ಕಿ ಇವುಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯವು ದೊರೆಯುವುದರಿಂದ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂದರು.
ಡಾ. ನಮಿತಾ ಎಸ್. ನಾಯ್ಕ್ ಮಾತನಾಡಿ ಹೊರಗಿನ ತಿಂಡಿ ತಿನಸು, ಎಣ್ಣೆಯಲ್ಲಿ ಕರಿದ ತಿಂಡಿ ಆರೋಗ್ಯಕ್ಕೆ ಹಾನಿಕಾರಕ, ಮನೆಯಲ್ಲೇ ಶುಚಿರುಚಿಯಾಗಿ ತಯಾರಿಸಿದ ತಿಂಡಿ-ತಿನಸು ಆರೋಗ್ಯಕ್ಕೆ ಉತ್ತಮ ಅ ಕಾರಣಕ್ಕಾಗಿ ನಮ್ಮ ಹಿರಿಯರ ಜೀವನ ಶೈಲಿ, ಆಚಾರ ವಿಚಾರ ಅಂದಿನ ಸಂಸ್ಕ್ರತಿ, ಪರಂಪರೆ ಆಹಾರ ಪದ್ದತಿ ಇದನ್ನೆಲ್ಲ ತಿಳಿಯುವ ಸಲುವಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಇದನ್ನು ತಲುಪಿಸುವ ಉದ್ದೇಶದಿಂದ ನಾವು ಆಟಿ ಆಚರಣೆಯನ್ನು ಮಾಡಬೇಕು. ಯುವ ಜನತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಕೊರೋನ ನಮಗೆ ಈ ಪಾಠವನ್ನು ಕಲಿಸಿದೆ ಎಂದರು.
ಸಂದೀಪ್ ನಾಯ್ಕ್ ಮಾತನಾಡಿ ನಮ್ಮ ಹಿರಿಯರ ಕಷ್ಟದ ಬದುಕು, ಕೃಷಿಯೇ ಜೀವನಕ್ಕೆ ಆಧಾರವಾಗಿದ್ದ ಕಾಲ ಸಾರಿಗೆ ವ್ಯವಸ್ಥೆಯಿಲ್ಲ, ಸರಿಯಾದ ಆಸ್ಪತ್ರೆಯಿಲ್ಲ, ಶಾಲೆಗಳಿಲ್ಲ ಆಟಿ ತಿಂಗಳಲ್ಲಿ ವಿಪರೀತ ಮಳೆಯ ಕಾರಣ ಕೆಲಸವೂ ಇಲ್ಲದೆ ಉತ್ಪತ್ತಿಯು ಇಲ್ಲದಿರುವ ಕಾಲ ಪ್ರಕೃತಿಯಲ್ಲಿ ಸಿಗುವ ಹಣ್ಣು ಹಂಪಲು, ಗೆಡ್ಡೆ ಗೆಣಸು, ಶೇಖರಿಸಿಟ್ಟ ಧವಸ ಧಾನ್ಯಗಳನ್ನೇ ತಿಂದು ಕಷ್ಟವೋ ಸುಖವೋ ಕೂಡು ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದು ಸಂತೋಷದಿಂದ ಬಾಳುತ್ತಿದ್ದ ಕಾಲ ಇದನ್ನು ಇಂದಿನ ಮಕ್ಕಳು ಕೇಳಿಯೇ ತಿಳಿಯಬೇಕಷ್ಟೆ ಅನುಭವಿಸುವ ಭಾಗ್ಯವಿಲ್ಲ ಎಂದರು.
ಮಂಗಳೂರು ಪರಿವಾರ ಬಂಟರ ಸಂಘದ ಕಾರ್ಯದರ್ಶಿ ಸುಧಾಕರ್ ಕೆ.ಪಿ ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ ಏಕ ಬಳಕೆ ಪ್ಲಸ್ಟಿಕ್ ನಿಷೇದಿಸಿ ಅಭಿಯಾನವನ್ನು ಹಮ್ಮಿ ಕೊಂಡಿದ್ದೇವೆ. ಪ್ಲಾಸ್ಟಿಕ್ ನಿಂದ ಪ್ರಕೃತಿಯ ಮೇಲಾಗುವ ದುಷ್ಪರಿಣಾಮ ಇದರಿಂದ ಪ್ರಾಣಿ, ಪಕ್ಷಿ, ಜಲಚರಗಳಿಗಾಗುವ ತೊಂದರೆ, ಜನರ ಆರೋಗ್ಯದ ಮೇಲಾಗುವ ಸಮಸ್ಯೆ ಬಗ್ಗೆ ತಿಳುವಳಿಕೆ ನೀಡಿ. ಇಂದಿನ ಕಾರ್ಯಕ್ರಮದಲ್ಲಿ ಎಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ ಎಂದರು. ಸಂಘವು ವಿವಿಧ ಚಟುವಟಿಕೆಯನ್ನು ಹಮ್ಮಿಕೊಂಡಿದೆ ಜಾತಿ ಗಣತಿಗೆ ಸರಕಾರದ ಆದೇಶವಾಗಿದೆ. ಪ್ರತಿ ಮನೆಯವರು ಇದಕ್ಕೆ ಸಹಕರಿಸಬೇಕೆಂದರು.
ಪರಿವಾರ ಬಂಟರ ಸಂಘ ಮಂಗಳೂರು ಇದರ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದಲ್ಲಿ ಮಾತ್ರ ನಮ್ಮ ಸಮಾಜವನ್ನು 3ಬಿ. ಕೆಟಗರಿಗೆ ಸೇರಿಸಲಾಗಿದೆ. ಕೇಂದ್ರದಲ್ಲೂ ಪರಿವಾರ ಬಂಟರ ಸಮಾಜವನ್ನು 3ಬಿ ಕೆಟಗರಿಗೆ ಸೇರಿಸುವ ಪ್ರಯತ್ನ ನಮ್ಮದು ಎಂದರು. ಅದೇ ರೀತಿ ಸಂಘದ ವತಿಯಿಂದ ಕಲ್ಯಾಣ ಮಂಟಪವನ್ನು ಕಟ್ಟುವ ಯೋಜನೆಯನ್ನು ಹಮ್ಮಿ ಕೊಂಡಿದ್ದೇವೆ ಇದಕ್ಕೆ ಸಮಾಜ ಬಾಂಧವರು ತನು ಮನ ಧನದ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು.
ಪರಿವಾರ ಬಂಟರ ಸಂಘ ಮಂಗಳೂರು ಇದರ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾಯ್ಕ್ ಕೊಳಕ್ಕಿಮಾರು ಪರಿವಾರ ಬಂಟರ ಸಂಘ ಪುತ್ತೂರು ವಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಶಕಿಲಾ ದಿನೇಶ್ ನಾಕ್, ಯುವ ವೇದಿಕೆಯ ಅಧ್ಯಕ್ಷ ಅಭಿಜಿತ್ ನಾಕ್ ಕೊಳಕ್ಕಿಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳಸಿ, ಪೂಜಾ ಪ್ರಾರ್ಥಿಸಿದರು. ನಿರೋಷ್ ಸ್ವಾಗತಿಸಿದರು ಪರಿವಾರ ಬಂಟರ ಸಂಘ ಯುವ ವೇದಿಕೆಯ ಅಧ್ಯಕ್ಷ ಅಭಿಜಿತ್ ನಾಯ್ಕ್ ಕೊಳಕ್ಕಿಮಾರು ವಂದಿಸಿದರು. ಬಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆ: ಆ.7ರಂದು ಪಾಂಗ್ಲಾಯಿ ಗದ್ದೆಯಲ್ಲಿ ಆಟಿದ ಕೂಟದ ಪ್ರಯುಕ್ತ ನಡೆದ ಪರಿವಾರ ಬಂಟೆರ್ನ ಕೆಸರ್ ದ ಗೊಬ್ಬುಲು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗೌರವಾರ್ಪಣೆ: ಅಟಿಕೂಟವನ್ನು ತಮ್ಮ ಮನೆಯಲ್ಲಿ ಮಾಡಲು ಅನುವು ಮಾಡಿಕೊಟ್ಟು ಎಲ್ಲಾ ರೀತಿಯಲ್ಲಿ ಸಹಕರಿಸಿದ ಸಂದೀಪ್ ನಾಕ್, ಡಾ. ನಮಿತಾ ಎಸ್.ನಾಯ್ಕ್ ದಂಪತಿಯನ್ನು ಮತ್ತು ಪ್ರಗತಿಪರ ಕೃಷಿಕ ಪಿ. ವಿಶ್ವನಾಥ ನಾಯ್ಕ್ ಅರೆಹಳ್ಳಿ ದಂಪತಿಯನ್ನು ಗೌರವಿಸಲಾಯಿತು. ವಿವಿಧ ತಿಂಡಿ ತಿನಸುಗಳನ್ನು ಮಾಡಿ ತಂದವರನ್ನೂ ಗುರುತಿಸಲಾಯಿತು.
85 ವಿವಿಧ ಬಗೆಯ ಆಟಿ ತಿನಸುಗಳು: ಸಮಾಜ ಬಾಂಧವರು ಮನೆಯಲ್ಲೇ ತಯಾರಿಸಿ ತಂದಿದ್ದ ವಿವಿಧ ಬಗೆಯ 85 ಆಟಿ ತಿಂಡಿ ತಿನಸುಗಳನ್ನು ಭೋಜನದ ಜೊತೆಗೆ ಹಂಚಿ ಆಟಿಯ ಸಂಭ್ರಮವನ್ನು ಆಚರಿಸಿದರು. ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.