ಪಾಪೆಮಜಲು ತೆರೇಜ್ ಎಂ.ಸಿಕ್ವೇರಾ, ಸರ್ವೆಯ ಜಯರಾಮ ಶೆಟ್ಟಿ, ಮೀನಾಡಿಯ ಗೋವಿಂದ ನಾಯ್ಕರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

0

ಪುತ್ತೂರು: 2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನ ಇಬ್ಬರು ಶಿಕ್ಷಕರು ಹಾಗೂ ಕಡಬ ತಾಲೂಕಿನ ಓರ್ವರು ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಿಂದ ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಸರಕಾರಿ ಹಿ.ಪ್ರಾ.ಶಾಲೆ ಪಾಪೆಮಜಲು ಇಲ್ಲಿನ ಮುಖ್ಯಶಿಕ್ಷಕಿ ತೆರೇಜ್ ಎಂ.ಸಿಕ್ವೇರಾ ಹಾಗೂ ಕಿರಿಯ ಪ್ರಾಥಮಿಕ ಶಾಲೆ ವಿಭಾಗದಿಂದ ಕಡಬ ತಾಲೂಕು ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಗೋವಿಂದ ನಾಯ್ಕ ಬಿ.ಅವರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸೆ.೫ರಂದು ಪುತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರ ಒಳಪುಟದಲ್ಲಿದೆ.

ತೆರೇಜ್ ಎಂ. ಸಿಕ್ವೇರಾ: ಅರಿಯಡ್ಕ ಗ್ರಾಮದ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶ್ರೀಮತಿ ತೆರೇಜ್ ಎಂ. ಸಿಕ್ವೇರಾರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತೆರೇಜ್ ಎಂ. ಸಿಕ್ವೇರಾರವರು ಮಂಗಳೂರಿನ ನೀರುಮಾರ್ಗ ಗ್ರಾಮದ ಸಂತ ಜೋಕಿಮ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನೀರುಮಾರ್ಗ ಕೆಲರಾಯಿ ಅಮೃತ್ ಲಾಲ್‌ಜಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಸೈಂಟ್ ಆನ್ಸ್ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಶಿಕ್ಷಣ ಪಡೆದಿರುತ್ತಾರೆ. ಮೈಸೂರಿನ ಹುಣಸೂರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಭಟ್ಕಳದ ಆನಂದಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ತೆರೆಜಾ ಸಿಕ್ವೇರಾರವರು 1989ರಿಂದ 1992ರ ವರೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1992ರಿಂದ 1994ರ ವರೆಗೆ ಪುತ್ತೂರು ತಾಲೂಕಿನ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1994ರಿಂದ 2014ರ ವರೆಗೆ ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸೇವೆ ಸಲ್ಲಿಸಿ ಭಡ್ತಿಹೊಂದಿ 2014ರಿಂದ ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯವನ್ನು ಹೊಂದಿರುವ ತೆರೆಜಾ ಸಿಕ್ವೇರಾರವರು ಊರ, ಪರವೂರ ದಾನಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಮತ್ತು ಕುಟುಂಬ ವರ್ಗದವರಿಂದ ಕೊಡುಗೆಯನ್ನು ಸಂಗ್ರಹಿಸಿ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸಿರುತ್ತಾರೆ. ಇವರು ಪರಿಸರ ಪ್ರೇಮಿಯಾಗಿದ್ದು ತನ್ನ ವಿದ್ಯಾರ್ಥಿಗಳು ಹಸಿರು ಪರಿಸರದಲ್ಲಿ ಕಲಿಯಬೇಕೆಂಬ ಉದ್ಧೇಶದಿಂದ ಶಾಲೆಯಲ್ಲಿ ತೆಂಗಿನ ತೋಟ, ನರೇಗಾ ಪೌಸ್ಟಿಕ ತೋಟದ ಚಿಣ್ಣರ ಪಾರ್ಕ್ ರಚನೆ ಮಾಡಿರುತ್ತಾರೆ. ಸುಮಾರು 33 ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸಿದ್ದು, ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಎನಿಸಿದ ಪುತ್ತೂರು ರೋಟರಿ ಕ್ಲಬ್‌ನಲ್ಲಿ ತಮ್ಮ ಪತಿಯೊಂದಿಗೆ ಗುರುತಿಸಿಕೊಂಡಿದ್ದಾರೆ.ಇವರ ಸೇವಾ ಅವಧಿಯಲ್ಲಿ ಕ್ಲಸ್ಟರ್ ಹಂತ, ಬ್ಲಾಕ್ ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ಶಾಲೆಗಳಿಗೆ ಜಿಲ್ಲಾ ಅತ್ಯುತ್ತಮ ಶಾಲೆ ಪ್ರಶಸ್ತಿಯೊಂದಿಗೆ ದ.ಕ ಮಟ್ಟದ ಹಸಿರು ಶಾಲೆ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ನಲಿಕಲಿ ಘಟಕ(2019-20) ಪ್ರಶಸ್ತಿ, ಹುಡುಗಿಯರ ವಿಭಾಗದ ವಾಲಿಬಾಲ್‌ನಲ್ಲಿ ಎರಡನೇ ಸ್ಥಾನ ಸಿಕ್ಕಿರುತ್ತದೆ.

ತೆರೇಜ್ ಎಂ. ಸಿಕ್ವೇರಾರವರು ಬಿ.ಆರ್.ಸಿ ಪುತ್ತೂರು ಇವರಿಂದ ಚೈತನ್ಯ 1 ಮತ್ತು 2, ಸಮನ್ವಯ ತರಬೇತಿ, ಬ್ರಿಟಿಷ್ ಕೌನ್ಸಿಲ್ ಇಂಗ್ಲೀಷ್ ತರಬೇತಿ, ನಲಿ-ಕಲಿ ತರಬೇತಿ, ಗುರುಚೇತನ-ಕನ್ನಡ ತರಬೇತಿಯನ್ನು ಹೊಂದಿದ್ದಾರೆ. ಪ್ರಸ್ತುತ ಇವರು ಅತ್ತೆ ಸೆವ್ರಿನ್ ಮಾಡ್ತಾ, ಪತಿ ಹೆರಾಲ್ಡ್ ಮಾಡ್ತಾ ಹಾಗೂ ಪುತ್ರಿ ರಿಶಲ್ ಮಾಡ್ತಾ, ಪುತ್ರ ರೂಪೇಶ್ ಮಾಡ್ತಾ, ಅಳಿಯ ನಿತಿನ್ ಡಾಯಸ್‌ರವರೊಂದಿಗೆ ಮರೀಲು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿಯ ಹ್ಯಾರಿಯೆಟ್ ನಿವಾಸದಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಜಯರಾಮ ಶೆಟ್ಟಿ: 2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಆಯ್ಕೆಯಾಗಿದ್ದಾರೆ. 1987ರಲ್ಲಿ ಸರಕಾರಿ ಪ.ಪೂ. ಕಾಲೇಜು ಕೂರ್ನಾಡು ಮುಡಿಪು ಇಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಜಯರಾಮ ಶೆಟ್ಟಿ ಅವರು 2011ರ ವರೆಗೆ ಸುಧೀರ್ಘ ಸಮಯ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. 2011ರಿಂದ 2014ರ ವರೆಗೆ ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಯಾದ ಅವರು ಪ್ರಸ್ತುತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತ ಶಿಕ್ಷಕ ದಿ.ಪಕೀರ ಶೆಟ್ಟಿ ಹಾಗೂ ಸುಮತಿ ದಂಪತಿಯ ಪುತ್ರರಾಗಿರುವ ಜಯರಾಮ ಶೆಟ್ಟಿ ಕೆ ಅವರು ಮೂಲತಃ ಪೆರ್ಲ ಕಾಟುಕುಕ್ಕೆ ಗ್ರಾಮದ ಸುರುಡೇಲು ನಿವಾಸಿಯಾಗಿದ್ದು ಪ್ರಸ್ತುತ ಪುತ್ತೂರು ಉರ್ಲಾಂಡಿಯಲ್ಲಿ ತೋಟಗಾರಿಕಾ ಇಲಾಖೆ ಸಮೀಪದ ನಿವಾಸದಲ್ಲಿ ಪತ್ನಿ ಅನುರಾಧ ಹಾಗೂ ಪುತ್ರ ಬೆಂಗಳೂರು ಕಂಪೆನಿಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಅಶ್ವಿಜ್ ಶೆಟ್ಟಿಯವರೊಂದಿಗೆ ವಾಸವಾಗಿದ್ದಾರೆ.

ಗೋವಿಂದ ನಾಯ್ಕ ಬಿ.: 2007ರ ಆಗಸ್ಟ್ 8ರಂದು ಕೊಂಬಾರು ಶಾಲೆಯಲ್ಲಿ ಸೇವೆಗೆ ಸೇರಿದ ಗೋವಿಂದ ನಾಯ್ಕ ಅವರು ಬಳಿಕ 2016ರವರೆಗೆ ನೂಜಿಬಾಳ್ತಿಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದರು.ಕೋವಿಡ್-19 ಮಹಾಮಾರಿ ಸಂದರ್ಭ ಶಾಲೆಗಳು ಬಂದ್ ಆಗಿದ್ದ ಸಮಯದಲ್ಲಿ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಪ್ರಶಂಸೆಗೆ ಪಾತ್ರರಾಗಿದ್ದರು.2019ರಲ್ಲಿ ಮೀನಾಡಿ ಕಿ.ಪ್ರಾ.ಶಾಲೆಗೆ ಸಹಶಿಕ್ಷಕರಾಗಿ ಬಂದ ಇವರು ಶಾಲೆಯಲ್ಲಿ ಅಭೂತಪೂರ್ವ ಬದಲಾವಣೆಗಳಿಗೆ ಕಾರಣರಾಗಿದ್ದರು. ಶಾಲಾ ಮೇಲ್ಛಾವಣಿ, ಶಾಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಶಾಲಾ ಗೋಡೆಗಳಿಗೆ ಭಾರತೀಯ ರೈಲಿನ ಚಿತ್ತಾರ ಮೂಡಿಸಿ ಗಮನ ಸೆಳೆದು ಸುದ್ದಿಯಾಗಿದ್ದರು.ಇದೇ ವರ್ಷ ಶಾಲಾ ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವಲ್ಲಿ ಮುಂಚೂಣಿಯಲ್ಲಿದ್ದು ಸಹಕರಿಸಿದ ಇವರು ಶಾಲಾ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಇವರು ಇದೀಗ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇವರು ಮರ್ದಾಳದಲ್ಲಿ ವಾಸ್ತವ್ಯವಿದ್ದು ಇವರ ಪತ್ನಿ ಆಶಾರಾಣಿ ಗೃಹಿಣಿಯಾಗಿದ್ದಾರೆ.ಹಿರಿಯ ಮಗ ಹರ್ಷಿತ್ ಜಿ.ನಾಯಕ್ ಮರ್ದಾಳ ಗುಡ್ ಶೆಫರ್ಡ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಹಾಗೂ ಕಿರಿಯ ಮಗ ವರ್ಷಿತ್ ಜಿ.ನಾಯಕ್ ಮುಡಿಪು ನವೋದಯ ವಿದ್ಯಾಲಯದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾರೆ.

LEAVE A REPLY

Please enter your comment!
Please enter your name here