ರಾಜ್ಯದಲ್ಲಿ 2 ಸಾವಿರ ಕ್ಕೂ ಹೆಚ್ಚು ಹುದ್ದೆಗಳು ರದ್ದು

0

ರೇಷ್ಮೆ, ತೋಟಗಾರಿಕೆ-ಕೃಷಿ ಇಲಾಖೆಯೊಂದಿಗೆ ವಿಲೀನ

ಕೆಳಹಂತದ ಹುದ್ದೆಗಳ ವಿಲೀನ ಹಿರಿಯ ಅಧಿಕಾರಿಗಳ ಹುದ್ದೆ ರದ್ದು

  • ಅರಣ್ಯ ಅಧಿಕಾರಿಗಳ ಹುದ್ದೆಗಳಿಗೆ ಕತ್ತರಿ
  • ಕೆಳಹಂತದ ಸಿಬ್ಬಂದಿಗಳ ಸಂಖ್ಯೆ ಹೆಚ್ಚಳ

ಪುತ್ತೂರು: ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವುದು ಹಾಗೂ ಕೆಲವು ಇಲಾಖೆಗಳನ್ನು ಮುಚ್ಚುವ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಕೈಗೊಂಡಿದೆ.

ವಿವಿಧ ಇಲಾಖೆಗಳ ವಿಲೀನ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಅ.11ರಂದು ಮೂರನೇ ಸಭೆ ನಡೆಸಿತು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು. ಕೆಲವು ಇಲಾಖೆಗಳು, ನಿಗಮ, ಪ್ರಾಧಿಕಾರಗಳ ರದ್ದತಿ ನಿರ್ಧಾರವನ್ನು ಸಭೆ ಕೈಗೊಂಡಿದೆ.

‘ಅನಗತ್ಯವಾಗಿರುವ ಹುದ್ದೆಗಳು ಮತ್ತು ಇಲಾಖೆಗಳನ್ನು ವಿಲೀನಗೊಳಿಸುವುದು ಅಥವಾ ರದ್ದು ಮಾಡುವುದರ ಮೂಲಕ ರಾಜ್ಯ ಸರ್ಕಾರದ ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.ಸಭೆಯಲ್ಲಿ ಉಪ ಸಮಿತಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಸಂಪುಟದ ಒಪ್ಪಿಗೆಯೊಂದಿಗೆ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಲಾಗುವುದು’ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲಾಗುವುದು.ಸಚಿವಾಲಯ ಸೇರಿದಂತೆ ಎಲ್ಲ ಹಂತಗಳಲ್ಲೂ ಈ ಬದಲಾವಣೆ ಜಾರಿಯಾಗಲಿದೆ. ಕೆಳಹಂತದ ಹುದ್ದೆಗಳನ್ನು ವಿಲೀನಗೊಳಿಸಿ, ಹಿರಿಯ ಅಧಿಕಾರಿಗಳ ಹುದ್ದೆಗಳನ್ನು ರದ್ದುಗೊಳಿಸಲಾಗುವುದು.ಈ ಇಲಾಖೆಗಳಲ್ಲಿ ಸುಮಾರು 2,000ಹುದ್ದೆಗಳು ರದ್ದಾಗಲಿವೆ ಎಂದು ವಿವರಿಸಿದರು.

ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಸೀಮಿತವಾಗಿ ರೇಷ್ಮೆ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಉಳಿಸಿಕೊಳ್ಳಲಾಗುವುದು. ಮೇಲಿನ ಹಂತದಲ್ಲಿ ಎರಡೂ ಇಲಾಖೆಗಳ ಜವಾಬ್ದಾರಿಯನ್ನು ಕೃಷಿ ಇಲಾಖೆಗೆ ವಹಿಸಲಾಗುವುದು.ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯನ್ನು ಶಿಕ್ಷಣ ಇಲಾಖೆಯ ಜತೆ ವಿಲೀನಗೊಳಿಸಲಾಗುತ್ತದೆ.ಕೆಲವು ನಿಗಮಗಳನ್ನು ರದ್ದುಗೊಳಿಸುವ ತೀರ್ಮಾನವೂ ಆಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಅರಣ್ಯ ಅಧಿಕಾರಿಗಳ ಹುದ್ದೆಗಳಿಗೆ ಕತ್ತರಿ: ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಸೇರಿದಂತೆ ರಾಜ್ಯದ ಅರಣ್ಯ ಇಲಾಖೆಯಲ್ಲಿರುವ ಹಿರಿಯ ಅಽಕಾರಿಗಳ ಹುದ್ದೆಗಳನ್ನು ಗಣನೀಯವಾಗಿ ತಗ್ಗಿಸಲು ಸಂಪುಟ ಉಪಸಮಿತಿಯು ಚಿಂತನೆ ನಡೆಸಿದೆ.ಪೂರಕವಾಗಿ ಸಮಗ್ರ ವಿವರ ಒದಗಿಸಲು ಅರಣ್ಯ ಇಲಾಖೆಗೆ ಸೂಚಿಸಿದೆ.‌

‘ಮಲೆನಾಡು, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಜಿಲ್ಲೆಗೊಂದು ‘ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ’, ಉಪ ವಿಭಾಗಕ್ಕೆ ಒಂದು ‘ಉಪ ಅರಣ್ಯ ಸಂರಕ್ಷಣಾಧಿಕಾರಿ’ ಹಾಗೂ ತಾಲ್ಲೂಕಿಗೆ ಒಂದು ‘ವಲಯ ಅರಣ್ಯಾಽಕಾರಿ’ ಹುದ್ದೆ ಉಳಿಸಿಕೊಳ್ಳಬೇಕು.ಉಳಿದ ಅಧಿಕಾರಿಗಳ ವೃಂದದ ಹುದ್ದೆಗಳನ್ನು ರದ್ದುಗೊಳಿಸಿ ಕೆಳಹಂತದ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಇಲಾಖೆಯ ವರದಿ ಕೇಳಲಾಗಿದೆ’ ಎಂದೂ ಸಚಿವ ಅಶೋಕ್ ಹೇಳಿದರು.

ರದ್ದಾಗಲಿರುವ ನಿಗಮಗಳು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ,ಮೈಸೂರು ತಂಬಾಕು ಕಂಪನಿ,ಕರ್ನಾಟಕ ಕೃಷಿ ಕೈಗಾರಿಕಾ ನಿಗಮ,ಕರ್ನಾಟಕ ಆಹಾರ ನಿಗಮ(ಕೃಷಿ ಇಲಾಖೆ)

ಜಿಲ್ಲೆಗೊಂದೇ ಯೋಜನಾ ಪ್ರಾಧಿಕಾರ

ಪ್ರಸ್ತುತ ಒಂದೇ ಜಿಲ್ಲೆಯೊಳಗೆ ಹಲವು ಯೋಜನಾ ಪ್ರಾಽಕಾರಗಳಿವೆ.ಅವೆಲ್ಲವನ್ನೂ ರದ್ದುಪಡಿಸಿ ಜಿಲ್ಲಾ ಮಟ್ಟದಲ್ಲಿ ಒಂದೇ ಯೋಜನಾ ಪ್ರಾಧಿಕಾರ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here