ನ.18:ಮಂಗಳೂರಿನಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ

0

ಸಚಿವ ಸುನಿಲ್ ಕುಮಾರ್‌ರವಿಂದ ಐವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಮಂಗಳೂರು:ಮಂಗಳೂರಿನಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ `ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ-ಸಹಕಾರ ಸಹಭಾಗಿತ್ವವನ್ನು ಬಲಗೊಳಿಸುವುದು’ ಎಂಬ ಧ್ಯೇಯದೊಂದಿಗೆ ನ.18ರಂದುಬೆಳಗ್ಗೆ 10 ಗಂಟೆಗೆ `ಕರಾವಳಿ ಉತ್ಸವ’ ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಅಪಾರ ವಿಶ್ವಾಸವನ್ನು ಇರಿಸಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಸಹಕಾರ ತತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಬಹುದೆಂಬ ಆಶಯವನ್ನು ಇರಿಸಿಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು.ಇದು ಸಹಕಾರ ಚಳುವಳಯ ಬೆಳವಣಿಗೆಗೆ ಸಹಕಾರಿಯಾಯಿತು.ಇದರ ಫಲವಾಗಿ ರಾಷ್ಟ್ರದ ಸಹಕಾರ ಚಳುವಳಿಗೆ 118 ವರ್ಷಗಳ ಭವ್ಯ ಇತಿಹಾಸವಿದೆ.ವಿಶ್ವದಲ್ಲಿ ಅತ್ಯುತ್ತಮ ಸಹಕಾರ ಚಳುವಳಿಯನ್ನು ನಮ್ಮ ರಾಷ್ಟ್ರ ಹೊಂದಿದೆ . ಪ್ರತಿ ವರ್ಷ ನವೆಂಬರ್ 14ರಿಂದ 20 ರವರೆಗೆ ರಾಷ್ಟ್ರದಾದ್ಯಂತ `ಅಖಿಲ ಭಾರತ ಸಕಾರ ಸಪ್ತಾಹ ನಡೆಯುತ್ತದೆ.ಪಂಡಿತ್ ನೆಹರೂರವರ ಜನ್ಮ ದಿನವಾದ ನ.14 ರಂದು ಸಪ್ತಾಹದ ಉದ್ಘಾಟನೆ ನಡೆದಿದೆ.ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ. 69 ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು `ಭಾರತ 75 ಸಹಕಾರ ಸಂಘಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಎಂಬ ಧೈಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.ಅದೇ ರೀತಿಯಲ್ಲಿ ರಾಜ್ಯ ಮಟ್ಟದಲ್ಲಿ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ.ನ.೧೪ರಂದು ಸಹಕಾರ ಸಪ್ತಾಹದ ಉದ್ಘಾಟನೆಯನ್ನು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದ್ದಾರೆ.ಸಮಾರೋಪ ಕಾರ್ಯಕ್ರಮವು ಮೈಸೂರಿನಲ್ಲಿ ನಡೆಯಲಿದೆ ಎಂದು ಡಾ|ರಾಜೇಂದ್ರ ಕುಮಾರ್ ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ,ಸಹಕಾರ ಸಂಘಗಳ ರಾಜ್ಯ ನಿಬಂಧಕ ಕ್ಯಾ.ಡಾ.ಕೆ.ರಾಜೇಂದ್ರ, ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಭಾಗವಹಿಸಲಿದ್ದಾರೆ.

ಐವರಿಗೆ `ಸಹಕಾರ ರತ್ನ’ ಪ್ರಶಸ್ತಿ ಪ್ರದಾನ:

ಕರ್ನಾಟಕ ಸರಕಾರ ರಾಜ್ಯ ಮಟ್ಟದಲ್ಲಿ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಐವರು ಆಯ್ಕೆಗೊಂಡಿರುತ್ತಾರೆ.ದಕ್ಷಿಣ ಕನ್ನಡ ಜಿಲ್ಲೆಯಿಂದ ದಂಬೆಕ್ಕಾನ ಸದಾಶಿವ ರೈ, ಕೊಂಕೋಡಿ ಪದ್ಮನಾಭ ಮತ್ತು ನಿತ್ಯಾನಂದ ಮುಂಡೋಡಿ,ಉಡುಪಿ ಜಿಲ್ಲೆಯಿಂದ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಯಶ್‌ಪಾಲ್ ಸುವರ್ಣ ಇವರು `ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು ಇವರೆಲ್ಲರಿಗೂ ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಸಮಾರಂಭದಲ್ಲಿ ಶಾಸಕರು, ಸಂಸದರು, ಮನಪಾ ಮೇಯರ್,ಕ್ಯಾಂಪ್ಕೋ ಅಧ್ಯಕ್ಷ,ದ.ಕ-ಉಡುಪಿ ಮೀನುಗಾರರ ಮಹಾ ಮಂಡಳದ ಅಧ್ಯಕ್ಷ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ನ.18ರಂದು ಸಹಕಾರ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಸಹಕಾರ ಜಾಥಾ’ ಆಯೋಜನೆ ಮಾಡಲಾಗಿದೆ. ಪೂರ್ವಾಹ್ನ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಿಂದ ಸಮಾರಂಭ ನಡೆಯುವ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರಿಗಳು ವಾಹನದ ಮೂಲಕ ಸರಕಾರ ಜಾಥಾದಲ್ಲಿ ಭಾಗವಹಿಸಲಿರುವರು.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಟನೆಯ ಮೂಲಪುರುಷ ಮೊಳಹಳ್ಳಿ ಶಿವರಾವ್ ಅವರನ್ನು ಸ್ಮರಿಸುವ ಹಾಗೂ ಸಹಕಾರ ಚಿಲುಮೆಯನ್ನು ಪ್ರತಿಬಿಂಬಿಸುವ ಆಕರ್ಷಕ ಟ್ಯಾಬ್ಲೊಗಳು, ಚೆಂಡೆ, ಕೊಂಬು, ಸ್ಯಾಕ್ಸೋಫೋನ್ ಹೊನ್ನಾವರ, ಬ್ಯಾಂಡ್ ಸೇರಿದಂತೆ ವಿವಿಧ ಕಲಾತಂಡಗಳ ಸಂಯೋಜನೆಯಲ್ಲಿ `ಸಹಕಾರ ಜಾಥಾ
ರಾಜ್ಯ ಮಟ್ಟದ ಕಾರ್ಯಕ್ರಮದ ಜೊತೆಗೆ ಸಪ್ತಾಹದ ಏಳು ದಿನಗಳಲ್ಲಿ ಜಿಲ್ಲಾಮಟ್ಟದ ಸಹಕಾರ ಸಪ್ತಾಹದ ಆಚರಣೆ ಕೂಡ ನಡೆಯುತ್ತದೆ.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಉಡುಪಿ ಜಿಲ್ಲಾ ಯೂನಿಯನ್‌ಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಡಾ|ರಾಜೇಂದ್ರ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಟಿ.ಜಿ.ರಾಜಾರಾಮ ಭಟ್, ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ ಬಳೆಜ್ಜ, ದೇವಿಪ್ರಸಾದ್ ಶೆಟ್ಟಿ ಬೆಳಪು,ಭಾಸ್ಕರ್ ಕೋಟ್ಯಾನ್,ವಾದಿರಾಜ ಶೆಟ್ಟಿ,ರಾಜು ಪೂಜಾರಿ,ಜೈರಾಜ್ ಬಿ.ರೈ, ಅಶೋಕ್ ಕುಮಾರ್ ಶೆಟ್ಟಿ,ರಾಜೇಶ್ ರಾವ್, ಮೋನಪ್ಪ ಶೆಟ್ಟಿ ಎಕ್ಕಾರು,ದ.ಕ ಮತ್ತು ಉಡುಪಿ ಜಿಲ್ಲೆಗಳ ಸಹಕಾರಿ ಯೂನಿಯನ್‌ಗಳ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಜಯಕರ ಶೆಟ್ಟಿ ಇಂದ್ರಾಳಿ,ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here