ಮಾಡನ್ನೂರು ನೂರುಲ್ ಹುದಾ ಆಶ್ರಯದಲ್ಲಿ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಮಹಾಸಂಗಮ

0

  • ಪೂರ್ವಿಕ ಪಂಡಿತರ ಜೀವನ ನಮಗೆ ಆದರ್ಶ-ವಳವಣ್ಣ ಉಸ್ತಾದ್
  • ಸಂಪತ್ತಿನಲ್ಲಿ ಒಂದಂಶವನ್ನಾದರೂ ದಾನ ಮಾಡಬೇಕು-ಹನೀಫ್ ನಿಝಾಮಿ

ಪುತ್ತೂರು: ಪೂರ್ವಿಕ ಮಹಾನುಭಾವರಾದ ಪಂಡಿತರು ನಮಗೆ ಆದರ್ಶವಾಗಿದ್ದು ಅವರನ್ನು ಮಾದರಿಯಾಗಿ ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವೂ ಸಾರ್ಥಕವಾಗಲಿದೆ ಎಂದು ಸಮಸ್ತ ಮುಶಾವರ ಸದಸ್ಯರು, ಸೂಫಿವರ್ಯರೂ ಆದ ಶೈಖುನಾ ವಳವಣ್ಣ ಉಸ್ತಾದ್ ಹೇಳಿದರು.‌

ಮಾಡನ್ನೂರು ನೂರುಲ್ ಹುದಾ ಆಶ್ರಯದಲ್ಲಿ ಮಾಡನ್ನೂರು ಶಹೀದಿಯ್ಯ ನಗರದಲ್ಲಿ ಡಿ.2ರಂದು ನಡೆದ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಮಹಾ ಸಂಗಮಕ್ಕೆ ನೇತೃತ್ವ ನೀಡಿ ಅವರು ಮಾತನಾಡಿದರು.

ಮಹಾನುಭಾವರಾದ ಶಂಸುಲ್ ಉಲಮಾರವರು ಮಾದರಿಯೋಗ್ಯವಾದ ಜೀವನವನ್ನು ಸಾಗಿಸಿದ್ದು ಅಂತಹ ಮಹಾನುಭಾವರ ಜೀವನ ವಿಧಾನವನ್ನು ಅನುಸರಿಸುವುದರಿಂದ ಇಹಪರ ವಿಜಯಗಳಿಸಲು ಸಾಧ್ಯ. ಅಲ್ಲಾಹನ ಭಯ ನಿರಂತರವಾಗಿದ್ದರೆ ನಾವು ಯಾವುದೇ ಕೆಟ್ಟ ಕ್ಷೇತ್ರಕ್ಕೆ ಆಕರ್ಷಿತರಾಗಲು ಸಾಧ್ಯವಿಲ್ಲ. ಮಜ್ಲಿಸುನ್ನೂರ್‌ನಂತಹ ಪುಣ್ಯವೇರಿದ ಮಜ್ಲಿಸ್‌ಗಳು ನಮ್ಮ ಹೃದಯ, ಮನಸ್ಸನ್ನು ಶುದ್ದಿಗೊಳಿಸುವ ಸ್ಥಳಗಳಾಗಿದ್ದು ಅಂತಹ ಮಜ್ಲಿಸ್‌ಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವ ಮೂಲಕ ಪುಣ್ಯ ಸಂಪಾದಿಸಬೇಕು ಎಂದು ಅವರು ಹೇಳಿದರು.

ಸಂಪತ್ತಿನಲ್ಲಿ ಒಂದಂಶವನ್ನಾದರೂ ದಾನ ಮಾಡಿ-ಹನೀಫ್ ನಿಝಾಮಿ: ‌

ಮುಖ್ಯ ಪ್ರಭಾಷಣ ನಡೆಸಿದ ಯು.ಕೆ ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮಾತನಾಡಿ ಧಾರ್ಮಿಕ ವಿಚಾರಧಾರೆಗಳು ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿದ್ದು ಇಸ್ಲಾಮಿನ ಆಶಯ, ಸಂದೇಶಗಳನ್ನು ಪಾಲಿಸುವಲ್ಲಿ ನಾವು ಎಡವುತ್ತಿದ್ದೇವೆ, ಇಸ್ಲಾಂ ಇಲ್ಲಿ ಎಲ್ಲವನ್ನೂ ಪರಿಪೂರ್ಣಗೊಳಿಸಿದ್ದು ಆ ಹಾದಿಯಲ್ಲಿ ನಾವು ಸಾಗಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.‌

ಅಲ್ಲಾಹು ನೀಡಿದ ಸಂಪತ್ತಿನಲ್ಲಿ ಒಂದಂಶವನ್ನಾದರೂ ಅಲ್ಲಾಹನ ಇಷ್ಟದಾಯಕ ಕ್ಷೇತ್ರದಲ್ಲಿ ವಿನಿಯೋಗಿಸುವುದು ಅತ್ಯಗತ್ಯವಾಗಿದ್ದು ಆ ರೀತಿ ವಿನಿಯೋಗಿಸುವವರ ಸಂಪತ್ತು ಮತ್ತಷ್ಟು ಹೆಚ್ಚಾಗುವುದಲ್ಲದೇ ಕಮ್ಮಿಯಾಗುವುದಿಲ್ಲ, ಜಿಪುಣತನ ಮನುಷ್ಯನನ್ನು ಸರ್ವನಾಶಕ್ಕೂ ಕೊಂಡೊಯ್ಯಬಹುದು ಎಂದು ಅವರು ಹೇಳಿದರು.

ನೂರುಲ್ ಹುದಾ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿಯವರು ಪ್ರಸ್ತಾವನೆಗೈದು ನೂರುಲ್ ಹುದಾ ವಿದ್ಯಾಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಅಸ್ಸಯ್ಯಿದ್ ಬುರ್ಹಾನ್ ಅಲೀ ತಂಳ್ ಅಲ್ ಬುಖಾರಿ ಮಖಾಂ ಝಿಯಾರತ್‌ಗೆ ನೇತೃತ್ವ ನೀಡಿದರು. ನೂರುಲ್ ಹುದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ನೂರುಲ್ ಹುದಾ ಮೆನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸಂದರ್ಭೋಚಿತ ಮಾತನಾಡಿದರು.‌

ವೇದಿಕೆಯಲ್ಲಿ ಮಾಡನ್ನೂರು ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ನೂರುಲ್ ಹುದಾ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಹಾಜಿ ಮಂಗಳಾ, ಕೋಶಾಽಕಾರಿ ಎನ್.ಎಸ್ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷರುಗಳಾದ ಹಿರಾ ಅಬ್ದುಲ್ ಖಾದರ್ ಹಾಜಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್ ಮಾಡನ್ನೂರು, ಕಾರ್ಯದರ್ಶಿಗಳಾದ ಸಿ.ಎಚ್ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಸಿ.ಕೆ ದಾರಿಮಿ ಅಡೂರು, ಉದ್ಯಮಿ ಇಕ್ಬಾಲ್ ಕೋಲ್ಪೆ, ಕೋಲ್ಪೆ ಮಸೀದಿಯ ಅಧ್ಯಕ್ಷ ಕೆ.ಕೆ ಅಬೂಬಕ್ಕರ್ ಹಾಜಿ, ಖತೀಬ್ ಶರೀಫ್ ದಾರಿಮಿ ಹೈತಮಿ, ಫಾರೂಕ್ ದಾರಿಮಿ ಮಾಡನ್ನೂರು, ಅಬ್ದುಲ್ ಹಮೀದ್ ಫ್ಯಾಮಿಲಿ ಮಾಡಾವು, ಸಂತೋಷ್ ಹುಸೈನಾರ್ ಮಾಡಾವು, ಶರೀಫ್ ವಿಟ್ಲ, ಅಶ್ರಫ್ ಗೋಳ್ತಮಜಲು, ಇಬ್ರಾಹಿಂ ಹಾಜಿ ಕತ್ತರ್, ಉದ್ಯಮಿ ಮಹಮ್ಮದ್ ದೇರಳಕಟ್ಟೆ, ಅಬ್ದುಲ್ ರಹಿಮಾನ್ ದೇರಳಕಟ್ಟೆ, ಮಹಮೂದ್ ಮುಸ್ಲಿಯಾರ್ ಅರೆಯಲಡಿ, ಶುಕೂರ್ ದಾರಿಮಿ, ಅಮೀರ್ ಅರ್ಷದಿ, ನೌಫಲ್ ಹುದವಿ, ಕೆ.ಕೆ ಇಬ್ರಾಹಿಂ ಹಾಜಿ, ಎಂ.ಡಿ ಹಸೈನಾರ್, ಎಂ.ಕೆ ಅಬ್ಬಾಸ್ ಹಾಜಿ, ಬಶೀರ್ ನೆಲ್ಲಿಹುದಿಕೇರಿ, ಇಕ್ಬಾಲ್ ಮುಸ್ಲಿಯಾರ್ ಕೊಡಗು, ಇಕ್ಬಾಲ್ ಮಾಸ್ಟರ್ ಕುಶಾಲನಗರ, ಅಬ್ದುರ್ರಹ್ಮಾನ್ ಫೈಝಿ ಪಳ್ಳತ್ತೂರು, ಜಬ್ಬಾರ್ ಯಮಾನಿ ಕಲ್ಲಿಕೋಟೆ, ಶಾಹುಲ್ ಹಮೀದ್ ಫೈಝಿ, ಅಬ್ದುಲ್ಲ ಹಾಜಿ ಪಾಲ್ತಾಡ್, ಮಹಮ್ಮದ್ ಒಮೇಗ ಉಪಸ್ಥಿತರಿದ್ದರು.

ಮಾಡನ್ನೂರು ಖತೀಬ್ ಸಿರಾಜುದ್ದೀನ್ ಫೈಝಿ ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು.

ನೂರಾರು ಮಂದಿ ಭಾಗಿ

ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು. ಮಾಡನ್ನೂರಿನಲ್ಲಿ ಪ್ರತೀ ತಿಂಗಳು ನಡೆಯುವ ನೂರುಲ್ ಹುದಾ ಮಜ್ಲಿಸುನ್ನೂರ್‌ನಲ್ಲಿ ವಿವಿಧ ಕಡೆಗಳಿಂದ ನೂರಾರು ಮಂದಿ ಭಾಗವಹಿಸುತ್ತಿದ್ದು ಮಜ್ಲಿಸುನ್ನೂರ್ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ.

LEAVE A REPLY

Please enter your comment!
Please enter your name here