ಕಾಣಿಯೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 8ನೇ ಶಾಖೆ ಲೋಕಾರ್ಪಣೆ

0

ಹಿಂದುಳಿದವರಿಗೆ ಸಹಾಯದ ಮೂಲಕ ಪ್ರಗತಿ ಸಾಧಿಸುವುದು ಸಹಕಾರಿ ಧರ್ಮ-ಡಾ|ಧರ್ಮಪಾಲನಾಥ ಸ್ವಾಮೀಜಿ

  • ಆದರ್ಶ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳುವ ಕೆಲಸವಾಗಬೇಕು-ಎಸ್.ಅಂಗಾರ
  • ಸಹಕಾರ ಸಂಘಗಳ ಮೂಲಕ ದೇಶದ ಆರ್ಥಿಕ ಪ್ರಗತಿ- ಸಂಜೀವ ಮಠಂದೂರು
  • ಸಂಘ ಅಭಿವೃದ್ಧಿಯತ್ತ ಸಾಗಲು ಎಲ್ಲರ ಸಹಕಾರ ಅಗತ್ಯ-ಚಿದಾನಂದ ಬೈಲಾಡಿ
  • ಬೆಳ್ಳಿಹಬ್ಬದ ಸಂದರ್ಭದಲ್ಲಿ ೨೫ ಶಾಖೆಗಳನ್ನು ತೆರೆಯುವಂತಾಗಲಿ-ವಿಶ್ವನಾಥ ಗೌಡ ಕೆಯ್ಯೂರು
  • ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರಿನಲ್ಲಿ ಸಂಘದ 8ನೇ ಶಾಖೆ ಪ್ರಾರಂಭ-ಮೋಹನ್ ಗೌಡ ಇಡ್ಯಡ್ಕ
  • ಸಂಘವು ಸತತವಾಗಿ ಲಾಭಗಳಿಸಿಕೊಂಡು ಮುನ್ನಡೆಯುತ್ತಿದೆ-ಹೆಚ್.ಎನ್.ರಮೇಶ್
  • ಶಾಖೆ ಪ್ರಾರಂಭದ ಮೂಲಕ ಬಹುದಿನದ ಕನಸು ನನಸು-ಚಂದ್ರಶೇಖರ್ ಗೌಡ ಬರೆಪ್ಪಾಡಿ

ಕಾಣಿಯೂರು:ಒಕ್ಕಲಿಗ ಸಮುದಾಯ ನಮ್ಮ ಮೂಲ ಸಂಸ್ಕೃತಿ ನೆಲೆವೀಡಾಗಿರುವ ಕೃಷಿಕರ ಸಮುದಾಯ.ನಾವು ನಮ್ಮತನವನ್ನು ಬಿಟ್ಟುಕೊಡದೆ ಸಹಕಾರ ಸಹಬಾಳ್ವೆಯನ್ನು ಕಾಣಬೇಕಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಡಾ|ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನಲ್ಲಿ ಪುತ್ತೂರು ಒಕ್ಕಲಿಗ ಸುಮುದಾಯ ಪತ್ತಿನ ಸಹಕಾರಿ ಸಂಘದ 8ನೇ ಶಾಖೆಯನ್ನು ದ.12ರಂದು ಉದ್ಘಾಟಿಸಿದ ಬಳಿಕ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಸಹಾಯವನ್ನು ನೀಡುವ ಮುಖಾಂತರ ತನ್ನ ಪ್ರಗತಿಯನ್ನು ಸಾಧಿಸುವುದು ಸಹಕಾರಿ ಧರ್ಮ. ದೀನ ದಲಿತರ, ಅಶಕ್ತರ ಬಾಳಿಗೆ ಬೆಳಕಾಗಬಲ್ಲ ಸಹಕಾರಿ ಸಂಘಗಳು ಅಭ್ಯುದಯ ಕಾಣುತ್ತವೆ. ಯಾವುದೇ ಸಂಸ್ಥೆಯಲ್ಲಿ ವಿಶ್ವಾಸ, ನಂಬಿಕೆಗೆ ಅರ್ಹವಾಗಿ ವ್ಯವಹಾರ ನಡೆಸಿದಾಗ ಸಂಘ ಬೆಳೆಯುತ್ತದೆ ಎಂದು ಹೇಳಿದ ಶ್ರೀಗಳು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಬಂದರು. ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಸಮುದಾಯಗಳು, ಜನಾಂಗಗಳು ನೀತಿಯಿಂದ ಕಾರ್ಯಗಳನ್ನು ನಡೆಸುತ್ತಾ ಹೋದಾಗ ನಮ್ಮ ಹಿರಿಯರ ಆದರ್ಶಗಳು ಸಾಕಾರವಾಗುತ್ತದೆ.ಕೆದಂಬಾಡಿ ರಾಮಯ್ಯ ಗೌಡರಾಗಲೀ, ನಾಡಪ್ರಭು ಕೆಂಪೇ ಗೌಡರಾಗಲಿ ಅವರು ಜಾತಿಯಿಂದ ಗುರುತಿಸಿಕೊಂಡವರಲ್ಲ, ತಮ್ಮ ಶಕ್ತಿ, ಸಾಮರ್ಥ್ಯಗಳಿಂದ,ನಿರ್ದಿಷ್ಟ ಉದ್ದೇಶಗಳನ್ನು ಇಟ್ಟುಕೊಂಡು ದೇಶಪ್ರೇಮದ ಕಿಚ್ಚಿನಲ್ಲಿ ನಾಡು ಕಟ್ಟಿ ಅಜರಾಮರರಾಗಿದ್ದಾರೆ.ಅವರ ಆದರ್ಶಗಳು ನಮ್ಮದಾಗಬೇಕು ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಸಂಘಗಳ ಮೂಲಕ ನಮ್ಮ ದೇಶವೇ ಆರ್ಥಿಕ ಪ್ರಗತಿಯತ್ತ ಮುನ್ನಡೆಯುತ್ತಿದೆ.ಮೊಳಹಳ್ಳಿ ಶಿವರಾಯರ ಮೂಲಕ ಸಹಕಾರ ಸಂಘಗಳು ಪ್ರಾರಂಭಗೊಂಡು ಪ್ರಸ್ತುತ ಸರಿಸುಮಾರು 4,500ರಷ್ಟು ಸಹಕಾರ ಸಂಘಗಳು ಕಾರ್ಯಾಚರಿಸುತ್ತಿದೆ.ಅದರ ಫಲವಾಗಿ ಗ್ರಾಮೀಣ ಭಾಗದ ರೈತರ ಬದುಕು ಹಸನಾಗಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿಯೂ ಸಹಕಾರಿ ಸಂಘಗಳು ಪ್ರಮುಖ ಪಾತ್ರವಹಿಸುತ್ತವೆ. ಗ್ರಾಮೀಣ ಭಾಗಗಳಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ರೈತರ ಸ್ವಾಭಿಮಾನಿ ಬದುಕಿಗೆ ಪ್ರೇರಣೆಯಾಗಿವೆ. ಎಲ್ಲಾ ಸಮುದಾಯದ ಸಹಕಾರಿ ಸಂಘಗಳು ಆ ಸಮುದಾಯವನ್ನು ಆರ್ಥಿಕವಾಗಿ ಬಲಿಷ್ಠ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 8ನೇ ಶಾಖೆ ಕಾಣಿಯೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಕಾಣಿಯೂರಿನಲ್ಲಿ ಸಂಘದ ಶಾಖೆ ಪ್ರಾರಂಭಿಸಬೇಕೆಂದು ಗೋಪಾಲಕೃಷ್ಣ ಗೌಡ ಪಟೇಲ್ ಚಾರ್ವಾಕ ಅವರು ಮನವಿ ಮಾಡಿಕೊಂಡಿದ್ದರು. ಅನುಮತಿಯನ್ನೂ ಪಡೆದಿದ್ದವು. ಆದರೆ ಆ ಸಂದರ್ಭದಲ್ಲಿ ಕೊರೋನಾ ಇದ್ದ ಹಿನ್ನೆಲೆಯಲ್ಲಿ ಶಾಖೆ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿಬಂದಿದೆ. 9ನೇ ಶಾಖೆ ಬೆಳ್ಳಾರೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ. 2002ರಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಸಹಕಾರ ಸಂಘವು ಪುತ್ತೂರು, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಮತ್ತು ಪುತ್ತೂರು ನಗರ ಹೀಗೆ 7 ಶಾಖೆಗಳನ್ನು ಮಾಡಿಕೊಂಡು ವ್ಯವಹರಿಸುತ್ತಿದೆ. 6,800ಕ್ಕಿಂತಲೂ ಅಧಿಕ ಸದಸ್ಯರನ್ನು ಹೊಂದಿದ್ದು, ಕಳೆದ ಅವಧಿಯಲ್ಲಿ ರೂ.291 ಕೋಟಿಗಿಂತಲು ಮಿಕ್ಕಿ ವ್ಯವಹಾರ ಮಾಡಿದ್ದು, 3 ಕೋಟಿಗಿಂತ ಮಿಕ್ಕಿ ಪಾಲು ಬಂಡವಾಳವನ್ನು ಹೊಂದಿದೆ. ಕಳೆದ ಅವಧಿಯಲ್ಲಿ ರೂ.84 ಲಕ್ಷ ಲಾಭ ಪಡೆದಿರುತ್ತದೆ. ಕಳೆದ ಅವಧಿಯಲ್ಲಿ 60 ಕೋಟಿಗಿಂತ ಮಿಕ್ಕಿ ಠೇವಣಿ ಹೊಂದಿದ್ದು, 53 ಕೋಟಿಗಿಂತ ಮಿಕ್ಕಿ ಹೊರಬಾಕಿ ಸಾಲ ಇರುತ್ತದೆ ಎಂದರು. 2002ರಲ್ಲಿ ಅಂದಿನ ಶಾಸಕರಾಗಿದ್ದ ಡಿ.ವಿ ಸದಾನಂದ ಗೌಡರ ಮಾರ್ಗದರ್ಶನದಲ್ಲಿ ನ್ಯಾಯವಾದಿ ಇಡ್ಯಡ್ಕ ಮೋಹನ ಗೌಡರ ನೇತೃತ್ವದಲ್ಲಿ ಸುಮಾರು 20 ಸಮಾನ ಮನಸ್ಕರ ತಂಡ ಪ್ರವರ್ತಕರಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದೆ. ಸಂಘದಲ್ಲಿ ಆಸ್ತಿ ಖರೀದಿ, ಆಸ್ತಿ ಅಡವು, ಮನೆ ನಿರ್ಮಾಣ, ವಾಹನ ಸಾಲ, ವ್ಯಾಪಾರ ಸಾಲ, ಚಿನ್ನಾಭರಣ ಅಡವು, ವೇತನ ಆಧಾರಿತ ಸಾಲ ಹೀಗೆ ವಿವಿಧ ರೀತಿಯ ಸಾಲಗಳನ್ನು ಆಕಷಕ ಬಡ್ಡಿಯಲ್ಲಿ ನೀಡಲಾಗುತ್ತಿದೆ.ಸಂಘವು ಆಡಿಟ್ ವರದಿಯಲ್ಲಿ ನಿರಂತರವಾಗಿ ‘ಎ’ ತರಗತಿಯನ್ನೇ ಪಡೆಯುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಕಾಣಿಯೂರಿನ ಶಾಖೆಯೂ ಅಭಿವೃದ್ಧಿಯತ್ತ ಸಾಗಲು ಎಲ್ಲರ ಸಹಕಾರ ಅಗತ್ಯ ಎಂದವರು ಹೇಳಿದರು.ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಮಾತನಾಡಿ, ಅದೆಷ್ಟೋ ಕಷ್ಟ ನಷ್ಟಗಳ ಮಧ್ಯೆಯೂ ಏಳು ಬೀಳುಗಳನ್ನು ಕಂಡ ಸಂಸ್ಥೆಯು ಇಂದು 8 ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಈ ಸಂಸ್ಥೆಯಲ್ಲಿ ಉತ್ತಮ ನಾಯಕತ್ವದ ಜೊತೆಗೆ ಒಂದೇ ಮನಸ್ಸಿನ ಆಡಳಿತ ಮಂಡಳಿಯವರ ಮಾರ್ಗದರ್ಶನದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ಕಾಣಿಯೂರು ಭಾಗದಲ್ಲಿಯೂ ಸಂಸ್ಥೆಯಿಂದ ಉತ್ತಮ ಸೇವೆ ಸಿಗಲಿದೆ. ಈ ಪರಿಸರದ ಜನತೆ ಕೂಡ ಸಂಘದಿಂದ ಸೇವೆಯನ್ನು ಪಡೆದುಕೊಳ್ಳಬೇಕು. ಪ್ರತಿ ಮನೆಯಿಂದ ಕನಿಷ್ಠ ಉಳಿತಾಯ ಖಾತೆಯನ್ನು ತೆರೆಯುವ ಮೂಲಕ ಸಂಸ್ಥೆಯನ್ನು ಬೆಳೆಸಬೇಕು. ಈ ಸಂಸ್ಥೆ ಕೇವಲ ಸಮುದಾಯವರಿಗೆ ಸೀಮಿತವಾಗಿರದೇ ಈ ಪರಿಸರದ ಎಲ್ಲಾ ಮನೆಗಳಿಗೂ ಮುಟ್ಟುವಂತಹ ಕೆಲಸವಾಗಬೇಕು. ಬೆಳ್ಳಿಹಬ್ಬದ ಸಂದರ್ಭದಲ್ಲಿ 25 ಶಾಖೆಗಳನ್ನು ತೆರೆಯುವಂತಾಗಲಿ ಎಂದರು. ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ಮಾತನಾಡಿ, ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘವು 20 ವರ್ಷಗಳಲ್ಲಿ ವಿವಿಧ ಶಾಖೆಗಳನ್ನು ಪ್ರಾರಂಭಿಸಿಕೊಂಡು ಸತತವಾಗಿ ಲಾಭಗಳಿಸಿಕೊಂಡು ಬಂದಿದೆ. 8ನೇ ಶಾಖೆಯ ಮೂಲಕವೂ ಸಂಘವು ಸಾಧನೆ ಮಾಡಲಿ ಎಂದರು. ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಸ್ವಾಗತಿಸಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವಂತಹ ದೊಡ್ಡ ಗುಣ ಸಂಘದ ಮುಖ್ಯ ಉದ್ದೇಶವಾಗಿದೆ. ಕನಿಷ್ಠ ಬಡ್ಡಿಯೊಂದಿಗೆ ಸಂಘವು ಯಾವುದೇ ತಾರತಮ್ಯ ಇಲ್ಲದೇ ಎಲ್ಲರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ.ಅಷ್ಠ ಮಠಗಳಲ್ಲಿ ಒಂದಾದ ಮೂಲ ಮಠ ಕಾಣಿಯೂರಿನಲ್ಲಿ ಇದೀಗ ಸಂಘದ 8ನೇ ಶಾಖೆಯನ್ನು ಪ್ರಾರಂಭಿಸುವಲ್ಲಿ ಕಾಲ ಒದಗಿ ಬಂದಿದೆ ಎಂದರು. ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನ ಮಾಲಕ, ಒಕ್ಕಲಿಗ ಗೌಡ ಸಂಘದ ಸವಣೂರು ವಲಯ ಉಸ್ತುವಾರಿ ಚಂದ್ರಶೇಖರ್ ಬರೆಪ್ಪಾಡಿ ಮಾತನಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆಯನ್ನು ಕಾಣಿಯೂರಿನಲ್ಲಿ ಪ್ರಾರಂಭಿಸುವ ಮೂಲಕ ಬಹುದಿನಗಳ ಬೇಡಿಕೆ ಕನಸಾಗಿತ್ತು.ಆದರೆ ಆ ಕನಸು ಇದೀಗ ಕೂಡಿ ಬಂದಿದೆ.ಈ ಊರಿನ ಮತ್ತು ಸಂಘದ ಹಿರಿಯರ ಸಹಕಾರದಿಂದ ಕಾಣಿಯೂರಿನಲ್ಲಿ ಶಾಖೆ ತೆರೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸು, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆ., ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಉದನಡ್ಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಗೌಡ, ನಿರ್ದೇಶಕರಾದ ಮೋಹನ ಗೌಡ ಇಡ್ಯಡ್ಕ,ಪ್ರವೀಣ್ ಕುಂಟ್ಯಾನ,ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ., ಸತೀಶ್ ಪಾಂಬಾರು, ಲೋಕೇಶ್ ಸಿ.ಎಚ್., ಸುಪ್ರೀತ ರವಿಚಂದ್ರ, ತೇಜಸ್ವಿನಿ ಗೌಡ ಕಟ್ಟಪುಣಿ, ಪುತ್ತೂರು ಒಕ್ಕಲಿಗ ಗೌಡ ಯುವ ಸಂಘದ ಅಧ್ಯಕ್ಷ ನಾಗೇಶ್ ಕೆ ಕೆಡೆಂಜಿ, ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ತೇಜಸ್ವಿನಿಶೇಖರ ಗೌಡ ಪ್ರಾರ್ಥಿಸಿದರು.ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಗೌಡ ಇಡ್ಯಡ್ಕ ಸ್ವಾಗತಿಸಿದರು.ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ವಂದಿಸಿದರು.ಉದಯ ಕುಮಾರ್ ಕರ್ಮಲ ಹಾಗೂ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

ಸಹಕರಿಸಿದವರಿಗೆ ಗೌರವಾರ್ಪಣೆ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 8ನೇ ಶಾಖೆಯನ್ನು ಕಾಣಿಯೂರಿನಲ್ಲಿ ಪ್ರಾರಂಭಿಸುವ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಶ್ರೀ ಡಾ|| ಧರ್ಮಪಾಲನಾಥ ಸ್ವಾಮೀಜಿಯವರು ಗೌರವಿಸಿದರು.

ನಾರಾಯಣ ಗೌಡ ಇಡ್ಯಡ್ಕ, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಯಶವಂತ ಗೌಡ ಕಳುವಾಜೆ, ಎಂ.ಎನ್.ಗೌಡ ಕಾಣಿಯೂರು, ಸೀತಾರಾಮ ಗೌಡ ಮುಂಡಾಲ, ವೆಂಕಟ್ರಮಣ ಗೌಡ ಮರಕ್ಕಡ, ರಾಧಾಕೃಷ್ಣ ಪೈಕ, ವಿಶ್ವನಾಥ ಅಂಬುಲ, ಜಯಂತ ಅಂಬುಲ, ಲೋಕೇಶ್ ಗೌಡ ಎಣ್ಮೂರು, ಶೇಷಪ್ಪ ಗೌಡ ಇಡ್ಯಡ್ಕ, ಪರಮೇಶ್ವರ ಗೌಡ ಅನಿಲ, ವಸಂತ ಪೆರ್ಲೋಡಿ, ಕುಶಾಲಪ್ಪ ಗೌಡ, ಶ್ರೀರಕ್ಷಾ ಗುಂಡಿಗದ್ದೆ, ಸೋಮಪ್ಪ ಗೌಡ ಕಮಿಲ ತುಂಬ್ಯ, ವಿಜೇತ್ ಮುಂಡಾಲ, ಕೇಶವ ಗೌಡ ಬೈತಡ್ಕ, ಪ್ರಗತ್‌ರಾಜ್ ಬೈತಡ್ಕ, ದಿನೇಶ್ ಕೊಯಕ್ಕುಡೆ, ಅನಿಲ್ ಖಂಡಿಗ, ಲೋಕನಾಥ ಗೌಡ ವಜ್ರಗಿರಿ ಕುದ್ಮಾರು, ಭರತ್ ನಡುಮನೆ, ವಿಠಲ ಗೌಡ ಕಾಪೆಜಾಲು, ತಾರಾನಾಥ ಕಾಯರ್ಗ, ತೀರ್ಥರಾಮ ಕೆಡೆಂಜಿ, ಬಾಲಚಂದ್ರ ಗೌಡ, ರಾಘವ ಗೌಡ, ಸುರೇಶ್ ಸರ್ವೆ, ರಮೇಶ್ ಕರುಂಬಾರು, ಬೆಳಿಯಪ್ಪ ಗೌಡ, ಜ್ಞಾನೇಶ್ವರಿ ಚಂದ್ರಶೇಖರ್ ಬರೆಪ್ಪಾಡಿ, ಪ್ರೀತಂ ಮಾಚಿಲ, ಚೇತನ್‌ರವರು ಗೌರವ ಸ್ವೀಕರಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್.ಕೆ ಸಹಕರಿಸಿದವರ ವಿವರ ವಾಚಿಸಿದರು.

ಕಿಟ್ ವಿತರಣೆ:ಇದೇ ವೇಳೆ ಬಾರೆಂಗಳಗುತ್ತು ಫೌಂಡೇಷನ್‌ನ ವತಿಯಿಂದ ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ನೇತೃತ್ವದಲ್ಲಿ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here