![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ನಾಗ ಸಾನಿಧ್ಯ ವೃದ್ಧಿಗಾಗಿ, ನಾಗದೋಷ, ಕಾಲಸರ್ಪ ದೋಷಗಳ ನಿವಾರಣೆ ಹಾಗೂ ನಾಗಾನುಗ್ರಹಕ್ಕಾಗಿ ನಾಗಸಂಕುಲದ ಅತಿ ಪ್ರೀಯವಾದ `ನಾಗತನು ತರ್ಪಣ ಸೇವೆ ಹಾಗೂ ನಾಗದರ್ಶನ ಸೇವೆ’ಯು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.28 ರಂದು ನೆರವೇರಿತು.
ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರಿಂದ ನಾಗ ತನು ತರ್ಪಣ ಸೇವೆಯು ನೆರವೇರಿತು. ಪ್ರಾರಂಭದಲ್ಲಿ ದೇವಸ್ಥಾನದಲ್ಲಿ ಮಹಾವಿಷ್ಣು ಹಾಗೂ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಪೂಜೆ, ರಂಗಪೂಜೆ ನೆರವೇರಿದ ಬಳಿಕ ದೇವರ ಬಿಂಬದೊಂದಿಗೆ ಹೊರಟು ನಾಗ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಅಳವಡಿಸಲಾದ ಮಂಡಳಿದ ಬಳಿಗೆ ಆಗಮಿಸಿತು. ಬಳಿಕ ತಂತ್ರಿಗಳಿಂದ ಪೂಜೆ, ತರ್ಪಣೆ ಹಾಗೂ ನಾಗದರ್ಶನ ನಡೆಯಿತು.
ಬೃಹತ್ ಮಂಡಲ:
ನಾಗತನು ತರ್ಪಣ ಸೇವೆಗೆ ಬೃಹದಾಕಾರದ ಮಂಡಲವನ್ನು ರಚಿಸಲಾಗಿತ್ತು. ಆಶ್ಲೇಷ ಬಲಿ ಪೂಜೆಗೆ ರಚಿಸಲಾಗುವ ಮಂಡಲದ ಮಾದರಿಯ ಬೃಹತ್ ಮಂಡಲವನ್ನು ರಚಿಸಲಾಗಿದ್ದು ಸುಮಾರು 60 ಅಡಿ ಉದ್ದ 20ಅಡಿ ಅಗಲದ ಹಾಗೂ 40 ಕೆಜಿಗೂ ಅಧಿಕ ಪಂಚವರ್ಣದ ಹುಡಿಯನ್ನು ಬಳಸಿ, ನುರಿತ ಋತ್ವುಜರಿಂದ ಬೃಹತ್ ಮಂಡಲವನ್ನು ರಚಿಸಲಾಗಿದೆ. ಯೋಗೀಶ ಕಲ್ಲೂರಾಯ ಹಾಗೂ ವೆಂಕಟಕೃಷ್ಣ ಕಲ್ಲೂರಾಯವರು ಮಂಡಲ ರಚನೆಯ ಮುಂಚೂಣಿಯಲ್ಲಿದ್ದರು. ಅಪರೂಪವಾಗಿ ನಡೆಯುವ ನಾಗತನು ತರ್ಪಣಾ ಸೇವೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿ, ಕಣ್ತುಂಬಿಕೊಂಡರು.