ನರೇಂದ್ರ ಪ.ಪೂ.ಕಾಲೇಜಿನಲ್ಲಿ ದೀಪ ಪ್ರದಾನ ಕಾರ‍್ಯಕ್ರಮ

0

ಪುತ್ತೂರು: ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನೈತಿಕತೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಗುರಿ ಮುಟ್ಟಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಶ್ಚಿತ ಗುರಿ ಇಟ್ಟುಕೊಂಡು ಯೋಜಿತವಾಗಿ ಅಧ್ಯಯನ ಮಾಡಿದ್ದಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ ಎಂದು ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ ಪ್ರಭಾರ ಮುಖ್ಯ ಶಿಕ್ಷಕಿ ಸುಮನ ಬಿ. ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ದೀಪ ಪ್ರದಾನ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ ಕೆ. ಮಾತನಾಡಿ, ಬದುಕಿಗೊಂದು ದಿಕ್ಕು ಮತ್ತು ಆ ದಿಕ್ಕಿನಲ್ಲಿ ಸಾಗಬೇಕಾದ ದಾರಿಯ ಅರಿವನ್ನು ಇಂದಿನ ಯುವಪೀಳಿಗೆಯಲ್ಲಿ ಮೂಡಿಸುವ ಕೆಲಸವನ್ನು ನಮ್ಮೆಲ್ಲಾ ಸಂಸ್ಥೆಗಳು ಮಾಡುತ್ತಿದೆ. ಅದಕ್ಕೆ ಪೂರಕವಾದ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ಸಮಾಜದಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಿ. ದಿನನಿತ್ಯ ಅಧ್ಯಯನ ಮತ್ತು ಚಿಂತನೆಯೊಂದಿಗೆ, ಭವಿಷ್ಯದಲ್ಲಿ ಬರುವ ಸವಾಲನ್ನು ಎದುರಿಸಲು ಧೈರ್ಯದಿಂದ ಸಾಗಬೇಕು. ವಿದ್ಯಾರ್ಥಿಗಳ ಸಾಧನೆಗೆ ಶ್ರಮ, ತಾಳ್ಮೆ, ಶ್ರದ್ಧೆ ಎಂಬ ನಿರ್ದಿಷ್ಟ ಮಾರ್ಗವಿದ್ದು , ಸಾಧಿಸುತ್ತೇನೆ ಎಂಬ ದೃಢ, ಅಚಲವಾದ ನಿರ್ಧಾರ ತಳೆದಾಗ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಬಿ. ಮಾತನಾಡಿ, ಇಂದಿನ ಯುವ ಜನತೆ ಜೀವನದಲ್ಲಿ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗ ಸ್ಥಾನಕ್ಕೆ ಏರಬಹುದು. ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಸತತ ಪ್ರಯತ್ನ ಸಮಯ ಪಾಲನೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳುವುದರ ಮೂಲಕ ಯಶಸ್ಸಿನ ಕಡೆಗೆ ಸಾಗಬಹುದು. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಉಪನ್ಯಾಸಕರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಿಲಕಧಾರಣೆಯನ್ನು ಮಾಡಿ, ಅವರ ಮುಂದಿನ ಭವಿಷ್ಯ ಬೆಳಗಲಿ ಎನ್ನುವುದರ ಸಂಕೇತವಾಗಿ ದೀಪವನ್ನು ಉರಿಸಿ ವಿದ್ಯಾರ್ಥಿಗಳಿಗೆ ಹಂಚಿದರು. ಆ ವಿದ್ಯಾರ್ಥಿಗಳು ದೀಪಗಳಿಂದ ಅಖಂಡಭಾರತವನ್ನು ಬೆಳಗಿದರು.

ವಿದ್ಯೆಯೊಂದಿಗೆ ಸಮಗ್ರ ಚಟುವಟಿಕೆಗಳು ಸದಾಕಾಲವೂ ವಿದ್ಯಾ ಸಂಸ್ಥೆಯನ್ನು ಬೆಳಗುತ್ತಿರಲಿ ಎನ್ನುವ ಸಂಕೇತವಾಗಿ ದೀಪವನ್ನು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಗೊಳಿಸಿದರು.

ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಸಂಗ್ರಹಿಸಿದ ಹಣವನ್ನು ಕೊಡುಗೆಯಾಗಿ ನೀಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗಾಗಿ ಆಕರ್ಷಕ ಮೋಜಿನ ಆಟಗಳನ್ನು ಆಯೋಜಿಸಿದರು. ಬಹುಮಾನವಾಗಿ ನೆನಪಿನ ಕಾಣಿಕೆಗಳನ್ನು ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ಸಂಚಾಲಕ ಸಂತೋಷ್ ಬಿ.,‌ ಸದಸ್ಯರಾದ ಮೋಹಿನಿ ದಿವಾಕರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಸುಮಾ ಭಟ್ ಸ್ವಾಗತಿಸಿ, ಪ್ರಥಮ ವಿಜ್ಞಾನ ವಿಭಾಗದ ಶ್ರೇಯಾ ವಂದಿಸಿದರು. ಕಾರ‍್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಭೂಮಿಕಾ ಜಿ. ನಿರೂಪಿಸಿದರು.

LEAVE A REPLY

Please enter your comment!
Please enter your name here