ಕೃಷಿ ಯಂತ್ರಮೇಳದಲ್ಲಿ ವಿದ್ಯಾರ್ಥಿ-ಸಭಿಕರಿಗೆ ಸ್ಪೂರ್ತಿ ನೀಡಿ ವಿಜೃಂಭಿಸಿದ ಕೃಷಿ ರಸಪ್ರಶ್ನೆ

0

ಪುತ್ತೂರು: ಪುತ್ತೂರಿನ ಏಕೈಕ ಸಮುದಾಯ ಬಾನುಲಿ ಕೇಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ವತಿಯಿಂದ 5ನೇ ಬೃಹತ್ ಕೃಷಿಯಂತ್ರ ಮೇಳ ಮತ್ತು ಕನಸಿನ ಮನೆ ಸಂದರ್ಭ ಆಯೋಜಿಸಿದ್ದ ಕೃಷಿ ರಸಪ್ರಶ್ನೆ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಯಿತು.
ಕ್ಯಾಂಪ್ಕೋ ನಿಯಮಿತ, ಮಂಗಳೂರು ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ನೆಹರೂನಗರ, ಪುತ್ತೂರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕೃಷಿ ಯಂತ್ರಮೇಳದಲ್ಲಿ ರೇಡಿಯೋ ಪಾಂಚಜನ್ಯದ ವತಿಯಿಂದ ಕೃಷಿ ರಸಪ್ರಶ್ನೆ ಸ್ಪರ್ಧೆ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಮತ್ತು ಸಾರ್ವಜನಿಕ ವಿಭಾಗಕ್ಕೆ ನಡೆಸಲಾಯಿತು.

ಕೃಷಿಯ ಬಗ್ಗೆ, ಸಾವಯವ ಕೃಷಿಯ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ರಸಪ್ರಶ್ನೆಗೆ 15 ರಿಂದ 20 ಮಂದಿ ಪ್ರಸಿದ್ಧ ಕೃಷಿಕರು, ವೈದ್ಯರು, ಉಪನ್ಯಾಸಕರು ಪ್ರಶ್ನಾವಳಿ- ಉತ್ತರಗಳನ್ನು ತಯಾರು ಮಾಡಿಕೊಟ್ಟಿದ್ದರು.

ಸಾವಯವ ಪ್ರಗತಿಪರ ಕೃಷಿಕರಾದ ಮರಿಕೆ ಸದಾಶಿವ ಭಟ್ ಅವರ ಮಾರ್ಗದರ್ಶನದಲ್ಲಿ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ಕಾರ್ಯನಿರ್ವಾಹಕಿಯಾದ ತೇಜಸ್ವಿ ರಾಜೇಶ್ ಅವರ ಸಹಕಾರದೊಂದಿಗೆ ಪ್ರಶ್ನಾವಳಿ 50 ಸುತ್ತುಗಳ 300 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು.

ಕೃಷಿ ಯಂತ್ರಗಳ ಚಿತ್ರಗಳನ್ನು ಗುರುತಿಸುವ ಸುತ್ತು: ಸೇಡಿಯಾಪು ವಿಶ್ವಪ್ರಸಾದ್ ಅವರು ನೀಡಿದ ಕೃಷಿ ಪರಿಕರಗಳನ್ನು ಗುರುತಿಸುವ ಸುತ್ತುಗಳು, ಕೃಷಿಕರಾದ ಶಿವಸುಬ್ರಹ್ಮಣ್ಯ ಹಾಗೂ ಜೇಸಿ ರಾಷ್ಟ್ರೀಯ ತರಬೇತುದಾರರಾದ ಕೃಷ್ಣಮೋಹನ್ ಅವರ ರಸಪ್ರಶ್ನೆಯ ನಿರ್ವಹಣೆ ಉತ್ತಮವಾಗಿತ್ತು.


ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಸ್ಪರ್ಧೆ ಮಾತ್ರವಲ್ಲದೆ ಸಭಿಕರಾಗಿ ಉಪಸ್ಥಿತರಿದ್ದವರೆಲ್ಲರಿಗೂ ಪ್ರಶ್ನೆಗಳನ್ನು ಕೇಳಿ ವಾಟ್ಸಪ್ನಲ್ಲಿ ಉತ್ತರ ಯಾರು ವೇಗವಾಗಿ ನೀಡುತ್ತಾರೋ ಅವರಿಗೂ ಬಹುಮಾನಗಳನ್ನು ನಡೆಸಲಾಗುತ್ತಿತ್ತು. ಭಾಗವಹಿಸಿದ ಹಾಗೇ ಉಪಸ್ಥಿತರಿದ್ದವರೆಲ್ಲರಿಗೂ ರಸಪ್ರಶ್ನೆ ಸ್ಪರ್ಧೆ ಕೃಷಿಯ ಕುರಿತ ಉತ್ಸಾಹ ಹೊಸ ನಾಂದಿಯಾಗಿ ಮೂಡಿಬರುತ್ತಿತ್ತು.

ರಸಪ್ರಶ್ನೆ ಸ್ಪರ್ಧೆಯನ್ನು ಎ.ಪಿ. ಸದಾಶಿವ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಮತ್ತು ರೇಡಿಯೋ ಪಾಂಚಜನ್ಯದ ಕೋಶಾಧಿಕಾರಿ ಗೌರಿ ಬನ್ನೂರು ಉಪಸ್ಥಿತರಿದ್ದರು.
ಕೃಷ್ಣವೇಣಿ ಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ ಅವರು ಅತಿಥಿಗಳನ್ನು ಪರಿಚಯಿಸುವುದರೊಂದಿಗೆ ಇನ್ನರ್ವೀಲ್ ಸದಸ್ಯೆ ಆಶಾ ನಾಯಕ್ ಅಂಕ ನಮೂದಿಸುವುದರಲ್ಲಿ ಸಹಕರಿಸಿದರು.

ವಿವೇಕಾನಂದ ಇಂಜಿನಿರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಅನಘಾ ಮತ್ತು ಸುಮನಾ ಪ್ರಾರ್ಥನೆ ಹಾಡಿದರು. ಪ್ರಶಾಂತ್, ವಿವೇಕಾನಂದ ಪದವಿ ಕಾಲೇಜಿನ ಎನ್ಎಸ್ಎಸ್ ವಿಭಾಗದ ವಿದ್ಯಾರ್ಥಿಗಳು ಸಹಕರಿಸಿದರು. ರೇಡಿಯೋ ಪಾಂಚಜನ್ಯದ ಕಾರ್ಯಕ್ರಮ ಸಂಯೋಜಕಿ ತೇಜಸ್ವಿ ರಾಜೇಶ್ ನಿರೂಪಿಸಿದರು.

ಪ್ರಶ್ನೆ ತಯಾರಿಗೆ ಕೃಷಿತಜ್ಞರ ನೆರವು
ಪ್ರಶ್ನೆ ತಯಾರಿಗೆ ಹಲವು ಕೃಷಿತಜ್ಞರ ನೆರವು ಪಡೆಯಲಾಗಿತ್ತು. ಮರಿಕೆ ಸದಾಶಿವ ಭಟ್, ಶಿವಸುಬ್ರಹ್ಮಣ್ಯ, ಟಿ.ಎಸ್.ಪ್ರಸಾದ್ (ಆಕಾಶವಾಣಿ), ಡಾ. ಸುಚಿತ್ರಾ ಹೊಳ್ಳ, ಪ್ರಿಯಾ ಹಾಸನ, ಸುಜಾತ, ಆಶಾ ನಾಯಕ್, ಅಶ್ವಿನಿ ಕೃಷ್ಣ ಮುಳಿಯ, ಸೇಡಿಯಾಪು ಜನಾರ್ಧನ ಭಟ್, ಡಾ. ರವೀಂದ್ರನಾಥ್ ಐತಾಳ್, ಸೇಡಿಯಾಪು ವಿಶ್ವಪ್ರಸಾದ್, ಪ್ರಮೀಳಾ ರಾವ್, ಡಾ. ಹರಿಕೃಷ್ಣ ಪಾಣಾಜೆ, ನರೇಂದ್ರ ರೈ ದೇರ್ಲ, ಅನಿಲ್ ಬಳ್ಳಂಜ, ರಾಧಿಕಾ ಮಡಿಕೇರಿ, ಗಣರಾಜ ಭಟ್, ಮಲೆತ್ತಡ್ಕ ನವೀನ್, ಮುರಳಿ ಶ್ಯಾಂ, ಭರತ್ರಾಜ್ ಸೊರಕೆ ಸೇರಿದಂತೆ ಮತ್ತಿತರರು ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒದಗಿಸಿದ್ದರು. ಹೀಗಾಗಿ ಪ್ರಶ್ನೆಗಳಲ್ಲಿ ವೈವಿಧ್ಯತೆ ಇತ್ತು.

ವಿಜೇತರ ಮುಡಿಗೆ ಚಿನ್ನ
ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಆಕರ್ಷಣೆಯಾಗಿ ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಬೆಳ್ಳಿ ನಾಣ್ಯ ಮತ್ತು ತೃತೀಯ ಬಹುಮಾನವಾಗಿ ದೀಪವನ್ನು ನೀಡಲಾಯಿತು. ಮುಳಿಯ ಜ್ಯುವೆಲ್ಸ್, ಯೂನಿಯನ್ ಬ್ಯಾಂಕ್ ಪುತ್ತೂರು ಶಾಖೆ, ಪ್ರಶಾಂತ್ ಬಣ್ಣದ ಪ್ರಪಂಚ, ಜನ್ಮ ಕನ್ಟ್ರಕ್ಷನ್ನ ಹರ್ಷಕುಮಾರ್ ರೈ, ಕೊಕೊ ಗುರು ಅಂಗಸಂಸ್ಥೆ ಅಡಿಗೆ ಮನೆ, ಪೊಪ್ಯುಲರ್ ಸ್ವೀಟ್ಸ್, ದ ವೆಬ್ ಪೀಪಲ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಮತ್ತು ಸುಗಮ ಸ್ಟೋರ್ಸ್ ಈ ಸ್ಪರ್ಧೆಗೆ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದರು

ಬಹುಮಾನ ವಿಜೇತರು
ಪದವಿ ಪೂರ್ವ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ನಿರ್ಮಿತ್ ಮತ್ತು ಯೋಗವರ್ಧನ್ (ಪ್ರಥಮ ಚಿನ್ನದ ನಾಣ್ಯ), ಕಿರಣ್ರಾಜ್ ಮತ್ತು ಶರತ್ ಕುಮಾರ್ (ದ್ವಿತೀಯ ಬೆಳ್ಳಿ ನಾಣ್ಯ), ಸಚಿನ್ ಮತ್ತು ಹಿತೇಶ್ (ತೃತೀಯಸ್ಥಾನವಾಗಿ ದೀಪ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಪದವಿ, ಸ್ನಾತಕೋತ್ತರ, ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ಪ್ರಜ್ವಲ್ಕೃಷ್ಣ (ಪ್ರಥಮ), ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶರಣ್ಯ ಎನ್. ಮತ್ತು ಸುಶ್ಮಿತಾ ಎಂ. (ದ್ವಿತೀಯ), ಶಿವಮೊಗ್ಗ ಎಗ್ರಿಕಲ್ಚರ್ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಾದ ಗೌತಮಿ ಮತ್ತು ಜಸ್ಮಿತಾ (ತೃತೀಯ) ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಸಾರ್ವಜನಿಕ ವಿಭಾಗದಲ್ಲಿ ಸಂತೋಷ್ ಕುಮಾರ್ ಕೆ. (ಪ್ರಥಮ), ಸತ್ಯಶಂಕರ್ ಚೂಂತಾರ್(ದ್ವಿತೀಯ) ಮತ್ತು ವಸಂತ ಎನ್. (ತೃತೀಯ)ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here