ಬನ್ನೂರು ಚರ್ಚ್ ನೂತನ ಪ್ರಧಾನ ಧರ್ಮಗುರುಗಳಾಗಿ ಬಾಲ್ತಜಾರ್ ಪಿಂಟೋರವರ ಆಗಮನ

0

ಪುತ್ತೂರು: ಫ್ರಾನ್ಸಿಸ್ಕನ್ ಸಭೆಗೆ ಒಳಪಟ್ಟ ಬನ್ನೂರು ಸಂತ ಅಂತೋನಿ ಚರ್ಚ್‌ನ ನೂತನ ಪ್ರಧಾನ ಧರ್ಮಗುರುಗಳಾಗಿ ಬಾಲ್ತಜಾರ್ ಪಿಂಟೋರವರನ್ನು ನೇಮಕಗೊಳಿಸಿದ್ದು, ಫೆ.18ರಂದು ಅವರು ಸೇವಾ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ಕಳೆದ ಆರು ವರ್ಷಗಳಿಂದ ಬನ್ನೂರು ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಶಾಂತ್ ಫೆರ್ನಾಂಡೀಸ್‌ರವರು ಇದೀಗ ಬೆಂಗಳೂರಿನ ಸಂತ ಅಂತೋನಿಯವರ ಫ್ರಾಯರಿ ಚರ್ಚ್‌ಗೆ ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಬಾಲ್ತಜಾರ್ ಪಿಂಟೋರವರನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಾರವಾರ ಧರ್ಮಪ್ರಾಂತ್ಯಕ್ಕೊಳಪಟ್ಟ ಹೊನ್ನಾವರ ತಾಲೂಕಿನ ಮಂಕಿ ಎಂಬಲ್ಲಿನ ನಿವಾಸಿ ದಿಯೆಗ್ ಪಿಂಟೋ ಹಾಗೂ ಪಾವ್ಲಿನ್ ಪಿಂಟೋರವರ ಸುಪುತ್ರನಾಗಿ 1960, ನವೆಂಬರ್ 26 ರಂದು ಜನಿಸಿದ ಬಾಲ್ತಜಾರ್ ಪಿಂಟೋರವರು ತಮ್ಮ ಎಸೆಸ್ಸೆಲ್ಸಿ ಶಿಕ್ಷಣವನ್ನು ಹೊನ್ನಾವರದ ಮಂಕಿಯಲ್ಲಿ ಪೂರೈಸಿದ್ದರು. ಬಳಿಕ 1978ರಲ್ಲಿ ಆಂಧ್ರ ಪ್ರದೇಶದಲ್ಲಿ ಫ್ರಾನ್ಸಿಸ್ಕನ್ ಸೆಮಿನರಿಗೆ ಭರ್ತಿಗೊಂಡ ಬಾಲ್ತಜಾರ್ ಪಿಂಟೋರವರು ತಮ್ಮ ತತ್ವಶಾಸ್ತ್ರ , ದೇವಶಾಸ್ತ್ರ ಹಾಗೂ ಪದವಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿ, 1990ರಲ್ಲಿ ಧರ್ಮಗುರು ದೀಕ್ಷೆಯನ್ನು ಪಡೆದಿದ್ದರು. 1990ರಲ್ಲಿ ಮುರ್ಡೆಶ್ವರ ಚರ್ಚ್‌ನಲ್ಲಿ ಪ್ರಥಮವಾಗಿ ಸಹಾಯಕ ಧರ್ಮಗುರು ಸೇವೆಯನ್ನು ಆರಂಭಿಸಿದ ಬಾಲ್ತಜಾರ್ ಪಿಂಟೋರವರು ಬಳಿಕ ಅದೇ ಚರ್ಚ್‌ನಲ್ಲಿ 1992 ರಿಂದ 1994ರ ವರೆಗೆ ಪ್ರಧಾನ ಧರ್ಮಗುರುಗಳಾಗಿ ಸೇವೆ, 1994ರಲ್ಲಿ ಕಾರವಾರ ಧರ್ಮಪ್ರಾಂತ್ಯದಲ್ಲಿ ಯುವಜನ ನಿರ್ದೇಶಕರಾಗಿ ಮತ್ತು ಭಟ್ಕಳ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ, 1998ರಲ್ಲಿ ಗೋವಾ ಮೌಂಟ್ ಕಾರ್ಮೆಲ್ ಚಾಪೆಲ್‌ನಲ್ಲಿ ಗುರುಗಳಾಗಿ ಆಗಿ ಸೇವೆ, 1999ರಲ್ಲಿ ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ , 2001 ರಿಂದ 2002ರ ವರೆಗೆ ನೊವಿಸ್ ಮಾಸ್ಟರ್ ಆಗಿ ಸೇವೆ,2010-14ರಲ್ಲಿ ಭಟ್ಕಳ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ, 20144-17ರಲ್ಲಿ ಸಭೆಯ ಪತ್ರಿಕೆಯ ಮ್ಯಾನೇಜರ್ ಆಗಿ ಸೇವೆ, 2017ರಲ್ಲಿ ಪುತ್ತೂರಿನ ಬನ್ನೂರು ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ, 2018-20ರಲ್ಲಿ ಪಲಮನೇರ್ ಸೈಂಟ್ ಫ್ರಾನ್ಸಿಸ್ ಜ್ಯೂನಿಯರ್ ಕಾಲೇಜಿನಲ್ಲಿ ಸಂಚಾಲಕರಾಗಿ ಸೇವೆ, 2020-23ರಲ್ಲಿ ಬೆಂಗಳೂರಿನ ಸೈಂಟ್ ಆಂಟನಿ ಫ್ರಾಯರಿ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಬನ್ನೂರು ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿರುತ್ತಾರೆ. ನಿರ್ಗಮಿತ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್‌ರವರು 2017ರಲ್ಲಿ ಬನ್ನೂರು ಚರ್ಚ್‌ಗೆ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿದ್ದ ಸಂದರ್ಭದಲ್ಲಿ ಇದೀಗ ಆಗಮಿಸಿರುವ ಬಾಲ್ತಜಾರ್ ಪಿಂಟೋರವರು ಅಂದು ಸಹಾಯಕ
ಧರ್ಮಗುರುಗಳಾಗಿ ಕೆಲವು ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರು.

ಸೇವಾ ಹುದ್ದೆಯ ಹಸ್ತಾಂತರ…
ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್‌ರವರು ಫೆ.18 ರಂದು ಸಂಜೆ ಪೂಜಾ ವಿಧಿಗಳನ್ನು ನೆರವೇರಿಸಿದ ಬಳಿಕ ನೂತನ ಧರ್ಮಗುರುಗಳಾಗಿ ಆಗಮಿಸಿದ ಬಾಲ್ತಜಾರ್ ಪಿಂಟೋರವರಿಗೆ ಅಧಿಕಾರ ಹಸ್ತಾಂತರಗೊಳಿಸಿದರು. ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ಸಹಿತ ಚರ್ಚ್ ಪಾಲನಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here