ಫೆ.26: ಕೊಡಂಗಾಯಿ ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆ, ಮೂರು ದಿನಗಳ ವಿವಿಧ ಕಾರ್ಯಕ್ರಮ

0

ವಿಟ್ಲ: ಇಲ್ಲಿಗೆ ಸಮೀಪದ ಕೊಡುಂಗಾಯಿಯ ಇತಿಹಾಸ ಪ್ರಸಿದ್ಧ ಕೇಂದ್ರ ಮುಹ್ಯದ್ದೀನ್ ಜುಮಾ ಮಸೀದಿಯ ನವೀಕೃತ ಮಸ್ಜಿದ್ ಕಟ್ಟಡದ ಉದ್ಘಾಟನಾ ಸಮಾರಂಭ ಫೆ. 26ರಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 9-00 ಕ್ಕೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು ಬೆಳಿಗ್ಗೆ ಗಂಟೆ 10-00ಕ್ಕೆ ನವೀಕೃತ ಮಸ್ಜಿದ್ ಕಟ್ಟಡವನ್ನು ಪಾಣಕ್ಕಾಡ್ ಸಯ್ಯಿದ್ ಹಮೀದ್ ಅಲಿ ಶಿಹಾಬ್ ತಂಙಳ್ ಅವರು ಉದ್ಘಾಟಿಸಲಿದ್ದಾರೆ. ಸಯ್ಯಿದ್ ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಖಾಝಿ ಶೈಖುನಾ ಮಾಣಿ ಉಸ್ತಾದ್ ವಕ್ಫ್ ನಿರ್ವಹಣೆ ನಡೆಸಲಿದ್ದಾರೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಅವರು ಉದ್ಘಾಟಿಸಲಿದ್ದು, ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಬಂಬ್ರಾಣ ಉಸ್ತಾದ್ ಮತ್ತು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಮುಖ್ಯ ಭಾಷಣ ನಡೆಸಲಿದ್ದಾರೆ. ಓಲೆಮುಂಡೋವು ಉಸ್ತಾದ್, ಸ್ಥಳೀಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅರ್ಶದಿ, ಕೆ.ಬಿ.ದಾರಿಮಿ ಮೊದಲಾದವರು ಉದ್ಬೋಧನೆ ನಡೆಸಲಿದ್ದು, ಶಾಸಕ ರಾಜೇಶ್ ನಾಯ್ಕ್ , ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಎಂ.ಎಲ್.ಸಿ.ಗಳಾದ ಮಂಜುನಾಥ ಭಂಡಾರಿ, ಬಿ.ಎಂ‌.ಫಾರೂಕ್, ಮಾಜಿ ಸಚಿವ ರಮಾನಾಥ ರೈ, ವಿಟ್ಲ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಾಜಿ ನಾಸಿರ್ ಲಕ್ಕಿಸ್ಟಾರ್, ರಾಜ್ಯ ಜೆ.ಡಿ.ಎಸ್ ನಾಯಕ ಮುಹಮ್ಮದ್ ಕುಂಞ ವಿಟ್ಲ, ಇಕೋವಿಷನ್ ಮುಖ್ಯಸ್ಥರಾದ ರಾಜರಾಂ ಭಟ್ ಬಲಿಪಗುಳಿ, ಗ್ರಾ.ಪಂ ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ , ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಶ್ ಚಂದ್ರ ಶೆಟ್ಟಿ , ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ಮೊದಲಾದ ಹಲವಾರು ಗಣ್ಯರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಲಿದೆ.

ಅದೇ ದಿನ ರಾತ್ರಿ ಗಂಟೆ 7-30 ರಿಂದ ರಾಜ್ಯ ಮಟ್ಟದ ಅತ್ಯಾಕರ್ಷಕ ದಫ್ ಸ್ಪರ್ಧಾ ಕಾರ್ಯಕ್ರಮ ಜರಗಲಿದ್ದು , ಜಮಾಅತ್ ಅಧ್ಯಕ್ಷ ಎ.ಎಂ. ಮುಹಮ್ಮದ್ ಕುಂಞ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು. ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸುವರು.

ಜ.27 ರಂದು ರಾತ್ರಿ ಗಂಟೆ 8-00 ರಿಂದ ಬದ್ರಿಯತ್ ಕಮಿಟಿಯ 36 ನೆಯ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುವಾಶೀರ್ವಚನಕ್ಕೆ ನೇತೃತ್ವ ನೀಡುವರು. ಶಾಕಿರ್ ಸಖಾಫಿ ಮಂಬಾಡ್ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಜನವರಿ 28 ರಂದು ರಾತ್ರಿ ಗಂಟೆ 8-00 ರಿಂದ ನುಸ್ರತುಲ್ ಮಸಾಕೀನ್ ಕುತುಬಿಯತ್ ಕಮಿಟಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಅಲೀ ಬಾಫಖಿ ತಂಙಳ್ ಕೊಯಿಲಾಂಡಿ ದುವಾಶೀರ್ವಚನಕ್ಕೆ ನೇತೃತ್ವ ನೀಡಲಿರುವರು. ಅನ್ವರ್ ಅಲಿ ಹುದವಿ ಮಲಪ್ಪುರಂ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸುವರು ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ.ಎಂ.ಎ.ಕೊಡುಂಗಾಯಿ ಮತ್ತು ಕನ್ವಿನರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ , ಜಮಾಅತ್ ಸಮಿತಿ ಅಧ್ಯಕ್ಷ ಎ.ಎಂ.ಅಹ್ಮದ್ ಕುಂಞ ಮತ್ತು ಕಾರ್ಯದರ್ಶಿ ಸಿ.ಎಚ್.ಅಬ್ದುಲ್ ಖಾದರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here