ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ದಾವಣಗೆರೆ ಘಟಕದ 15ನೇ ವಾರ್ಷಿಕೋತ್ಸವ ಉದ್ಘಾಟನೆ

0

ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ : ಒಡಿಯೂರು ಶ್ರೀ

ಅಧ್ಯಾತ್ಮಿಕ ಗುರುವಿನ ಪೂಜೆ ನಮಗೆ ಲೌಕಿಕ ಸಂತೋಷವನ್ನು ನೀಡುತ್ತದೆ: ಸಾಧ್ವೀ ಶ್ರೀ ಮಾತಾನಂದಮಯೀ

ವಿಟ್ಲ: ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ. ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ ಭಾವನೆಯನ್ನು ಮೂಡಿಸುವ ಕೆಲಸಮಾಡಬೇಕಿದೆ. ದೇಶಪ್ರೇಮದ ಅರಿವು ಮೂಡಿಸುವ ಕೆಲಸ ತಾಯಂದಿರಿಂದ ಆಗಬೇಕಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹೇಳಿದರು. 

ಅವರು ದಾವಣಗೆರೆಯ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕದ 15ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದಾವಣಗೆರೆಯ ಮಹಿಳೆಯರು ಏನೂ ಕಡಿಮೆ ಇಲ್ಲ ಎಂಬುದು ಇಲ್ಲಿ ಕಂಡ ಸತ್ಯ. ಭಕ್ತಿಶ್ರದ್ಧೆಗೆ ಇಲ್ಲಿಯ ತಾಯಂದಿರು ಮಾದರಿಯಾಗಿದ್ದಾರೆ. ಅವರುಗಳು ನಮ್ಮ ಕ್ಷೇತ್ರಕ್ಕೆ ಬಂದಾಗ ಕ್ರಿಯಾಶೀಲರಾಗಿರುವುದನ್ನು ನಾವು ಗಮನಿಸಿದ್ದೇವೆ. ಶಿಸ್ತು, ಸಂಯಮ ಹಾಗೂ ಭಗವದ್ಭಕ್ತಿ ಇದ್ದಲ್ಲಿ ಜೀವನ ಯಶಸ್ವಿಯಾಗುತ್ತದೆ. ತಾಳ್ಮೆ, ಕ್ಷಮಾಗುಣವಿದ್ದರೆ ಭಗವಂತನನ್ನು ಕಾಣಬಹುದು. ದಾವಣಗೆರೆಯಲ್ಲಿ ದಾನ-ಧರ್ಮ ಮಾಡುವ ಕೈಗಳಿವೆ. ಒಳ್ಳೆಯ ಮನಸ್ಸಿನವರೂ ಇದ್ದಾರೆ. ಪ್ರೀತಿಯಿಂದ ತುಂಬಿದ ಹೃದಯವಂತರೂ ಇದ್ದಾರೆ.

ರಾಮ ಎಂದರೆ ರಾಷ್ಟ್ರ. ರಾಷ್ಟ್ರ ಎಂದರೆ ರಾಮ ಎಂದು ನಂಬಿದವರು ನಾವು. 

ಹನುಮ ಎಂದರೆ ಸಂಸ್ಕೃತಿ. ರಾಮ ಎಂದರೆ ತ್ಯಾಗ, ಹನುಮ ಎಂದರೆ ಸೇವೆ. ಎರಡೂ ಒಟ್ಟು ಸೇರಿದಾಗ ರಾಷ್ಟ್ರೀಯ ಆದರ್ಶಗಳಾಗುತ್ತವೆ. ಎಲ್ಲರಲ್ಲು ಅಧ್ಯಾತ್ಮದ ಜಾಗೃತಿ ಆಗಬೇಕು. ಇರವಿನ ಅರಿವು ಮೂಡಿದಾಗ ಮನುಷ್ಯನಾಗಿ ಬದುಕಲು ಸಾಧ್ಯವಿದೆ. ಅಧ್ಯಾತ್ಮಿಕ ಚಿಂತನೆಯಿಂದ ಅಂತರಂಗ ಬೆಳಗುತ್ತದೆ. ಅಂತರಂಗ ಶುದ್ಧವಾಗಿದ್ದರೆ ಭಗವದನುಗ್ರಹ ನಿಶ್ಚಿತ ಎಂದರು.

ಸಾಧ್ವೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ ಸೇವಾ ಬಳಗ ಹಾಗೂ ಮಹಿಳಾ ವಿಕಾಸ ಕೇಂದ್ರ ಎರಡು ಕಣ್ಣುಗಳಿದ್ದಂತೆ. ಕಳೆದ 15 ವರ್ಷಗಳಿಂದ ದಾವಣಗೆರೆಯ ಈ ಸಂಘಟನೆಯು ಯಶಸ್ವಿ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀಗಳವರ ಅನುಗ್ರಹ ಮತ್ತು ನಿಮ್ಮೆಲ್ಲರ ದೃಢ ಮನಸ್ಸಿನ ಭಕ್ತಿಯ ಸೇವೆ ಅಭಿನಂದನೀಯ. ಅಧ್ಯಾತ್ಮಿಕ ಗುರುವಿನ ಪೂಜೆ ನಮಗೆ ಲೌಕಿಕ ಸಂತೋಷವನ್ನು ನೀಡುತ್ತದೆ. ಒಡಿಯೂರು ಶ್ರೀ ಸಂಸ್ಥಾನಕ್ಕೆ ದಾವಣಗೆರೆಯವರು ಬಂದಾಗ ಅವರು ದೇಗುಲದಲ್ಲಿ ಶ್ರದ್ಧಾಭಕ್ತಿ ಮೂಡಿಸುವ ವರ್ಣರಂಜಿತ ರಂಗೋಲಿ ಆಕರ್ಷಣೀಯವಾಗಿರುತ್ತದೆ ಎಂದರು.

ಸಭಾಕಾರ್ಯಕ್ರಮದ ಮೊದಲಿಗೆ ನಳಿನಿ ಅಚ್ಚುತ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ಜರಗಿತು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ  ಮಲ್ಲಿಕಾರ್ಜುನ ಎಂ.ವಿ. ದಂಪತಿಗಳು ಶ್ರೀ ಗುರುಪಾದುಕಾರಾಧನೆ-ಗುರುಪಾದಪೂಜೆ ನೆರವೇರಿಸಿದರು.

ಮಾದೇವಿ ಹಾಗೂ ಮಂಜುಳಾ ಪ್ರಾರ್ಥಿಸಿದರು. ಬಳಗದ ಅಧ್ಯಕ್ಷ ನ್ಯಾಯವಾದಿ ಟಿ. ಹನುಮಂತಪ್ಪ ಕಂಚಿಕೆರೆ ಸ್ವಾಗತಿಸಿದರು. ಕಾರ್ಯದರ್ಶಿ ಪಂಡರಿನಾಥ್ ಹಾಗೂ ಪದಾಧಿಕಾರಿಗಳು, ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕಾಧ್ಯಕ್ಷೆ  ಸುಮಾ ರಾಜಶೇಖರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಾವಣಗೆರೆ ಘಟಕದ ಕಛೇರಿ ಉದ್ಘಾಟನೆ,  ಗುರುಮಂದಿರಕ್ಕೆ ಶಿಲಾನ್ಯಾಸ:

ಈ ಸಂದರ್ಭ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ದಾವಣಗೆರೆ ಘಟಕಕ್ಕೆ ಸರಕಾರ ಒದಗಿಸಿದ ನಿವೇಶನದಲ್ಲಿ ಬಳಗವು ನಿರ್ಮಿಸಿದ ಕಛೇರಿಯನ್ನು ಒಡಿಯೂರು ಶ್ರೀಗಳು ಉದ್ಘಾಟಿಸಿದರು. 

ಕಛೇರಿಯಲ್ಲಿ  ಮಂಜುಳಾ ಹರೀಶ್ ದಂಪತಿಗಳು ಶ್ರೀ ಗುರುಪಾದುಕಾರಾಧನೆಗೈದರು. ನೂತನ ಕಛೇರಿಯ ಬಳಿ ನಿರ್ಮಿಸಲುದ್ದೇಶಿಸಿರುವ ಗುರುಮಂದಿರಕ್ಕೆ ಒಡಿಯೂರು ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದರು.

LEAVE A REPLY

Please enter your comment!
Please enter your name here