![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪಾಣಾಜೆ: ಕೃಷಿಕರ ಕೃಷಿ ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗುತ್ತಿರುವ ತೊಂದರೆಗಳು ಸರ್ವೇ ಸಾಮಾನ್ಯವಾಗಿ ಪರಿಣಮಿಸಿದೆ. ಸಂಬಂಧಿಸಿದ ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಕರು ಸಂಪೂರ್ಣವಾಗಿ ತಮ್ಮ ಕೃಷಿ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಬಹುದು.
ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ ಆರ್ಲಪದವು ಪಿದಾರ ನಿವಾಸಿ ಶಿವಪ್ಪ ನಾಯ್ಕ್ ರವರ ಅಡಿಕೆ ತೋಟದಲ್ಲಿ ಕಾಡು ಹಂದಿಯ ಉಪಟಳದಿಂದಾಗಿ ಉಂಟಾದ ಅಡಿಕೆ ಗಿಡಗಳ ನಾಶದ ದೃಶ್ಯ ಇದಕ್ಕೆ ಸಾಕ್ಷಿ ಎಂಬಂತಿದೆ.
ಇನ್ನೇನೂ ಫಲ ಕೊಡಲು ಸಿದ್ದವಾಗಿದೆ ಎಂಬ ಸಮಯದಲ್ಲಿಯೇ ದಷ್ಟಪುಷ್ಟವಾದ ಅಡಿಕೆ ಗಿಡಗಳನ್ನೇ ಕಾಡುಹಂದಿಗಳು ತಮ್ಮ ಆಟಕ್ಕೆ ಬಳಸಿಕೊಂಡಿವೆ. ಕೆಲವೊಂದನ್ನು ಬುಡದಿಂದಲೇ ಕೆಲವೊಂದನ್ನು ಕಾಂಡ ತುಂಡರಿಸಿ ಅಡಿಕೆ ಗಿಡಗಳಲ್ಲಿ ಚೆಲ್ಲಾಟವಾಡಿವೆ. ಸುಮಾರು 12 ಅಡಿಕೆ ಗಿಡ, ಬಾಳೆ ಗಿಡಗಳು ಕಾಡು ಹಂದಿಗಳ ಉಪದ್ರವಕ್ಕೆ ನಾಶಗೊಂಡಿವೆ.
‘ಪ್ರತೀ ವರ್ಷ ಒಂದೆರಡು ಗಿಡಗಳು ಹೀಗೆ ನಾಶವಾಗುತ್ತಿತ್ತು. ಹೊಸ ಗಿಡಗಳನ್ನು ನೆಡುತ್ತಿದ್ದೆವು. ಆದರೆ ಈ ಬಾರಿ ಹತ್ತಾರು ಗಿಡಗಳನ್ನು ನಾಶಗೊಳಿಸಿವೆ. ನೋಡುವಾಗ ಹೃದಯ ಹಿಂಡುತ್ತದೆ’ ಎನ್ನುತ್ತಾರೆ ಸಂತ್ರಸ್ತ ಶಿವಪ್ಪ ನಾಯ್ಕರು.
![](https://puttur.suddinews.com/wp-content/uploads/2023/03/WhatsApp-Image-2023-03-10-at-9.50.13-AM-1.jpeg)
ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬಾರದ ಹಾಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕಾಡುಪ್ರಾಣಿಗಳಿಗೆ ಬೇಕಾದ ಅದರಲ್ಲೂ ವಿಶೇಷವಾಗಿ ಕಾಡುಹಂದಿ ಮತ್ತು ಮಂಗಗಳಿಗೆ ಕಾಡಿನಲ್ಲಿಯೇ ಆಹಾರ ಸಿಗುವಂತೆ ಮಾಡಿದಾಗ ಅವುಗಳು ನಾಡಿನತ್ತ ಬರುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ.