ಉಪ್ಪಿನಂಗಡಿ:37ನೇ ವರ್ಷದ ಹೊನಲು ಬೆಳಕಿನ ವಿಜಯ-ವಿಕ್ರಮ ಜೋಡುಕರೆ ಕಂಬಳ

0

ಕಂಬಳ ನಾಡಕ್ರೀಡೆಯಾಗಿ ಘೋಷಣೆಯಾಗಬೇಕು- ಡಾ|ಮಂಜುನಾಥ ಭಂಡಾರಿ

ಕಾಂತಾರದಿಂದಾಗಿ ಕಂಬಳ ಅಂತರ್ರಾಷ್ಟ್ರೀಯ ಮಟ್ಟಕ್ಕೆ- ವೇಣುಗೋಪಾಲ ಶೆಟ್ಟಿ

ಕಂಬಳಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ-ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ:ಕಂಬಳವೆನ್ನುವುದು ನಮ್ಮ ಜನಪದೀಯ ಕ್ರೀಡೆಯಾಗಿದ್ದು, ಇದನ್ನು ನಾಡ ಕ್ರೀಡೆಯಾಗಿ ಘೋಷಿಸಬೇಕೆಂದು ನಾನೀಗಾಗಲೇ ಸರಕಾರದ ಮುಂದೆ ಪ್ರಸ್ತಾಪಿಸಿzನೆ. ಸರಕಾರವು ಇದಕ್ಕಾಗಿ ಅಧ್ಯಯನ ಸಮಿತಿಯನ್ನು ರಚನೆ ಮಾಡಿದೆ ಎಂದು ವಿಧಾನ ಪರಿಷತ್ ಶಾಸಕ ಡಾ| ಮಂಜುನಾಥ ಭಂಡಾರಿ ತಿಳಿಸಿದರು.


ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುತ್ತಿರುವ ೩೭ನೇ ವರ್ಷದ ಹೊನಲು ಬೆಳಕಿನ ವಿಜಯ-ವಿಕ್ರಮ ಜೋಡುಕರೆ ಕಂಬಳದಲ್ಲಿ ಮಾ.೧೧ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.ಕಂಬಳವೆನ್ನುವುದು ಈ ನಾಡಿನ ಸಂಭ್ರಮವಾಗಬೇಕು.ಅದಕ್ಕಾಗಿ ಇದನ್ನು ಸರಕಾರ ನಾಡ ಕ್ರೀಡೆಯಾಗಿ ಘೋಷಣೆ ಮಾಡಬೇಕೆಂಬ ಪ್ರಸ್ತಾಪವನ್ನು ನಾನು ಸರಕಾರದ ಮುಂದಿಟ್ಟಿದ್ದೇನೆ. ಅದಕ್ಕಾಗಿ ಸರಕಾರವು ಅಧ್ಯಯನ ಸಮಿತಿಯನ್ನು ಮಾಡಿದ್ದು, ಈ ಬಾರಿಯಲ್ಲದಿದ್ದರೂ ಮುಂದಿನ ಬಾರಿಯಾದರೂ ಕಂಬಳವು ನಾಡ ಕ್ರೀಡೆಯಾಗಿ ಘೋಷಣೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ ಮಂಜುನಾಥ ಭಂಡಾರಿಯವರು, ಕಂಬಳಕ್ಕೆ ವರ್ಷಕ್ಕೆ ಎರಡು ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ.ಆದರೆ ಕಂಬಳ ಸಮಿತಿಯವರು ಬಳಿಕದ ಕಾರ್ಯಗಳಿಗೆ ಮುಂದೆ ಬರಲು ಹೆಚ್ಚಿನ ಆಸಕ್ತಿ ತೋರಿಸದಿರುವುದರಿಂದ ಅದಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.


ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ:

ಉದ್ಯಮಿ ವೇಣುಗೋಪಾಲ ಶೆಟ್ಟಿ ಮಾತನಾಡಿ, ರಾಜ್ಯಕ್ಕೆ ಸೀಮಿತವಾಗಿದ್ದ ಕಂಬಳವು ಕಾಂತಾರ ಸಿನಿಮಾದಿಂದಾಗಿ ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಳ್ಳುವಂತಾಗಿದೆ.ಕಂಬಳವೆನ್ನುವುದು ನಮ್ಮ ಜನಪದ ಕ್ರೀಡೆಯಾಗಿದ್ದು, ಇದನ್ನು ಉಳಿಸಿ- ಬೆಳೆಸಬೇಕು ಎಂದರು.


ಕಂಬಳಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ:

ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಆರೋಪಿಸಿ ಪೇಟಾದವರು ನಿರಂತರವಾಗಿ ಕಂಬಳಕ್ಕೆ ಉಪದ್ರ ಕೊಟ್ಟರೂ, ಕಂಬಳಕ್ಕೆ ಹಿನ್ನಡೆಯಾಗಿಲ್ಲ. ಎಲ್ಲರ ಸಹಕಾರದಿಂದ ಅದು ಇನ್ನಷ್ಟು ಬೆಳೆದಿದ್ದು, ರಾಜ ವೈಭವದಿಂದ ನಡೆಯುವಂತಾಗಿದೆ.ಕಂಬಳಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ಮಸೂದೆ ತಂದರೂ, ಪೇಟಾದವರು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.ಅದರ ತೀರ್ಪು ಕಾಯ್ದಿರಿಸಲಾಗಿದೆ. ತೀರ್ಪು ಬಂದರೂ ಕಂಬಳದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳು ಆಗಬಹುದೇ ಹೊರತು ಕಂಬಳ ಮಾತ್ರ ನಿಲ್ಲಲು ಸಾಧ್ಯವಿಲ್ಲ ಎಂಬ ವಿಶ್ವಾಸವಿದೆ. ಜಲ್ಲಿಕಟ್ಟ್‌ನಂತಹ ಕ್ರೀಡೆಯ ನಿಷೇಧಕ್ಕೆ ಪೇಟಾದವರು ಕಾನೂನು ಮೊರೆ ಹೋದಾಗ ಜಲ್ಲಿಕಟ್ಟ್ ಕ್ರೀಡೆಯ ಉಳಿವಿಗಾಗಿ ತಮಿಳುನಾಡಿನ ಸುಮಾರು ೭೦೦ರಷ್ಟು ಜನ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿ ಅಂತಹ ಹೋರಾಟದ ಕಿಚ್ಚು ಇಲ್ಲ. ಕಂಬಳದ ವಿರುದ್ಧ ಪೇಟಾದವರು ಸುಪ್ರೀಂಕೋರ್ಟ್‌ನ ಕದ ತಟ್ಟಿದಾಗ ಅಲ್ಲಿ ಕಂಬಳದ ಪರ ವಕೀಲರನ್ನು ನೇಮಿಸಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರ ಬಿಟ್ಟರೆ, ಕಂಬಳದ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿರುವುದು ಉಪ್ಪಿನಂಗಡಿ ಕಂಬಳ ಸಮಿತಿ ಮಾತ್ರ. ಇನ್ನು ಮುಂದೆಯೂ ಕಂಬಳಕ್ಕಾಗಿ ಯಾವುದೇ ತರಹದ ಕಾನೂನು ಹೋರಾಟಕ್ಕೂ ನಾನು ಸಿದ್ಧನಿದ್ದೇನೆ.ಕಂಬಳವೆನ್ನುವುದು ರೈತಾಪಿ ವರ್ಗದವರ ಹಕ್ಕಾಗಿದೆ. ಇದರ ಉಳಿವಿಗೆ ಪ್ರತಿಯೋರ್ವರು ಧ್ವನಿಯೆತ್ತಬೇಕು ಎಂದರು.


ಕಂಬಳದಲ್ಲಿ ರಾಜಕೀಯ, ಜಾತಿ -ಧರ್ಮದ ಭೇದವಿಲ್ಲ. ಎಲ್ಲರೂ ಇಲ್ಲಿ ಒಂದೇ ತಾಯಿಯ ಮಕ್ಕಳೆಂಬಂತೆ ಭಾಗವಹಿಸುತ್ತಾರೆ.ಬಡ ಜನರ ಸೇವೆ, ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಂಬಳದ ವಿಚಾರದಲ್ಲಿ ರಾಜಕೀಯ ಮಾಡುವಂತಹ ಮನೋಸ್ಥಿತಿ ನನ್ನದಲ್ಲ.ನಾನು ಇದು ಇಷ್ಟಪಟ್ಟು ಮಾಡುವ ಕಾರ್ಯಗಳು.ಇನ್ನು ಮುಂದೆಯೂ ಇದನ್ನು ಮುಂದುವರಿಸುತ್ತೇನೆ. ಇದನ್ನೆಲ್ಲಾ ಸಹಿಸದ ಕೆಲವರು ಟೀಕೆಗಳನ್ನು ಮಾಡಬಹುದು. ಆದರೆ ಅಂತವರಿಗೆ ಉತ್ತರ ಕೊಡುವ ಅಗತ್ಯನೂ ನನಗಿಲ್ಲ ಎಂದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಂಬಳ ಸಮಿತಿಗೆ ಪಿಲಿಕುಳದಲ್ಲಿ ಎರಡು ಎಕ್ರೆ ಜಾಗವನ್ನು ಮೀಸಲಿಡಬೇಕು. ಅಲ್ಲೊಂದು ಕಂಬಳ ಭವನದ ನಿರ್ಮಾಣವಾಗಬೇಕು ಎಂದರು.


ಸನ್ಮಾನ:

ಕಂಬಳ ಕೋಣಗಳ ಯಜಮಾನ ಅಮ್ಟೂರು ಗ್ರಾಮದ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್, ಉದ್ಯಮಿಗಳಾದ ವೇಣುಗೋಪಾಲ ಶೆಟ್ಟಿ, ನಟೇಶ್ ಪೂಜಾರಿ, ವಿದ್ಯಾಧರ ಜೈನ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಪ್ರಮುಖರಾದ ಎಂ.ಎಸ್. ಮುಹಮ್ಮದ್, ಜಗಜೀವನ್‌ದಾಸ್ ರೈ, ಮಾರ್ಷೆಲ್ ವೇಗಸ್, ಸತೀಶ್ ಕುಮಾರ್ ಕೆಡೆಂಜಿ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಜಯಂತ ನಡುಬೈಲು, ಗಂಗಾಧರ ರೈ, ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಡಾ.ನಿರಂಜನ್ ರೈ, ಸುದೇಶ್ ಶೆಟ್ಟಿ ಶಾಂತಿನಗರ, ಸುಬ್ರಹ್ಮಣ್ಯ ರೈ ಕೊಡಿಪ್ಪಾಡಿ, ಪ್ರೀತಮ್ ಶೆಟ್ಟಿ, ರಿತೇಶ್ ಶೆಟ್ಟಿ, ರಾಕೇಶ್ ಶೆಟ್ಟಿ ಕೆಮ್ಮಾರ, ದಾಸಪ್ಪ ಗೌಡ, ಶಿವರಾಮ್ ಪ್ರಸಾದ್, ಲೋಕೇಶ್ ಶೆಟ್ಟಿ ಕಬಕ, ನವೀನ್ ಶೆಣೈ, ವಿಶ್ವಾಸ್ ಶೆಣೈ, ರೋಶನ್ ರೈ ಬನ್ನೂರು, ಉಲ್ಲಾಸ್ ಕೋಟ್ಯಾನ್ ಪಲ್ಲತ್ತಾರು, ಅರುಣ್ ಕುಮಾರ್ ರೈ ಆನಾಜೆ, ರಮೇಶ್ ರೈ, ಸುದೇಶ್ ಶೆಟ್ಟಿ, ರಾಮಣ್ಣ ಪಿಲಿಂಜ, ಅಶೋಕ್ ಪೂಜಾರಿ, ಅಸ್ಮಾ ಉಮ್ಮರ್, ಮಾಧವ ಗೌಡ ಕಾಮಧೇನು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜತೀಂದ್ರ ಶೆಟ್ಟಿ ಅಲಿಮಾರ್, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪ್ರಕಾಶ್ ರೈ ಕೊಲ ಬಡಗನ್ನೂರು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಶಿವಪ್ರಸಾದ್ ರೈ ಮಠಂತಬೆಟ್ಟು, ಜಯಂತ ಪೊರೋಳಿ, ದಾಸಪ್ಪ ಗೌಡ, ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಸಮಿತಿಯ ನಿಹಾಲ್ ಪಿ. ಶೆಟ್ಟಿ, ಸತೀಶ್ ಶೆಟ್ಟಿ ಹೆನ್ನಾಳ, ಜಗದೀಶ್ ಪರಕಜೆ, ಜಯಾನಂದ ಗೌಡ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

೩೭ನೇ ವರ್ಷದ ವಿಜಯ ವಿಕ್ರಮ ಹೊನಲು ಬೆಳಕಿನ ಕಂಬಳ ಕೂಟದಲ್ಲಿ ಒಟ್ಟು ೧೩೪ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದಾಗಿ ಕಂಬಳ ಸಮಿತಿಯವರು ಮಾಹಿತಿ ನೀಡಿದ್ದಾರೆ.

ಕಂಬಳ ಆರಂಭದಿಂದಲೇ ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್ ಮತ್ತು ಫೇಸ್ ಬುಕ್ ಪೇಜ್‌ನಲ್ಲಿ ನೇರಪ್ರಸಾರ ನಡೆದಿದ್ದು ಮಾರ್ಚ್ ೧೨ರಂದು ಮುಂದುವರೆಯಲಿದೆ.

LEAVE A REPLY

Please enter your comment!
Please enter your name here