ಉಜ್ರುಪಾದೆ ವಿನಾಯಕನಗರದ ಕೊರಗಜ್ಜ, ಮಂತ್ರಗುಳಿಗ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಪುತ್ತೂರು: ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಬಲ್ನಾಡು ಗ್ರಾಮದ ಉಜ್ರುಪಾದೆ ವಿನಾಯಕ ನಗರ ಶ್ರೀ ಕೊರಗಜ್ಜ ಮತ್ತು ಶ್ರೀ ಮಂತ್ರಗುಳಿಗ ದೈವಗಳ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ಮಾ.23ರಂದು ನೆರವೇರಿತು.


ಬ್ರಹ್ಮಶ್ರೀ ವೇ.ಮೂ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾ.22 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದಶುದ್ಧಿ, ಸಪ್ತಶುದ್ಧಿ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಧ್ಯಾನ್ಯಾಧಿವಾಸ ರಾತ್ರಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಮಾ.23ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ಪ್ರತಿಷ್ಠಾ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ನಂತರ ಕಲ್ಲುರ್ಟಿ, ಮಂತ್ರಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ನೆರವೇರಿತು.


47 ದಿನಗಳಲ್ಲಿ ನಿರ್ಮಾಣಗೊಂಡ ಕ್ಷೇತ್ರ:
ಶ್ರೀ ಕೊರಗಜ್ಜ ಕ್ಷೇತ್ರವು ನಂಬಿ ಬಂದ ಭಕ್ತರನ್ನು ತನ್ನ ಕಾರಣಿಕತೆಯನ್ನು ತೋರಿಸಿದ ಹಲವು ಹಿನ್ನೆಲೆಯುಲ್ಲ ಕ್ಷೇತ್ರವಾಗಿದೆ. ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಿದ ಕೇವಲ 47 ದಿನಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡು ದೈಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಿರುವುದು ಈ ಕ್ಷೇತ್ರದ ಕಾರಣಿಕತೆಯನ್ನು ಇನ್ನಷ್ಟು ವೃದ್ಧಿಸಿದೆ. ಭೂಮಿ ಪೂಜೆಗೆ ದಿನಾಂಕ ನಿಗದಿಗೊಳಿಸುವಾಗಲೇ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೂ ದಿನಾಂಕ ನಿಗದಿಗೊಳಿಸಿ ಬ್ರಹ್ಮಕಲಶೋತ್ಸವ ನೆರವೇರಿದೆ.


ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ, ನಾಗೇಶ್ ಬಲ್ನಾಡು, ದೈವಸ್ಥಾನದ ಗೌರವಾಧ್ಯಕ್ಷ ಬಾಬು ಕುಲಾಲ್ ವಿನಾಯಕ ನಗರ, ಅನುವಂಶಿಕ ಮೊಕ್ತೇಸರ ಬಾಬು ನಲಿಕೆ, ಅಧ್ಯಕ್ಷ ನಾರಾಯಣ ಗೌಡ ಕುಕ್ಕುತ್ತಡಿ, ಕಾರ್ಯದರ್ಶಿ ಪೂರ್ಣಿಮಾ ಚೆನ್ನಪ್ಪ ಗೌಡ, ಉಪಾಧ್ಯಕ್ಷ ಉಮೇಶ್ ಪೂಜಾರಿ ಬಾಯಾರು, ಕೋಶಾಧಿಕಾರಿ ಕುಶಾಲಪ್ಪ ನಾಯ್ಕ ಪದವು, ಜತೆ ಕಾರ್ಯದರ್ಶಿ ಪ್ರೇಮ ದೇವಸ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here