ಸುಳ್ಯ: ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ

0

ಪುತ್ತೂರು : ಮೀನು ಕೃಷಿಕರಿಂದ ಉತ್ಪತ್ತಿಯಾಗುವ ಎಲ್ಲಾ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ರವಿವಾರ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋ ಉದ್ಯೋಗ – ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾಹನ ಲೋಕಾರ್ಪಣೆ ಮಾಡಿದರು.

ಮೀನುಗಾರಿಕೆ ಕ್ಷೇತ್ರ ಕಡಿಮೆ ಆದಾಯದಲ್ಲಿ ಹೆಚ್ಚು ಸಂಪಾದನೆ ಗಳಿಸಬಹುದಾದ ಕ್ಷೇತ್ರ. ಕೃತಕ ಹಾಗೂ ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಲಾಗುವುದು. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಕರ್ನಾಟಕಕ್ಕೆ ಪ್ರಾಯೋಗಿಕವಾಗಿ ಮತ್ಸ್ಯವಾಹಿನಿ ವಾಹನ ಒದಗಿಸಲಾಗಿದೆ. 300 ವಾಹನಗಳು ರಾಜ್ಯಕ್ಕೆ ದೊರೆತ್ತಿದ್ದು. ಎರಡನೇ ಹಂತದಲ್ಲಿ ಎಷ್ಟು ಬೇಡಿಕೆ ಇದೆಯೋ ಅಷ್ಟು ವಾಹನ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದರು.

ಮೀನುಮರಿ ಉತ್ಪಾದನೆಗೆ ಕ್ರಮ: ರಾಜ್ಯದಲ್ಲಿ 60 ಕೋಟಿ ಮೀನು ಮರಿ ಬೇಡಿಕೆ ಇದೆ. ಆದರೆ ನಮ್ಮಲ್ಲಿ 40 ಕೋಟಿ ಮೀನು ಮರಿ ಉತ್ಪಾದನೆ ಇದೆ. 20 ಕೋಟಿ ಕೊರತೆ ಇದೆ. ಬಾಗಲಕೋಟೆಯಲ್ಲಿ ಮೀನುಮರಿ ಉತ್ಪತ್ತಿ ಘಟಕ ಆರಂಭಿಸಲಾಗುವುದು ಹಾಗೂ ಕಡಬದ ಸವಣೂರು ಬಳಿಯೂ ಮೀನು ಮರಿ ಉತ್ಪತ್ತಿ ಘಟಕ ನಿರ್ಮಿಸಲಾಗುವುದು. ಆ ಮೂಲಕ ಮೀನು ಮರಿ ಉತ್ಪಾದನೆಗೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಅಧ್ಯಕ್ಷ ಎ.ವಿ.ತೀರ್ಥರಾಮ ಮಾತನಾಡಿ, ಎಲ್ಲರಿಗೂ ಸರಕಾರಿ ಕೆಲಸ ಸಿಗಲು ಅಸಾಧ್ಯ. ಆದರೆ ಸ್ವ ಉದ್ಯೋಗ ಮಾಡಲು ಸಾಧ್ಯವಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶವಿದೆ. ಅಂಗಾರ ಅವರು ಯಾವ ರೀತಿಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇಲಾಖೆಗೆ ಕಾಯಕಲ್ಪ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ., , ಮಂಗಳೂರು ಮೀನುಗಾರಿಕೆ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ.ಗಣೇಶ್, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸಚಿವರ ಕರ್ತವ್ಯಾಧಿಕಾರಿ ಮಲ್ಲಿಕಾರ್ಜುನ, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ, ಮೀನುಗಾರಿಕಾ ಮಹಾವಿದ್ಯಾಲಯದ ಡಾ.ಹೆಚ್.ಎನ್.ಅಂಜನಪ್ಪ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿ ಮೀನುಗಾರಿಕೆ ಇಲಖೆ ಅಪರ ನಿರ್ದೇಶಕ ದಿನೇಶ್ ಕುಮಾರ್ ಸ್ವಾಗತಿಸಿದರು. ಬೆಂಗಳೂರು ಮೀನುಗಾರಿಕೆ ಇಲಖೆ ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪ್ಪೆಸ್ವಾಮಿ ವಂದಿಸಿದರು. ಲತಾಶ್ರೀ ಸುಪ್ರಿತ್ ಮೊಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

ಏನಿದು ಯೋಜನೆ: ಪೈಲಟ್ ಯೋಜನೆಯ ಹಂತದಲ್ಲಿ ಪ್ರಾಯೋಗಿಕವಾಗಿ, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋದ್ಯೋಗ ದ್ಯೇಯದೊಂದಿಗೆ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಉದ್ದೇಶದಿಂದ 300 ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯ ಮೀನು ಶೇಖರಣೆ, ಪ್ರದರ್ಶನ ಹಾಗೂ ಶೀತಲೀಕರಣ ಸಾಧನಗಳನ್ನು ಅಳವಡಿಸಲಾಗಿದೆ. ಮತ್ಸ್ಯವಾಹಿನಿಗಳು 599 ಕೆಜಿಯಷ್ಟು ಪೇಲೋಡ್ ಸಾಮಾರ್ಥ್ಯ ಹೊಂದಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ 3 ಜನರ ಅಗತ್ಯವಿದೆ. ಈ ವಾಹನ ಶೈತೀಕರಿಸಿದ ವಿಭಾಗಗಳೊಂದಿಗೆ ಅಳವಡಿಸಲ್ಪಟ್ಟಿದೆ. ಈ ವಾಹನ ಬ್ಯಾಟರಿಯೊಂದಿಗೆ ಚಲಿಸುತ್ತಿದ್ದು ಪರಿಸರ ಸ್ನೇಹಿಯಾಗಿದೆ.

LEAVE A REPLY

Please enter your comment!
Please enter your name here