ಪುತ್ತೂರು ಸಿಟಿ ಆಸ್ಪತ್ರೆಯ 13ನೇ ವರ್ಷದ ವಾರ್ಷಿಕೋತ್ಸವ-ಆಸ್ಪತ್ರೆಯ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ – ಆಡಳಿತ ಮಂಡಳಿಯಿಂದ ಕೃತಜ್ಞತೆ

0

14 ವರ್ಷದ ಸೇವೆಯಲ್ಲಿ ನಿರಂತರ ಹೆಸರು ಪಡೆದಿರುವುದು ಸಂತೋಷ – ರಾಮ್‌ಮೋಹನ್ ರಾವ್
ಆರೋಗ್ಯ ಸೇವೆಯಲ್ಲಿ ಶೇ.100 ಗುರಿ ನಮ್ಮದು – ಡಾ. ಭಾಸ್ಕರ್ ಎಸ್
ನಗುಮೊಗದ ಸೇವೆ ಆಸ್ಪತ್ರೆಯ ಯಶಸ್ಸಿಗೆ ಕಾರಣ – ಡಾ . ಸತ್ಯಸುಂದರ ರಾವ್
ಡಾ.ಭಾಸ್ಕರ್ ಸಮರ್ಥವಾಗಿ ಆಸ್ಪತ್ರೆ ನಡೆಸಲು ಕಾರಣಕರ್ತರು- ಡಾ. ಗಣೇಶ್ ಪ್ರಸಾದ್ ಮುದ್ರಾಜೆ
ಸೇವೆಯಲ್ಲಿ ಪ್ಲಾನಿಂಗ್ ಮುಖ್ಯ – ಡಾ.ಗೋಪಿನಾಥ್ ಪೈ

ಪುತ್ತೂರು: ಎ.1ರಂದು 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರು ಸಿಟಿ ಆಸ್ಪತ್ರೆಯ 13ನೇ ವರ್ಷದ ವಾರ್ಷಿಕೋತ್ಸವ ಎ.2ರಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಸಿಗುವ ಸೇವೆಯ ಕುರಿತು ಸಾರ್ವಜನಿಕರಿಂದ ಬಂದ ಪ್ರಶಂಸೆಗಳಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಕೃತಜ್ಞತೆ ಸಮರ್ಪಿಸಿದರು. ಮುಂದೆಯು ಸಿಬ್ಬಂದಿಗಳಿಂದ ಇನ್ನಷ್ಟು ಉತ್ತಮ ಸೇವೆ ರೋಗಿಗಳಿಗೆ ಸಿಗುವಂತಾಗಲಿ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.


14 ವರ್ಷಗಳ ಸೇವೆಯಲ್ಲಿ ಹೆಸರು ಪಡೆದಿರುವುದು ಸಂತೋಷ:
ಹಿರಿಯ ವಕೀಲರಾದ ರಾಮ್‌ಮೋಹನ್ ರಾವ್ ಅವರು ಮಾತನಾಡಿ 14 ವರ್ಷಗಳ ಸೇವೆಯಲ್ಲಿ ನಿರಂತರ ಹೆಸರು ಪಡೆದಿರುವುದು ಸಂತೋಷದ ವಿಚಾರ. ಇವತ್ತು ಕೆಲವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬುದನ್ನು ಸರಕಾರದಿಂದ ಹೇಳಲಾಗುತ್ತಿದೆ. ಆದರೆ ನನ್ನ ಅಭಿಪ್ರಾಯದಲ್ಲಿ ಸರಕಾರಕ್ಕೆ ನಾವು ಉಚಿತ ಚಿಕಿತ್ಸೆ ಕೊಡಬೇಕಾದ ಅವಶ್ಯಕತೆ ಇದೆಯೇನೋ ಎಂಬ ಸಂಶಯವಿದೆ. ಯಾಕೆಂದರೆ ತೆರಿಗೆ ಹಣದಲ್ಲಿ ಏನೆಲ್ಲಾ ಕಾನೂನು ಮಾಡುತ್ತಾರೋ ಅದನ್ನು ಅನುಷ್ಠಾನ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಾಡದಿದ್ದರೆ ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆಲ್ಲಾ ಹೋರಾಟವೇ ದಾರಿ. ಆದರೆ ನೀವು ವೈದ್ಯರಾಗಿ ಹೋರಾಟ ಮಾಡುವುದೋ, ಇತ್ತ ರೋಗಿಗಳನ್ನು ನೋಡುವುದೋ ಎಂಬುದು ಭಿನ್ನಾಭಿಪ್ರಾಯವಾಗಿದೆ ಎಂದರು.


ಆರೋಗ್ಯ ಸೇವೆಯಲ್ಲಿ ಶೇ.100 ಗುರಿ ನಮ್ಮದು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಮಾತನಾಡಿ ಈಗಾಗಲೇ ನಮ್ಮ ಆಸ್ಪತ್ರೆಯ ಕುರಿತು ಹೊರಗಡೆ ಉತ್ತಮ ಹೆಸರಿದೆ . ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಅದೇ ರೀತಿ ಅಸ್ಪತ್ರೆಯ ಒಳಗಡೆ ನಮ್ಮ ಸೇವೆಯ ಗುರಿ ಶೇ.100 ಇರಬೇಕು. ಈ ನಿಟ್ಟಿನಲ್ಲಿ ನಾವು ನಮ್ಮ ಸೇವೆಯನ್ನು ಉತ್ತಮವಾಗಿ ರೋಗಿಗಳಿಗೆ ರೀಚ್ ಮಾಡಲು ನಾವೆಲ್ಲ ಒಟ್ಟಿಗೆ ಪ್ರಯತ್ನ ಮಾಡೋಣ ಎಂದರು. ಸಂಸ್ಥೆ ಪ್ರಾರಂಭ ಮಾಡುವಾಗ ಕೇವಲ ಒಂದು ಪ್ಲೋರ್ ಇದ್ದು, ಕೇವಲ 30 ಮಂದಿ ಸಿಬ್ಬಂದಿಗಳು ಕೆಲಸ ಮಾಡಿಕೊಂಡಿದ್ದರು. ಆಗದ ವ್ಯವಸ್ಥೆಗೂ ಈಗಿರುವ 100 ಬೆಡ್‌ನ ಆಸ್ಪತ್ರೆ ಫುಲ್‌ಪ್ಲೆಜ್‌ಡ್ ಆಗಿ 120ಕ್ಕೂ ಅಧಿಕ ಸಿಬ್ಬಂದಿಗಳಿರುವಾಗ ಆಸ್ಪತ್ರೆ ನಡೆಯುವ ವಿಚಾರ ನೋಡಿದಾಗ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಸಿಬ್ಬಂದಿಗಳು ಕೂಡಾ ಆಸ್ಪತ್ರೆಗೆ ಬಂದ ರೋಗಿಗಳ ಸಮಸ್ಯೆಗಳನ್ನು ಸರಿ ಮಾಡಲು ನಮ್ಮ ಪ್ರಯತ್ನ ಪ್ರಾಮಾಣಿಕವಾಗಿ ಮಾಡಬೇಕು. ಜಗತ್ತಿನಲ್ಲಿ ದೇವರು ಮನುಷ್ಯನನ್ನು ಸೃಷ್ಟಿ ಮಾಡುವಾಗ ಅವನ ಜೀವನಕ್ಕೆ ಉದ್ದೇಶ ಇಟ್ಟೇ ಇರಿಸುತ್ತಾನೆ. ಆ ಉದ್ದೇಶಕ್ಕೆ ಜೀವನ ಕರ್ತವ್ಯ ಒಂದು ಮುಖ್ಯ ಅಂಗ. ಈ ನಿಟ್ಟಿನಲ್ಲಿ ಸಿಬ್ಬಂದಿಗಳು ತಮ್ಮ ಕರ್ತವ್ಯ ಮಾಡುವ ಜೊತೆಗೆ ಇವತ್ತು ಮಾಡಿದ ಕೆಲಸ ನಾಳೆ ಇನ್ನು ಹೆಚ್ಚು ಚೆನ್ನಾಗಿ ಹೇಗೆ ಮಾಡಬಹುದು ಎಂಬುದನ್ನು ಚಿಂತಿಸಬೇಕೆಂದರು.


ನಗುಮೊಗದ ಸೇವೆ ಆಸ್ಪತ್ರೆಯ ಯಶಸ್ಸಿಗೆ ಕಾರಣ:
ಡಾ. ಸತ್ಯಸುಂದರ ರಾವ್ ಅವರು ಮಾತನಾಡಿ ನಮ್ಮ ಆಸ್ಪತ್ರೆಗೆ ಹೊರಗಿನ ಅಭಿಪ್ರಾಯ ಬಹಳ ಉತ್ತಮ ರೀತಿಯಲ್ಲಿದೆ. ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ ಬಹಳ ಎಲ್ಲರಿಗೂ ಇಷ್ಟವಾಗಿದೆ. ಇದು ಆಸ್ಪತ್ರೆಯ ಯಶಸ್ಸಿಗೆ ಕಾರಣ ಎಂದರು. ಆಸ್ಪತ್ರೆಯಲ್ಲಿ ಡಾಕ್ಟರ್‌ಗಳು ಬಂದು ಒಮ್ಮೆ ರೋಗಿಯನ್ನು ನೋಡಿ ಹೋಗುತ್ತಾರೆ ಆದರೆ ರೋಗಿಯ ಪೂರ್ಣ ಆರೈಕೆಯಲ್ಲಿ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಮುಂದೆಯೂ ಇರಲಿ ಎಂದರು.


ಡಾ.ಭಾಸ್ಕರ್ ಸಮರ್ಥವಾಗಿ ಆಸ್ಪತ್ರೆ ನಡೆಸಲು ಕಾರಣಕರ್ತರು:
ಆಸ್ಪತ್ರೆಯ ಶೇರ್ ಹೋಲ್ಡರ್‍ಸ್ ಆಗಿರುವ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರು ಮಾತನಾಡಿ ನಾವೆಲ್ಲ 35 ಮಂದಿ ಶೇರ್ ಹೋಲ್ಡರ್‍ಸ್ ಇದ್ದರೂ ಸಮರ್ಥವಾಗಿ ಆಸ್ಪತ್ರೆಯನ್ನು ನಡೆಸಬಹುದು ಎಂಬುದಕ್ಕೆ ಮತ್ತು ಒಂದು ಸಂಸ್ಥೆ ಇಷ್ಟೊಂದು ಯಶಸ್ಸಿನಿಂದ ಮುಂದುವರಿಯಬೇಕಾದರೆ 24 ಗಂಟೆ ಪುತ್ತೂರು ಸಿಟಿ ಆಸ್ಪತ್ರೆ ಏಂಬುದನ್ನೂ ಸದಾ ಯೋಚನೆ ಮಾಡುತ್ತಾ ಬಂದವರು ಡಾ. ಭಾಸ್ಕರ್ ಎಸ್ ಎಂದರು.


ಸೇವೆಯಲ್ಲಿ ಪ್ಲಾನಿಂಗ್ ಮುಖ್ಯ:
ಹಿರಿಯ ಸರ್ಜನ್ ಡಾ. ಗೋಪಿನಾಥ್ ಪೈ ಅವರು ಮಾತನಾಡಿ ನಮ್ಮದು ನಿತ್ಯ ಸೇವೆಯ ವಿಚಾರ. ಆದರೆ ಆ ಸೇವೆಯಲ್ಲಿ ಪ್ಲಾನಿಂಗ್ ಮುಖ್ಯ ಎಂದು ಸಿಬ್ಬಂದಿಗಳಿ ಕಿವಿ ಮಾತನ್ನು ಹೇಳಿದರು. ಡಾ.ವಿನಯಪ್ರಕಾಶ್, ಅಭಿಪ್ರಾಯ ವ್ಯಕ್ತಪಡಿಸಿದರು.


ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ:
ಆಸ್ಪತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಿಗೆ ಹಿರಿಯ ವೈದ್ಯೆ ಡಾ.ರಮಾದೇವಿ, ಹಿರಿಯ ವಕೀಲ ರಾಮ್‌ಮೋಹನ್ ರಾವ್ ಬಹುಮಾನ ವಿತರಣೆ ಮಾಡಿದರು. ಮಂಜುಳಾ ಭಾಸ್ಕರ್ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ವಿಘ್ನೇಶ್ ಪ್ರಾರ್ಥಿಸಿದರು. ಡಾ. ಅನಿಲ್ ಎಸ್ ಬೈಪಾಡಿತ್ತಾಯ ಸ್ವಾಗತಿಸಿ, ಡಾ. ಸೂರ್ಯನಾರಾಯಣ ಕೆ ವಂದಿಸಿದರು. ಡಾ. ಎಂ.ಎಸ್ ಶೆಣೈ, ಡಾ.ಎಸ್.ಎಮ್.ಪ್ರಸಾದ್, ಡಾ. ಎಸ್.ಎಸ್.ಜ್ಯೋಶಿ, ಡಾ. ರವೀಂದ್ರ, ಡಾ. ಎ.ಕೆ.ರೈ, ಡಾ. ವರುಣ್ ಭಾಸ್ಕರ್, ಡಾ. ಶೃತಿ ಅಲೆವೂರ್, ಡಾ.ಸ್ವಾತಿ ಆರ್ ಭಟ್, ಡಾ. ರಾಮ್‌ಕಿಶೋರ್, ಡಾ. ಪದ್ಮರಾಜ್, ಡಾ. ಮಧುರಾ ಭಟ್, ಡಾ.ಪ್ರತಿಭಾ ಭಟ್, ಡಾ. ಶ್ರೀಹರಿ, ಸ್ವಾಮಿ ಕಲಾಮಂದಿರದ ಮಾಧವ ಸ್ವಾಮಿ ಸಹಿತ ಹಲವಾರು ಮಂದಿ ವೈದ್ಯರು, ಆಸ್ಪತ್ರೆಯ ಹಿತೈಷಿಗಳು ಉಪಸ್ಥಿತರಿದ್ದರು. ಅಸ್ಪತ್ರೆಯ ವಿಷ್ಣುಕಿರಣ್ ಮತ್ತು ಶಿವಪ್ರಸಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here