ವಿವಾಹಿತೆಯೊಂದಿಗಿನ ಪ್ರೇಮ ವಿಚಾರ; ಮರ್ಯಾದೆಗೆ ಅಂಜಿ ವಿವಾಹಿತ ಆತ್ಮಹತ್ಯೆ

0

ಪುತ್ತೂರು:ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ಪ್ರೇಮ ಸಂಬಂಧದ ವಿಚಾರದಲ್ಲಿ ಮರ್ಯಾದೆಗೆ ಅಂಜಿ ವಿವಾಹಿತ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏ.3ರಂದು ನೆಟ್ಟಣಿಗೆಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ.ಕೊರಗರವರ ಪುತ್ರ ಶೀನಪ್ಪ(50ವ.) ಆತ್ಮಹತ್ಯೆ ಮಾಡಿಕೊಂಡವರು.

ಮೃತರ ಪತ್ನಿ ಜಾನಕಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀನಪ್ಪರವರು ಏ.2ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು, ಮಧ್ಯಾಹ್ನ ಮದ್ಯ ಸೇವನೆ ಮಾಡಿ ಬಂದು ನನಗೆ ಹಾಗೂ ಪುತ್ರಿ ಅಶ್ವಿನಿಯವರಿಗೆ ಬೈಯಲು ಆರಂಭಿಸಿದ್ದರು. ನಂತರ ಸಂಜೆ ಮೋಟಾರು ಸೈಕಲ್‌ನಲ್ಲಿ ಪೇಟೆಗೆ ಹೋಗಿ ಬಂದವರು ತನಗೆ ಏಕಾಏಕಿಯಾಗಿ ಕೈಯಿಂದ ತಲೆಗೆ, ಮುಖಕ್ಕೆ, ಬೆನ್ನಿಗೆ, ಕಾಲಿಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದಿರುತ್ತಾರೆ. ನಂತರ ನಮ್ಮ 3 ಜನ ಮಕ್ಕಳು ಓಡಿಕೊಂಡು ಬಂದು ಹೊಡೆಯುವುದನ್ನು ತಡೆದಿರುತ್ತಾರೆ. ಬಳಿಕ ಅವರು ಕೋಪಗೊಂಡು ಬೈಕ್ ಹತ್ತಿ ಪೇಟೆಗೆ ಹೋಗಿದ್ದರು. ಇದೇ ವೇಳೆಗೆ ನಾನು ಹಾಗೂ ಮಕ್ಕಳು ಪಕ್ಕದ ಮನೆಯ ಕರಿಯಪ್ಪ ಅವರ ಪತ್ನಿ ರತ್ನಾ ಅವರಲ್ಲಿಗೆ ಹೋಗಿ ‘ನನ್ನ ಗಂಡನಲ್ಲಿ ಯಾಕೆ ಮಾತನಾಡುತ್ತೀಯಾ’ ಎಂದು ಕೇಳಿದಾಗ ಆ ಮನೆಯವರು ಹಾಗೂ ತಮ್ಮ ಮಧ್ಯೆ ಮಾತಿಗೆ ಮಾತಾಗಿ ಬೊಬ್ಬೆ ಕೇಳಿ ನನ್ನ ಗಂಡ ಶೀನಪ್ಪರವರು ನನಗೆ ಹಾಗೂ ಮಕ್ಕಳಿಗೂ ಹೊಡೆಯಲು ಯತ್ನಿಸಿದಾಗ ರತ್ನಾರವರು ತಡೆದಿದ್ದರು.

ನಂತರ ಶೀನಪ್ಪರವರು ಮೋಟಾರು ಸೈಕಲ್‌ನಲ್ಲಿ ಹೋಗಿರುತ್ತಾರೆ. ರಾತ್ರಿ 08-30ರ ಸಮಯ ಮನೆಗೆ ಬಂದಾಗ ಅವರು ಮೊಬೈಲ್ ಹಾಗು ಪರ್ಸ್ ಮನೆಯ ಒಳಗೆ ಇಟ್ಟು, ಮೋಟಾರು ಸೈಕಲ್ ಮನೆಯ ಅಂಗಳದಲ್ಲಿ ನಿಲ್ಲಿಸಿ ಹೋಗಿದ್ದರು.ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಸಂಶಯಗೊಂಡು ನೆರೆಯ ಕೃಷ್ಣಪ್ಪರವರ ಮನೆಯ ಸುತ್ತಮುತ್ತ ಹುಡುಕಾಡಿದಾಗ ರಾತ್ರಿ ತೋಟದ ಪಕ್ಕದಲ್ಲಿರುವ ಮಾವಿನ ಮರದ ಕೊಂಬೆಗೆ ಬಿದಿರಿನ ಏಣಿಯ ಮೂಲಕ ಹತ್ತಿ ಪಾಲಿಸ್ಟರ್ ಸೀರೆಯಿಂದ ನೇಣುಬಿಗಿದು ನೇತಾಡುತ್ತಿರುವುದು ಕಂಡುಬಂದಿದೆ. ತನ್ನ ಗಂಡ ಹಾಗೂ ನೆರೆ ಮನೆಯ ರತ್ನಾರವರ ಪ್ರೇಮ ಸಂಬಂಧ ವಿಚಾರ ಪತ್ನಿ ಹಾಗೂ ನೆರೆಕರೆಯವರಿಗೆ ಗೊತ್ತಾಗಿ ಮರ್ಯಾದೆಗೆ ಅಂಜಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಶೀನಪ್ಪರವರ ಪತ್ನಿ ಜಾನಕಿಯವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here