ತಿಂಗಳಾಡಿ: ನಾಪತ್ತೆಯಾಗಿದ್ದ ಯುವಕ : ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆಗೆ ಶರಣು

0

ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆದಂಬಾಡಿ ಗ್ರಾಮದ ಗುತ್ತು ಎಂಬಲ್ಲಿ ಏ.7 ರಂದು ಬೆಳಕಿಗೆ ಬಂದಿದೆ. ಗುತ್ತು ರಾಮಣ್ಣ ಗೌಡರ ಪುತ್ರ ಯಶವಂತ ಗೌಡ (32 ವ) ಎಂಬವರೇ ಡೆತ್ ನೋಟು ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ಯಶವಂತ ಗೌಡರು ರವಿರಾಜ್ ಎಂಬವರ ಜೊತೆ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು ಕಳೆದ ಮೂರು ದಿನಗಳ ಹಿಂದೆ ತನ್ನ ಸ್ಕೂಟರ್ ಅನ್ನು ಮನೆಯಲ್ಲಿ ನಿಲ್ಲಿಸಿ ಹೋಗಿದ್ದ ಇವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ಹುಡುಕಾಟ ನಡೆಸಿದ್ದರಾದರೂ ಪೊಲೀಸ್ ದೂರು ನೀಡಿರಲಿಲ್ಲ.

ಏ.7ರಂದು ಮನೆಯ ಸಮೀಪದ ಗುಡ್ಡದಲ್ಲಿ ಅಕೇಶಿಯ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಯಶವಂತ ಗೌಡರ ಮೃತದೇಹ ಪತ್ತೆಯಾಗಿದೆ. ಇವರು ಮನೆಯಲ್ಲಿ ಡೆತ್ ನೋಟು ಬರೆದಿಟ್ಟಿದ್ದು ‘ನನ್ನ ಸಾವಿಗೆ ನಾನೇ ಕಾರಣ, ತುಂಬಾ ಬೇಸರವಾಗುತ್ತಿದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳು’ ಎಂದು, ತಮ್ಮ ಮಹೇಶ್‌ಗೆ ಹೇಳಿದ ರೀತಿಯಲ್ಲಿ ಡೆತ್ ನೋಟು ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಂದೆ ರಾಮಣ್ಣ ಗೌಡ, ತಾಯಿ ಕಮಲ ಹಾಗೂ ಸಹೋದರ ಮಹೇಶ್‌ರವರನ್ನು ಅಗಲಿದ್ದಾರೆ. ಸಹೋದರ ಮಹೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here