ಕೆದಿಲ ಶ್ಯಾಮ್‌ಪ್ರಸಾದ್ ಶಾಸ್ತ್ರೀ ಶೂಟೌಟ್ ಪ್ರಕರಣ; ರಾಘವೇಶ್ವರ ಶ್ರೀ, ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧದ ಪ್ರಕರಣ ರದ್ದು

0

ಬೆಂಗಳೂರು: 2014ರಲ್ಲಿ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರೀಯವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹಾಗೂ ಆರ್.ಎಸ್.ಎಸ್.ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದದ ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರೆನ್ನಲಾದ ಶ್ಯಾಮಪ್ರಸಾದ್ ಶಾಸ್ತ್ರೀ ಅವರು 2014ರ ಆಗಸ್ಟ್ 31ರಂದು ತನ್ನ ಮನೆಯ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮೃತರ ಪತ್ನಿ ಸಂಧ್ಯಾಲಕ್ಷ್ಮಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾಮಚಂದ್ರಾಪುರ ಮಠದ ಪರವಾಗಿರುವ ಕೆಲವರಿಂದ ನಿರಂತರ ಬೆದರಿಕೆ ಕರೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿ ತನ್ನ ಪತಿ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆಂದು ಸಂಧ್ಯಾಲಕ್ಷ್ಮೀ ಅವರು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿದ್ದ ಸರಕಾರ: ಶ್ಯಾಮಪ್ರಸಾದ್ ಶಾಸ್ತ್ರೀಯವರ ಆತ್ಮಹತ್ಯೆ ಪ್ರಕರಣ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಘವೇಶ್ವರ ಶ್ರೀಗಳ ವಿರುದ್ದ ಹಲವು ಪ್ರಕರಣಗಳು ಮುನ್ನಲೆಗೆ ಬಂದ ಸಂದರ್ಭದಲ್ಲೇ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ ಶ್ಯಾಮಪ್ರಸಾದ್ ಶಾಸ್ತ್ರೀ ಅವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಅಂದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಆಗಿನ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ರಾಘವೇಶ್ವರ ಶ್ರೀ ವಿರುದ್ದದ ಪ್ರಕರಣಗಳಲ್ಲಿ ದಿವಾಕರ ಶಾಸ್ತ್ರೀ ಹಾಗೂ ಪ್ರೇಮಲತಾ ಶಾಸ್ತ್ರೀ ದಂಪತಿ ವಿರುದ್ದ ಹೇಳಿಕೆ ನೀಡಲು ಬೋನಂತಾಯ ಶಿವಶಂಕರ ಭಟ್ ಹಾಗೂ ಡಾ.ಪ್ರಭಾಕರ ಭಟ್ ಅವರು ಶ್ಯಾಮಪ್ರಸಾದ್ ಶಾಸ್ತ್ರೀ ಮೇಲೆ ಒತ್ತಡ ಹೇರಿದ್ದು, ನಿರಾಕರಿಸಿದಲ್ಲಿ ತಾವೂ ಬಂಧನಕ್ಕೊಳಗಾಗಬೇಕಾದೀತು ಎಂದು ಬೆದರಿಸಿದ್ದರು. ಇದರಿಂದ ನೊಂದು ಶ್ಯಾಮ್‌ಪ್ರಸಾದ್ ಶಾಸ್ತ್ರೀ ಸಾವಿಗೆ ಶರಣಾಗಿದ್ದಾರೆ ಎಂದು ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಐಡಿ ಪೊಲೀಸರು, ಈ ಹೇಳಿಕೆಗಳನ್ನು ಆಧರಿಸಿ ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಬೋನಂತಾಯ ಶಿವಶಂಕರ ಭಟ್ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹೈಕೋರ್ಟ್‌ಗೆ ಮೇಲ್ಮನವಿ: ಈ ಗಂಭೀರ ಪ್ರಕರಣದಲ್ಲಿ ಆರ್‌ಎಸ್‌ಎಸ್ ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸಿಐಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದನ್ನು ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ರಾಘವೇಶ್ವರ ಶ್ರೀಗಳೂ, ತಮ್ಮ ವಿರುದ್ದ ಆಧಾರ ರಹಿತ ಆರೋಪ ಹೊರಿಸಲಾಗಿದೆ ಎಂದು ಹೈಕೋರ್ಟ್‌ನ ಗಮನಸೆಳೆದರು. ಈ ಅರ್ಜಿಗಳ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರ ಪರವಾಗಿ ವಾದ ಮಂಡಿಸಿದ ಪಿ.ಪಿ.ಹೆಗ್ಡೆ ಅವರು, ಈ ಪ್ರಕರಣದಲ್ಲಿ ಗಣ್ಯರ ವಿರುದ್ದ ದುರುದ್ದೇಶದಿಂದ ಪ್ರಚೋದನೆಯ ಸುಳ್ಳು ಆರೋಪ ಹೊರಿಸಲಾಗಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಸಿಐಡಿ ಪೊಲೀಸರು ದೋಷಾರೋಪ ಹೊರಿಸಿದ್ದಾರೆ ಎಂದು ನ್ಯಾಯಪೀಠದ ಗಮನಸೆಳೆದರು.ಅಲ್ಲದೆ, ತನಿಖಾಧಿಕಾರಿಗಳು ಆರೋಪದ ಸಂಬಂಧ ನಿರ್ದಿಷ್ಟ ಸಾಕ್ಷಿ ಒದಗಿಸಿಲ್ಲ ಎಂದೂ ಪಿ.ಪಿ.ಹೆಗ್ಡೆ ಅವರು ಬಲವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ಹೈಕೋರ್ಟ್ ಪೀಠ, ಕೆದಿಲ ಶ್ಯಾಮ್‌ಪ್ರಸಾದ್ ಶಾಸ್ತ್ರೀಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಘವೇಶ್ವರ ಶ್ರೀಗಳ ಹಾಗೂ ಡಾ.ಪ್ರಭಾಕರ ಭಟ್ ವಿರುದ್ದದ ದೋಷಾರೋಪವನ್ನೇ ರದ್ದುಪಡಿಸಿದೆ. ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರು ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here