ರೋಟರಿ ಈಸ್ಟ್‌ನಿಂದ ಮನೀಷಾ ಕಟ್ಟಡ ಮೇಲ್ದರ್ಜೆಗೆ-ಉದ್ಘಾಟನೆ

0

ಇಚ್ಚಾಶಕ್ತಿ, ಪ್ರಯತ್ನ, ಸಾಧನೆಗೆ ಕಳಸವಿಟ್ಟಂತಿದೆ ಕಟ್ಟಡದ ಕನಸು-ಪ್ರಕಾಶ್ ಕಾರಂತ್

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ರೋಟರಿ ಸಂಸ್ಥೆಯು ಸಮಾಜಮುಖಿಯಾಗಿ ಬೆಳೆಯುತ್ತಿದೆ ಮಾತ್ರವಲ್ಲ ಬೆಳಗುತ್ತಿದೆ ಕೂಡ. ಇದಕ್ಕೆ ಪೂರಕವೆಂಬಂತೆ ಇಚ್ಚಾಶಕ್ತಿ, ಪ್ರಯತ್ನ, ಸಾಧನೆಗೆ ಕಳಸವಿಟ್ಟಂತಿರುವ ಕಟ್ಟಡದ ಕನಸು ಇಂದು ನನಸಾಗಿದೆ ಎಂದು ರೋಟರಿ ೩೧೮೧ ಇದರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಹೇಳಿದರು.


ಎ.೨೦ ರಂದು ಸಂಜೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಮತ್ತು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪ್ರಾಜೆಕ್ಟ್ ಮನೀಷಾ ೨೦೨೩ ಅಂಗವಾಗಿ ಮನೀಷಾ ಕಟ್ಟಡದ ಮೇಲ್ದರ್ಜೆಯ ನವೀಕೃತ ರೊ|ಕೆ.ರತ್ನಾಕರ್ ಶೆಣೈ ವೇದಿಕೆ ಹಾಗೂ ಹವಾನಿಯಂತ್ರಿತ ಡಾ.ಪಿ ಗೌರಿ ಪೈ ಅಸೆಂಬ್ಲಿ ಚೇಂಬರ್‌ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮೇಲ್ದರ್ಜೆಗೇರಿದ ಮನೀಷಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಸದಸ್ಯರ ದೇಣಿಗೆಯ ತ್ಯಾಗದ ಅನುರೂಪವಾಗಿ ಇಂದು ಕಟ್ಟಡ ಮೇಲ್ದರ್ಜೆಗೇರಿದೆ ಮಾತ್ರವಲ್ಲ ಜನರ ಸ್ಪೃತಿಪಟಲದಲ್ಲಿ ಅಚ್ಚಳಿಯವಾಗಿ ನೆನಪಿನಲ್ಲಿಡುವ ಮೂಲಕ ಸ್ಮರಣೀಯವನ್ನಾಗಿಸಿದೆ. ರೋಟರಿ ಸಂಸ್ಥಾಪಕರಾದ ಪಾವ್ಲ್ ಹ್ಯಾರಿಸ್‌ರವರ ಜನ್ಮದಿನವನ್ನು ಏಳು ರೋಟರಿ ಕ್ಲಬ್‌ಗಳ ಕೂಡುವಿಕೆಯಿಂದ ಆಚರಿಸುತ್ತಿರುವುದು ರೋಟರಿಯ ಗೆಳೆತನ, ಬಾಂಧವ್ಯ, ಸ್ನೇಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.


ರೋಟರಿಯಲ್ಲಿ ತ್ಯಾಗದ ಫಲವಿದೆ-ವಿಕ್ರಂ ದತ್ತ:
ರೋಟರಿ ಜಿಲ್ಲಾ ಗವರ್ನರ್ ನಾಮಿನಿ(೨೦೨೪-೨೫) ವಿಕ್ರಂ ದತ್ತ ಮಾತನಾಡಿ, ಇಪ್ಪತ್ತು ವರ್ಷದ ಹಿಂದೆ ಡಾ.ಸೂರ್ಯಪ್ರಕಾಶ್‌ರವರ ಹೆಸರಿನಲ್ಲಿದ್ದ ಇಲ್ಲಿನ ಸಭಾಂಗಣಕ್ಕೆ ರೊ|ರತ್ನಾಕರ್ ಶೆಣೈ ವೇದಿಕೆ ಎಂದು ಮರು ನಾಮಕರಣ ಮಾಡಿರುವ ಹಿಂದೆ ಡಾ.ಸೂರ್ಯನಾರಾಯಣರವರ ತ್ಯಾಗದ ಫಲವಿದೆ. ರೋಟರಿ ಮುಂದುವರೆಯಬೇಕೆಂದರೆ ಅಲ್ಲಿ ಕುಟುಂಬ ಸದಸ್ಯರ ಪ್ರಾಮುಖ್ಯತೆ ಕೂಡ ಬೇಕಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಶೆಣೈ ಕುಟುಂಬ ಜೊತೆಗೆ ರೋಟರಿ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿ ಸ್ವಂತ ಕಟ್ಟಡ ಕೂಡ ಇರಬೇಕಾಗುತ್ತದೆ ಎಂದರು.


ಕಟ್ಟಡವು ಶಾಶ್ವತ ಪ್ರಾಜೆಕ್ಟ್ ಆಗಿ ಗುರುತಿಸಿಕೊಳ್ಳುತ್ತದೆ-ರಾಮಕೃಷ್ಣ ಕೆ:
ಜಿಲ್ಲಾ ಗವರ್ನರ್ ನಾಮಿನಿ ಡೆಸಿಗ್ನೇಟ್(೨೦೨೫-೨೬) ರಾಮಕೃಷ್ಣ ಕೆ. ಮಾತನಾಡಿ, ಯಾವುದೇ ಪ್ರಾಜೆಕ್ಟ್‌ಗಳು ಆರಂಭವಾಗುವುದು ಮನೆಯಲ್ಲಿ. ಜನರಲ್ಲಿ ಕೊಡುವ ಮನಸ್ಸಿದ್ದಾಗ ಸಮಾಜಮುಖಿ ಕಾರ್ಯಗಳು ನಿರಾಂತಕವಾಗಿ ನಡೆಯಬಲ್ಲುದಾಗಿದೆ. ಇಂದಿಲ್ಲಿ ನವೀಕೃತಗೊಂಡ ಕಟ್ಟಡವು ಖಂಡಿತಾ ಶಾಶ್ವತ ಪ್ರಾಜೆಕ್ಟ್ ಆಗಿ ಗುರುತಿಸಿಕೊಳ್ಳುತ್ತದೆ ಎಂದರು.


ರೋಟರಿ ಈಸ್ಟ್‌ಗೆ ರೂ.೨೫ ಸಾವಿರ ದೇಣಿಗೆ-ಸೀತಾರಾಮ್ ರೈ:
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ವಿದ್ಯೆ ಹಾಗೂ ಅನ್ನದಾನ ನೀಡಿದರೆ ಅದಕ್ಕಿಂತ ದೊಡ್ಡ ದಾನವಿಲ್ಲ ಎಂಬುದು ಸರಿ. ಆದರೆ ಬುದ್ಧಿಮಾಂದ್ಯ ವಿಶೇಷಚೇತನ ಮಕ್ಕಳ ಬಗ್ಗೆ ಕಾಳಜಿ ಹಾಗೂ ಪ್ರೋತ್ಸಾಹಿಸುವುದು ಕೂಡ ದೊಡ್ಡ ಮಹಾತ್ಕಾರ್ಯವಾಗಿದೆ. ರೋಟರಿ ಈಸ್ಟ್ ಇದನ್ನು ಹಲವು ವರ್ಷಗಳಿಂದ ನೆರವೇರಿಸುತ್ತಾ ಬಂದಿದೆ. ಆದ್ದರಿಂದ ತಾನೂ ಕೂಡ ಈ ಕ್ಲಬ್‌ಗೆ ರೂ.೨೫ ಸಾವಿರ ದೇಣಿಗೆ ನೀಡಲು ಬಯಸುತ್ತಿದ್ದೇನೆ ಎಂದರು.


ರೋಟರಿ ಸಂಸ್ಥೆಗಳಿಂದ ಜನಪರ ಕಾರ್ಯಗಳು-ಎ.ಜೆ ರೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈ ಮಾತನಾಡಿ, ಇಮ್ಯಾಜಿನ್ ರೋಟರಿ ಎಂಬ ರೋಟರಿಯ ಧ್ಯೇಯದಂತೆ ಕ್ಲಬ್ ಅಧ್ಯಕ್ಷ ಶರತ್ ರೈಯವರು ಮನೀಷ ಕಟ್ಟಡವನ್ನು ನವೀಕರಿಸುವ ಕನಸು ಕಂಡವರು. ಇದಕ್ಕೆ ಪುಷ್ಠಿ ಎಂಬಂತೆ ರೂವಾರಿಯಾಗಿ ಕಾಣಿಸಿಕೊಂಡವರು ಕೆ.ಆರ್ ಶೆಣೈ ಹಾಗೂ ಕೆ.ವಿಶ್ವಾಸ್ ಶೆಣೈ. ಪುತ್ತೂರಿನ ಪ್ರತಿ ರೋಟರಿ ಕ್ಲಬ್‌ಗಳು ನಿರಂತರವಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.


ಒಗ್ಗೂಡುವಿಕೆ ಇದ್ದಾಗ ಸಾಧಿಸಬಹುದು ಎಂಬುದಕ್ಕೆ ಈ ಕಟ್ಟಡ ಸಾಕ್ಷಿ-ಪುರಂದರ ರೈ:
ರೋಟರಿ ವಲಯ ಸೇನಾನಿ ಪುರಂದರ ರೈ ಮಾತನಾಡಿ, ಈ ಕಟ್ಟಡದ ಪಕ್ಕದಲ್ಲಿರುವ ನಿವೇಶನ ವನವಾಗಿದೆ. ನಮ್ಮ ಮನೀಷಾ ಕಟ್ಟಡ ಸುಂದರವಾದ ಭವನವಾಗಿದೆ. ರೋಟರಿ ಸದಸ್ಯರ ತ್ಯಾಗದೊಂದಿಗೆ ಎಲ್ಲರ ಒಗ್ಗೂಡುವಿಕೆ ಇದ್ದಾಗ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಈ ಸುಂದರ ಕಟ್ಟಡ ಸಾಕ್ಷಿಯಾಗಿದೆ ಎಂದರು.


ಕ್ಲಬ್ ಕನಸುಗಾರ ವಿಶ್ವಾಸ್ ಶೆಣೈಯವರು ಡಿಜಿಯಾಗಿ ಆರಿಸಿ ಬರಲಿ-ಶರತ್ ರೈ:
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಮಾತನಾಡಿ, ಮನೀಷಾ ಕಟ್ಟಡವನ್ನು ಮೇಲ್ದರ್ಜೆಗೇರಿಸಬೇಕು ಅನ್ನುವುದು ನನ್ನಲ್ಲಿ ಪ್ರಾರಂಭದಿಂದ ಕಂಡ ಕನಸಾಗಿತ್ತು. ಇದಕ್ಕೆ ಪೂರಕವೆಂಬಂತೆ ಕ್ಲಬ್ ಸದಸ್ಯರ ಬೆಂಬಲ ಹಾಗೂ ಆಶೀರ್ವಾದದಿಂದ ಇಂದು ನಾನು ಕಂಡ ಕನಸು ನನಸಾಗಿದೆ. ಕ್ಲಬ್‌ನ ಕನಸುಗಾರ ಆಗಿರುವ ಎಕೆಎಸ್ ವಿಶ್ವಾಸ್ ಶೆಣೈಯವರು ಮುಂದಿನ ದಿನಗಳಲ್ಲಿ ಜಿಲ್ಲಾ ಗವರ್ನರ್ ಆಗಿ ಆರಿಸಿ ಬರಲಿ ಎಂಬುದು ನಮ್ಮ ಹಾರೈಕೆಯಾಗಿದೆ ಎಂದರು.


ವಿಶೇಷ ಸನ್ಮಾನ:
ಮನೀಷಾ ಕಟ್ಟಡಕ್ಕೆ ಜಾಗವನ್ನು ಒದಗಿಸಿಕೊಟ್ಟವರು, ರೋಟರಿ ಈಸ್ಟ್ ಸ್ಥಾಪಕಾಧ್ಯಕ್ಷರಾದ ರೋಟರಿ ಭೀಷ್ಮ ಕೆ.ಆರ್ ಶೆಣೈ, ಇಪ್ಪತ್ತು ವರ್ಷದ ಹಿಂದೆ ಡಾ.ಸೂರ್ಯ ಸಭಾಂಗಣವನ್ನು ನಿರ್ಮಿಸಲು ಕಾರಣಕರ್ತರಾದ ಡಾ.ಸೂರ್ಯನಾರಾಯಣ, ಕಟ್ಟಡದಲ್ಲಿ ಕೆಲವು ವರ್ಷದ ಹಿಂದೆ ಅಕ್ಷಯ ಫೆಲೋಶಿಪ್ ಸಭಾಂಗಣವನ್ನು ನಿರ್ಮಿಸಿದ ಜಯಂತ್ ನಡುಬೈಲು ಮತ್ತು ನವೀಕೃತ ಸಭಾಂಗಣದ ವಿನ್ಯಾಸವನ್ನು ಮಾಡಿರುವ ಸುದರ್ಶನ್ ಹಾರಕೆರೆರವರುಗಳನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸಲಾಯಿತು.


ದೇಣಿಗೆ ನೀಡಿದವರಿಗೆ ಸನ್ಮಾನ:
ನವೀಕೃತ ಸಭಾಂಗಣಕ್ಕೆ ರೂ.೧.೨೬ ಲಕ್ಷ ದೇಣಿಗೆಯನ್ನು ನೀಡಿದ ಕೃಷ್ಣನಾರಾಯಣ ಮುಳಿಯ ಹಾಗೂ ಅಶ್ವಿನಿಕೃಷ್ಣ ಮುಳಿಯ ದಂಪತಿ ಅಲ್ಲದೆ ರೂ.೫೦ ಸಾವಿರ ದೇಣಿಗೆಯನ್ನು ನೀಡಿದಂತಹ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಪ್ರಮೀಳಾ ರಾವ್, ಡಾ|ಹರ್ಷಕುಮಾರ್ ರೈ, ರೋಟರಿ ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಗೌರವಾರ್ಪಣೆ:
ಮನೀಷಾ ಸಭಾಂಗಣದ ನವೀಕರಣಕ್ಕೆ ಕೈಜೋಡಿಸಿದ ಜಿಲ್ಲಾ ಇವೆಂಟ್ ಸೆಕ್ರೆಟರಿ ಎಕೆಎಸ್ ಕೆ.ವಿಶ್ವಾಸ್ ಶೆಣೈಯವರನ್ನು ರೋಟರಿ ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈಯವರ ಅಧ್ಯಕ್ಷರ ನೆಲೆಯಲ್ಲಿ ಸನ್ಮಾನಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.


ದೇಣಿಗೆ ನೀಡಿದವರಿಗೆ ಗೌರವ:
ಮನೀಷಾ ಸಭಾಂಗಣಕ್ಕೆ ರೂ.೨೬ ಸಾವಿರ ದೇಣಿಗೆ ನೀಡಿದ ಮುರಳೀ ಶ್ಯಾಂ, ತಲಾ ರೂ.೨೫ ಸಾವಿರ ದೇಣಿಗೆ ನೀಡಿದ ಡಾ.ಶ್ಯಾಂಪ್ರಸಾದ್, ಕೃಷ್ಣ ಭಟ್, ಕರ್ನಲ್ ಜಿ.ಡಿ ಭಟ್, ಅಬ್ಬಾಸ್ ಮುರ, ಪಿ.ಡಿ ಗಂಗಾಧರ್ ರೈ, ಲ್ಯಾನ್ಸಿ, ಸೂರ್ಯನಾಥ ಆಳ್ವ, ನವೀನ್ ಶೆಟ್ಟಿ, ಯತೀಶ್ ರೈ, ಸಚ್ಚಿದಾನಂದರವರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡಿ.ಆರ್.ಎಫ್.ಸಿ ಡಾ.ಸೂರ್ಯನಾರಾಯಣ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ.ರವಿಪ್ರಕಾಶ್ ಪ್ರಾರ್ಥಿಸಿದರು. ರೋಟರಿ ಜಿಲ್ಲಾ ಇವೆಂಟ್ ಸೆಕ್ರೆಟರಿ ಎಕೆಎಸ್ ಕೆ.ವಿಶ್ವಾಸ್ ಶೆಣೈಯವರು ರೋಟರಿ ಮನೀಷಾ ಕಟ್ಟಡದ ಆರಂಭಿಕ ಹಂತದಿಂದ ಪ್ರಸ್ತುತ ಮೇಲ್ದರ್ಜೆಯ ಹಂತದವರೆಗಿನ ಕೊಡುಗೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ಸದಸ್ಯರಾದ ಸೂರ್ಯನಾಥ ಆಳ್ವ, ಕರ್ನಲ್ ಜಿ.ಡಿ ಭಟ್, ಪ್ರಮೀಳ ರಾವ್, ರಾಧಾಕೃಷ್ಣ ರೈ ಬೂಡಿಯಾರು, ಕೃಷ್ಣ ಭಟ್, ಮುರಳೀ ಶ್ಯಾಂ, ಕೃಷ್ಣನಾರಾಯಣ ಮುಳಿಯ, ರವಿಕುಮಾರ್ ರೈ, ರೋಟರಿ ಈಸ್ಟ್ ಕೋಶಾಧಿಕಾರಿ ವಸಂತ ಜಾಲಾಡಿ, ಕಾರ್ಯದರ್ಶಿ ಶಶಿಕಿರಣ್ ರೈಯವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಸ್ವಾಗತಿಸಿ, ಕಾರ್ಯದರ್ಶಿ ಶಶಿಕಿರಣ್ ರೈ ನೂಜಿ ವಂದಿಸಿದರು. ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

ರೋಟರಿಯಲ್ಲಿ ರೆಬೆಲ್ ಆಭ್ಯರ್ಥಿಯಿಲ್ಲ, ನಮ್ಮದು ರೋಟರಿ ಪಕ್ಷ…
ರಾಜಕೀಯ ಪಕ್ಷದಲ್ಲಿ ಆಭ್ಯರ್ಥಿಗಳು ಸ್ಥಾನಮಾನ ಸಿಗದಿದ್ದಲ್ಲಿ ಯಾವ ಪಕ್ಷಕ್ಕೂ ಸೇರ್ಪಡೆಗೊಳ್ಳುವುದು ಇಂದಿನ ಜಾಯಮಾನ. ಆದರೆ ರೋಟರಿಯಲ್ಲಿ ಅಂತಹ ರೆಬೆಲ್ ಆಭ್ಯರ್ಥಿ ಇಲ್ಲ. ಇಲ್ಲಿ ನಮ್ಮದು ಒಂದೇ ಪಕ್ಷ. ಅದು ರೋಟರಿ ಪಕ್ಷ. ಸಮಾಜದಲ್ಲಿನ ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೋಸ್ಕರ ಕಾರ್ಯಕ್ರಮ ಮಾಡೋದು ರೋಟರಿ ಉದ್ಧೇಶವಾಗಿದೆ. ರೋಟರಿ ಪಕ್ಷ ಜನರ ಒಳಿತಿಗಾಗಿ ಇರುವುದು. ನಮ್ಮಲ್ಲಿ ಮತ್ತೊಬ್ಬರಿಗೆ ಒಳ್ಳೇದು ಮಾಡುವಲ್ಲಿ ಸ್ಪರ್ಧೆ ಇರಬೇಕು. ಮುಂದಿನ ದಿನಗಳಲ್ಲಿ ಕೆ.ವಿಶ್ವಾಸ್ ಶೆಣೈಯವರನ್ನು ಜಿಲ್ಲಾ ಗವರ್ನರ್ ಮಾಡಬೇಕು ಎನ್ನುವುದು ನಮ್ಮ ಬಯಕೆಯಾಗಿದೆ.
-ಡಾ.ಭಾಸ್ಕರ್ ಎಸ್, ಪಿಡಿಜಿ

ಹೈಲೈಟ್ಸ್..
-ರೋಟರಿ ಡಿಜಿ ಪ್ರಕಾಶ್ ಕಾರಂತ್‌ರವರಿಂದ ಮನೀಷಾ ಕಟ್ಟಡ ಹಾಗೂ ಡಿಜಿಟಲ್
ತಂತ್ರಜ್ಞಾನದಿಂದ ಬಟನ್ ಒತ್ತುವ ಮೂಲಕ ರೊ|ಕೆ.ರತ್ನಾಕರ್ ಶೆಣೈ ವೇದಿಕೆಯ ಉದ್ಘಾಟನೆ
-ಡಾ.ಪಿ.ಗೌರಿ ಪೈಯವರ ರೂ.೫ ಲಕ್ಷ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಹವಾನಿಯಂತ್ರಿತ ಡಾ.ಪಿ.ಗೌರಿ ಪೈ
ಅಸೆಂಬ್ಲಿ ಚೇಂಬರ್‌ನ್ನು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರಿಂದ ಉದ್ಘಾಟನೆ
-ಪಿಡಿಜಿ ಡಾ.ಭಾಸ್ಕರ್ ಎಸ್.ರವರಿಂದ ಕಟ್ಟಡದ ಎಂಟ್ರಿ ಲಾಬಿ ಉದ್ಘಾಟನೆ ಹಾಗೂ
ಅಂತರ್ರಾಷ್ಟ್ರೀಯ ರೋಟರಿ ಸಂಸ್ಥಾಪಕರ ಹುಟ್ಟುಹಬ್ಬದ ಪ್ರತೀಕವಾಗಿ ಸಿಹಿ ಕೇಕ್ ಕತ್ತರಿಸುವಿಕೆ
-ನಿಯೋಜಿತ ಡಿಜಿ ವಿಕ್ರಂ ದತ್ತರವರಿಂದ ಕುಡಿಯುವ ನೀರಿನ ಹಾಗೂ ವಾಶ್ ರೂಂಮಿನ ಉದ್ಘಾಟನೆ
-ಡಿಜಿ ನಾಮಿನಿ ಡೆಸಿಗ್ನೇಟ್ ರಾಮಕೃಷ್ಣ ಕೆ.ರವರಿಂದ ನವೀಕೃತ ಡಾ.ಸೂರ್ಯ ಸಭಾಂಗಣ ಉದ್ಘಾಟನೆ
-ಎ.೨೦ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥಾಪಕ ಪಾವ್ಲ್ ಹ್ಯಾರಿಸ್‌ರವರ ಜನ್ಮದಿನದಂಗವಾಗಿ ಸಭಾಂಗಣದಲ್ಲಿ
ಜೋಡಿಸಿಡಲಾಗಿದ್ದ ಭಾವಚಿತ್ರವನ್ನು ಪುತ್ತೂರು ರೋಟರಿ ಭೀಷ್ಮ ಕೆ.ಆರ್ ಶೆಣೈಯವರಿಂದ ಅನಾವರಣ

LEAVE A REPLY

Please enter your comment!
Please enter your name here