ಪಾಲ್ತಾಡಿ : ತೋಟದ ಕೆರೆಯ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತ್ಯು

0

ಸವಣೂರು : ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ.

ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34 ವ.) ಎಂದು ಗುರುತಿಸಲಾಗಿದೆ.

ಗೋಪಾಲಕೃಷ್ಣ ಅವರು ಪಾಲ್ತಾಡಿ ಗ್ರಾಮದ ಕಾಪುತಮೂಲೆ ಎಂಬಲ್ಲಿರುವ ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಒಬ್ಬನೇ ತೆರಳಿದವನು ವಾಪಾಸು ಬಾರದೇ ಇದ್ದುದರಿಂದ ಮನೆಯವರು ಕೆರೆಯ ಬಳಿ ಹೋಗಿ ನೋಡಿದಾಗ ಗೋಪಾಲಕೃಷ್ಣನ ಚಪ್ಪಲಿ ಕೆರೆಯ ನೀರಿನಲ್ಲಿ ತೇಲುತ್ತಿದ್ದುರಿಂದ ಸಂಶಯಗೊಂಡು ಮರದ ದೋಂಟಿಯೊಂದನ್ನು ಕೆರೆಯ ನೀರಿಗೆ ಹಾಕಿ ನೋಡಿದಾಗ ಗೋಪಾಲಕೃಷ್ಣನ ಅಂಗಿ ದೋಂಟಿಯ ಕೊಕ್ಕೆ ಸಿಕ್ಕಿಕೊಂಡಿದ್ದು, ದೂರುದಾರ ಮೃತರ ತಂದೆ ಮೋನಪ್ಪ ನಾಯ್ಕ ಅವರು ಕೂಡಲೇ ಅಣ್ಣ ಶೇಷಪ್ಪ ನಾಯ್ಕ ಮತ್ತು ಅವರ ಮಗ ಸುಬ್ರಾಯ ನಾಯ್ಕರವರನ್ನು ಕರೆದು ಗೋಪಾಲಕೃಷ್ಣನ ದೇಹವನ್ನು ಮೇಲಕ್ಕೆತ್ತಿ ಆಟೋ ರಿಕ್ಷಾವೊಂದರಲ್ಲಿ ಕೆಯ್ಯೂರುವರೆಗೆ ತೆಗೆದುಕೊಂಡು ಬಂದು ಅಲ್ಲಿಂದ ಅಂಬ್ಯುಲೆನ್ಸ್ ವಾಹನವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಗೋಪಾಲಕೃಷ್ಣನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಹೋದ ಪಿರ್ಯಾದಿದಾರರ ಗೋಪಾಲಕೃಷ್ಣ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತ ಗೋಪಾಲಕೃಷ್ಣ ಅವರು ಪಡುಬಿದ್ರೆಯ ಅದಾನಿ ಪವರ್ ಲಿಮಿಟೆಡ್ ಯಪಿಎಸ್‌ಎಲ್ ಇಲ್ಲಿ ಇಲೆಕ್ಟ್ರಿಕಲ್ ಮೆಂಟೈನೆನ್ಸ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು,ವಾರದ ರಜಾದಿನವಾದ ಗುರುವಾರದಂದು ಮನೆಯಲ್ಲಿ ಇದ್ದ ವೇಳೆ ಕೆರೆಯ ಪಾಚಿ ತೆಗೆಯಲು ಹೋಗಿದ್ದರು.ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟರು.

ಖುಷಿಯ ಜತೆಗೆ ಆಘಾತ
ಎರಡು ವರ್ಷಗಳ ಹಿಂದೆ ಗೋಪಾಲಕೃಷ್ಣ ಹಾಗೂ ಅವರ ಸಹೋದರ ದೇವಿ ಪ್ರಸಾದ್ ಅವರಿಗೆ ವಿವಾಹವಾಗಿದ್ದು,ದೇವಿ ಪ್ರಸಾದ್ ಅವರ ಪತ್ನಿಗೆ ಎ.27ರಂದು ಹೆರಿಗೆ ಆಗಿದ್ದು,ಗೋಪಾಲಕೃಷ್ಣ ಅವರ ಪತ್ನಿ ಗರ್ಭಿಣಿಯಾಗಿದ್ದಾರೆ. ಖುಷಿಯ ನಡುವೆ ಗೋಪಾಲಕೃಷ್ಣ ಅವರ ನಿಧನ ಕುಟುಂಬಕ್ಕೆ ಆಘಾತ ತಂದಿಟ್ಟಿದೆ.ಗೋಪಾಲಕೃಷ್ಣ ಅವರ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೃತ ಗೋಪಾಲಕೃಷ್ಣ ಅವರು ಚೆನ್ನಾವರ ಅಭ್ಯುದಯ ಯುವಕ ಮಂಡಲದ ಸಕ್ರೀಯ ಸದಸ್ಯರಾಗಿದ್ದು,ಯುವಕ ಮಂಡಲದ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.

ಮೃತರು ತಂದೆ ಮೋನಪ್ಪ ನಾಯ್ಕ,ಪತ್ನಿ ಚೆನ್ನಾವರ ಶಾಲೆಯ ಅತಿಥಿ ಶಿಕ್ಷಕಿ ಹರಿಣಾಕ್ಷಿ ,ತಮ್ಮ ದೇವಿಪ್ರಸಾದ್,ತಂಗಿ ಪ್ರಮೀಳಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಹಲವಾರು ಗಣ್ಯರು ಆಗಮಿಸಿ,ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.ಸೌಮ್ಯ ಸ್ವಭಾವದ ಗೋಪಾಲಕೃಷ್ಣ ಅವರ ನಿಧನದಿಂದ ಚೆನ್ನಾವರ ಪರಿಸರದಲ್ಲಿ ನೀರವ ಮೌನ ಆವರಿಸಿದೆ.

LEAVE A REPLY

Please enter your comment!
Please enter your name here